2100 ರೂ. ಹಣಕ್ಕೆ ನಡೆಯಿತು ಜಗಳ: 15 ವಾಹನಕ್ಕೆ ಬೆಂಕಿ, 11 ಜನಕ್ಕೆ ಗಾಯ
ಭೋಪಾಲ್, ಮೇ 28: ಸಣ್ಣ ಸಣ್ಣ ವಿಚಾರಗಳಿಗೆ ಶುರುವಾಗುವ ಜಗಳ ಕೆಲವೊಮ್ಮೆ ದೊಡ್ಡ ಹಾನಿಯನ್ನೇ ಉಂಟು ಮಾಡುತ್ತವೆ. ಪ್ರತಿಷ್ಠೆಯ ವಿಚಾರ ಬಂದಾಗ ಮನುಷ್ಯ ಯಾವ ಮಟ್ಟಕ್ಕೆಲ್ಲ ಇಳಿಯಬಹುದು ಎನ್ನುವುದಕ್ಕೆ ಇಲ್ಲಿ ನಡೆದಿರುವ ಘಟನೆ ಒಂದು ಉದಾಹರಣೆ.
ಕೇವಲ 2,100 ರೂ. ಹಣಕ್ಕಾಗಿ ಎರಡು ಕುಟುಂಬಗಳ ನಡುವೆ ಶುರುವಾದ ಜಗಳದಲ್ಲಿ 11 ಜನ ಗಾಯಗೊಂಡು, 15 ವಾಹನಗಳಿಗೆ ಬೆಂಕಿ ಹಂಚಿರುವ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮೊವ್ ತಹಸಿಲ್ ವ್ಯಾಪ್ತಿಯ ದಾತೋಡಾ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರಡು ಕುಟುಂಬಗಳ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. 11 ಜನ ಗಾಯಗೊಂಡಿದ್ದು, 15 ಬೈಕ್ಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದು, ಗ್ರಾಮದಲ್ಲಿ ಹೆಚ್ಚಿನ ಘರ್ಷಣೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಗಳ ಶುರು ಮಾಡಿದ್ದ ಕಿಶೋರ್
ಕಿಶೋರ್ ಚೋಹನ್ ತನ್ನ ಎಂಟು ಜನ ಸಂಬಂಧಿರೊಂದಿಗೆ ನರೇಂದ್ರ ಮುಂಡೇಲ್ ಎನ್ನುವವನ ಜೊತೆ 2,100 ರೂ. ಹಣಕ್ಕಾಗಿ ವಾಗ್ವಾದ ನಡೆಸಿದ್ದಾನೆ. ವಾಗ್ವಾದ ವಿಕೋಪಕ್ಕೆ ತಿರುಗಿ ಕಿಶೋರ್ ಮತ್ತು ಸಂಬಂಧಿಕರು ಮುಂಡೇಲ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆಗೆ ಕಲ್ಲು ತೂರಿದ್ದಾರೆ. ಮನೆಯ ಹೊರಗೆ ನಿಲ್ಲಿಸಿದ್ದ ಮೋಟಾರ್ ಸೈಕಲ್ ಮತ್ತು ಕಾರಿಗೆ ಹಾನಿಯಾಗಿದೆ ಎಂದು ಸಿಮ್ರೋಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಧರ್ಮೇಂಧ್ರ ಶಿವಾರೆ ಮಾಹಿತಿ ನೀಡಿದ್ದಾರೆ.
ತನ್ನ ಗುಂಪಿನವರೊಂದಿಗೆ ನರೇಂದ್ರ ದಾಂಧಲೆ
ಇದರಿಂದ ಆಕ್ರೋಶಗೊಂದ ನರೇಂದ್ರ ಮುಂಡೆಲ್ ತನ್ನ ಕಡೆಯ 90 ಜನರ ಗುಂಪಿನೊಂದಿಗೆ ಕತ್ತಿ, ದೊಣ್ಣೆ, ರಾಡ್ಗಳಿಂದ ದಲಿತ ಕಾಲೋನಿಯ ಚೋಹನ್ ಮತ್ತು ಆತನ ಸಂಬಂಧಿಕರ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಕನಿಷ್ಠ 14 ಬೈಕ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಘರ್ಷಣೆಯಲ್ಲಿ ಶಂಕರಲಾಲ್ ಚೋಹನ್, ಅರ್ಜುನ್ ದೇವ್ಡಾ, ಸುರೇಂದ್ರ ಚೋಹನ್, ಪ್ರಹ್ಲಾದ್, ನಾಲ್ಕು ವರ್ಷದ ಬಾಲಕ ಹಿಮಾಂಶಿ ಚೋಹನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೂರು ದಾಖಲು
ಘರ್ಷಣೆಗೆ ಸಂಬಂಧಿಸಿದಂತೆ ಕಿಶೋರ್ ಹಲ್ಲೆ ಮಾಡಿದ ನರೇಂದ್ರ ಮತ್ತು ಇತರ 85 ಜನರ ವಿರುದ್ಧ ದೂರು ನೀಡಿದ್ದಾನೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತರ ಗುಂಪು ಕೂಡ ದೂರು ದಾಖಲಿಸಿದೆ, ನಂತರ ಕಿಶೋರ್ ಚೋಹನ್ ಮತ್ತು ಇತರ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಶಿಕಾಂತ ಕಂಕಣೆ ಪ್ರತಿಕ್ರಿಯೆ ನೀಡಿದ್ದು ಪೊಲೀಸರ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಾಳಿಯಲ್ಲಿ ಸುಮಾರು ಹನ್ನೆರಡು ಜನಕ್ಕೆ ಗಾಯಗಳಾಗಿದೆ. ಪೊಲೀಸರ ಸಮಯೋಚಿತ ಕ್ರಮದಿಂದ ಪರಿಸ್ಥಿತಿ ಶಾಂತವಾಗಿದೆ. ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications