ಭೋಪಾಲ್ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ: ನಾಲ್ಕು ಮಕ್ಕಳು ಸಜೀವ ದಹನ
ಭೋಪಾಲ್, ನವೆಂಬರ್ 9: ಮಧ್ಯಪ್ರದೇಶದ ಭೋಪಾಲ್ನ ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್ನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡು ನಾಲ್ಕು ಮಕ್ಕಳು ಸಜೀವ ದಹನವಾದ ದಾರುಣ ಘಟನೆ ನಡೆದಿದೆ. ಪೀಡಿಯಾಟ್ರಿಕ್ ಐಸಿಯು ಹೊಂದಿರುವ ಆಸ್ಪತ್ರೆಯ ಕಟ್ಟಡದ ಮೂರನೇ ಮಹಡಿಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ 40 ಮಕ್ಕಳನ್ನು ಐಸಿಯು ವಾರ್ಡ್ಗೆ ದಾಖಲಿಸಲಾಗಿದ್ದು, ಈ ಪೈಕಿ 36 ಮಕ್ಕಳನ್ನು ಬೇರೆ ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ನಾಲ್ಕು ಮಕ್ಕಳನ್ನು ಉಳಿಸಲಾಗಲಿಲ್ಲ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ''ಭೋಪಾಲ್ನ ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್ನಲ್ಲಿ ಬೆಂಕಿ ಅವಘಡ ಸಂಭವಿಸಿರುವುದು ದುಃಖಕರವಾಗಿದೆ. ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ವಿಶೇಷ ನವಜಾತ ಶಿಶು ಆರೈಕೆ ಘಟಕ (ಎಸ್ಎನ್ಸಿಯು) ವಾರ್ಡ್ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ನಾವು ಇತರರೊಂದಿಗೆ ಸ್ಥಳಕ್ಕೆ ಬಂದೆವು, ವಾರ್ಡ್ನ ಒಳಗೆ ಕತ್ತಲೆಯಾಗಿತ್ತು, ನಾವು ಮಕ್ಕಳನ್ನು ಪಕ್ಕದ ವಾರ್ಡ್ಗೆ ಸ್ಥಳಾಂತರಿಸಿದ್ದೇವೆ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ತನಿಖೆ ಎಸಿಎಸ್ ಸಾರ್ವಜನಿಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಮೊಹಮ್ಮದ್ ಸುಲೇಮಾನ್ ಅವರು ಮಾಡುತ್ತಾರೆ ಎಂದಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಆದರೆ ಈಗಾಗಲೇ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕೆಲವು ಮಕ್ಕಳನ್ನು ಉಳಿಸಲು ಸಾಧ್ಯವಾಗಲಿಲ್ಲ,'' ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
"ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ, ಮೊಹಮ್ಮದ್ ಸುಲೇಮಾನ್ ಅವರು ತನಿಖೆ ನಡೆಸುತ್ತಾರೆ. ಮಕ್ಕಳ ಅಕಾಲಿಕ ಅಗಲಿಕೆಯು ಸಹಿಸಲಾರದ ನೋವು, ಅಗಲಿದ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ಮಕ್ಕಳ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ, ಇದು ನನ್ನ ಹಾರೈಕೆ. . ಓಂ ಶಾಂತಿ," " ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಜೊತೆಗೆ ಸಂತ್ರಸ್ತರ ಕುಟುಂಬಕ್ಕೆ ಮುಖ್ಯಮಂತ್ರಿಗಳು ತಲಾ ₹ 4 ಲಕ್ಷ ಪರಿಹಾರ ಘೋಷಿಸಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು 8 ರಿಂದ 10 ಅಗ್ನಿಶಾಮಕ ಟೆಂಡರ್ಗಳು ಸ್ಥಳಕ್ಕೆ ಧಾವಿಸಿದವು ಎಂದು ಫತೇಘರ್ ಅಗ್ನಿಶಾಮಕ ಠಾಣೆಯ ಉಸ್ತುವಾರಿ ಜುಬೇರ್ ಖಾನ್ ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ವಾರ್ಡ್ನಿಂದ ತಪ್ಪಿಸಿಕೊಂಡ ಪೋಷಕರು ಆಸ್ಪತ್ರೆಯ ಮೆಟ್ಟಿಲುಗಳ ಮೇಲಿನಿಂದ ಬೀಳುತ್ತಿರುವ ದೃಶ್ಯಗಳು ನಿಜವಾಗಲೂ ಆಘಾತಗೊಳಿಸಿವೆ. ಬೆಂಕಿ ಆವರಿಸುತ್ತಿದ್ದಂತೆ ಪೋಷಕರು ಮತ್ತು ಮಕ್ಕಳು ಆತಂಕಗೊಂಡು ಓಡಿದ್ದಾರೆ. ಏಕಾಏಕಿ ಓಡಿಹೋಗಲು ಪ್ರಯತ್ನಿಸುತ್ತಿದ್ದಂತೆ ಪೋಷಕರು ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಕೆಲ ಮಕ್ಕಳಿಗೆ ಹಾಕಿದ ಆಕ್ಸಿಜನ್ ಕಿತ್ತು ಪೋಷಕರು ಹೊರತಂದಿರುವ ಕರುಣಾಜನಕವಾಗಿತ್ತು. ತ್ವರಿತಗತಿಯಲ್ಲಿ ಮಕ್ಕಳನ್ನು ರಕ್ಷಿಸಲಾಗಿದೆ. ಆದ್ರೆ ದುರಾದೃಷ್ಟವಶಾತ್ ನಾಲ್ವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಖಾನ್ ಹೇಳಿದ್ದಾರೆ.
अस्पताल के चाइल्ड वार्ड में आग की घटना बेहद दुखद है। बचाव कार्य तेजी से हुआ, आग पर काबू पा लिया गया, लेकिन दुर्भाग्यवश पहले से गंभीर रूप से बीमार होने पर भर्ती तीन बच्चों को नहीं बचाया जा सका।
— Shivraj Singh Chouhan (@ChouhanShivraj) November 8, 2021
ಘಟನೆಯನ್ನು "ತುಂಬಾ ನೋವಿನಿಂದ ಕೂಡಿದೆ" ಎಂದು ವಿಷಾದ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಕಮಲ್ ನಾಥ್, ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ವಿಷ್ಣು ದತ್ ಶರ್ಮಾ ಕೂಡ ಘಟನೆಗೆ ಸಂತಾಪ ಸೂಚಿಸಿ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.