ಬಾಬ್ರಿ ಮಸೀದಿ ಕುರಿತು ಹೇಳಿಕೆ: ಪ್ರಜ್ಞಾ ಠಾಕೂರ್ ವಿರುದ್ಧ ಎಫ್ಐಆರ್ಗೆ ಆದೇಶ
ಭೋಪಾಲ್, ಏಪ್ರಿಲ್ 23: ಬಾಬ್ರಿ ಮಸೀದಿ ಕುರಿತು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಸಾದ್ವಿ ಪ್ರಜ್ಞಾ ಠಾಕೂರ್ ಅವರಿಗೆ ಮುಳುವಾಗಿದೆ.
ಬಾಬ್ರಿ ಮಸೀದಿ ದ್ವಂಸ ಕುರಿತ ಪ್ರಜ್ಞಾ ಠಾಕೂರ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಅಧಿಕಾರಿಯೊಬ್ಬರು ಸಾದ್ವಿ ಪ್ರಜ್ಞಾ ಠಾಕೂರ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಕಾರ್ಯದಲ್ಲಿ ನಾನು ಪಾಲ್ಗೊಂಡಿದ್ದೆ, ಗುಮ್ಮಟದ ಮೇಲೆ ಹತ್ತಿ ಮಸೀದಿಯನ್ನು ಧ್ವಂಸ ಮಾಡುವ ಕಾರ್ಯದಲ್ಲಿ ನಾನು ನಿರತನಾಗಿದ್ದೆ, ಬಾಬ್ರಿ ಮಸೀದಿ ಧ್ವಂಸ ಮಾಡುವ ಕಾರ್ಯದಲ್ಲಿ ಪಾಲ್ಗೊಂಡಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಪ್ರಜ್ಞಾ ಠಾಕೂರ್ ಹೇಳಿದ್ದರು.

ಬಾಬ್ರಿ ಮಸೀದಿ ಧ್ವಂಸ ಮಾಡುವ ಅವಕಾಶವನ್ನು ದೇವರು ನನಗೆ ಕೊಟ್ಟಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ, ನಾವು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಿಯೇ ತೀರುತ್ತೇವೆ ಎಂದು ಭಾನುವಾರ ಪ್ರಜ್ಞಾ ಠಾಕೂರ್ ಅವರು ಮಾಧ್ಯಮದೊಟ್ಟಿಗೆ ಮಾತನಾಡಿ ಈ ಹೇಳಿಕೆ ನೀಡಿದ್ದರು.
ಪ್ರಜ್ಞಾ ಠಾಕೂರ್ ಅವರು ಎರಡು ಕೋಮುಗಳ ಮಧ್ಯೆ ದ್ವೇಷ ಹೆಚ್ಚಿಸುವ ಮತ್ತು ಆತಂಕ ತಂದೊಡ್ಡುವ ಮಾತುಗಳನ್ನಾಡಿದ್ದಾರೆ ಚುನಾವಣಾ ಆಯೋಗವು ಪ್ರಜ್ಞಾ ಠಾಕೂರ್ ಅವರಿಗೆ ಈ ಕುರಿತು ನೊಟೀಸ್ ಜಾರಿ ಉತ್ತರಕ್ಕೆ ನಿರೀಕ್ಷಿಸಿತ್ತು, ನೊಟೀಸ್ಗೆ ಉತ್ತರಿಸಿದ ಪ್ರಜ್ಞಾ ಠಾಕೂರ್, ನಾನು ಅಲ್ಲಿಗೆ ಹೋಗಿದ್ದು ನಿಜ, ಅದರ ಬಗ್ಗೆ ಹೇಳಿದ್ದು ನಿಜ, ನನ್ನ ಮಾತುಗಳಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದರು.
ಪ್ರಜ್ಞಾ ಠಾಕೂರ್ ಅವರ ಉತ್ತರದ ಬಳಿಕ ಚುನಾವಣಾ ಅಧಿಕಾರಿಯು ಪ್ರಜ್ಞಾ ಠಾಕೂರ್ ಅವರ ವಿರುದ್ಧ ಎರಡು ಕೋಮುಗಳ ಮಧ್ಯೆ ದ್ವೇಷ ಹಾಗೂ ಆತಂಕ ಹೆಚ್ಚಿಸುವ ಯತ್ನ ಆರೋಪದಡಿ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ಸೂಚಿಸಿದ್ದರು.
ಪ್ರಜ್ಞಾ ಠಾಕೂರ್ ಅವರು ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇವರು ಮಾಲೆಂಗಾವ್ ಸ್ಫೋಟದ ಪ್ರಮುಖ ಆರೋಪಿ ಸಹ ಆಗಿದ್ದರು. ಪ್ರಜ್ಞಾ ಠಾಕೂರ್ ಅವರು ಕಾಂಗ್ರೆಸ್ನ ದಿಗ್ವಿಜಯ್ ಸಿಂಗ್ ಅವರನ್ನು ಎದುರಿಸಲಿದ್ದಾರೆ.












Click it and Unblock the Notifications