ಮಾನಹಾನಿ ಪ್ರಕರಣ: ಮಮತಾ ಬ್ಯಾನರ್ಜಿ ಅಳಿಯನಿಗೆ ಸಮನ್ಸ್ ಜಾರಿ ಮಾಡಿದ ಭೋಪಾಲ್ ಕೋರ್ಟ್
ಭೋಪಾಲ್, ಏಪ್ರಿಲ್ 1: ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯ ಪುತ್ರ, ಶಾಸಕ ಆಕಾಶ್ ವಿಜಯವರ್ಗಿಯ ಅವರು ಸಲ್ಲಿಸಿದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 1 ರಂದು ತನ್ನ ಮುಂದೆ ಹಾಜರಾಗುವಂತೆ ಮಧ್ಯಪ್ರದೇಶದ ಭೋಪಾಲ್ ನ್ಯಾಯಾಲಯ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಸಮನ್ಸ್ ಜಾರಿಗೊಳಿಸಿದೆ.
ದೂರುದಾರ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದ ನಂತರ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯ ಅಭಿಷೇಕ್ ಬ್ಯಾನರ್ಜಿಗೆ ಸಮನ್ಸ್ ಜಾರಿಗೊಳಿಸಿದೆ ಎಂದು ಆಕಾಶ್ ವಿಜಯವರ್ಗಿಯ ಪರ ವಕೀಲ ಶ್ರೇಯರಾಜ್ ಸಕ್ಸೇನಾ ತಿಳಿಸಿದ್ದಾರೆ.
"ದೂರುದಾರ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದ ನಂತರ, ನ್ಯಾಯಾಲಯವು ಅಭಿಷೇಕ್ ಬ್ಯಾನರ್ಜಿ ಅವರಿಗೆ ಮೇ 1ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದೆ. ಮಾನಹಾನಿ ಪ್ರಕರಣವನ್ನು 2020ರ ಡಿಸೆಂಬರ್ನಲ್ಲಿ ಸಿಜೆಎಂ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ ಎಂದು ಶ್ರೇಯರಾಜ್ ಸಕ್ಸೇನಾ ಹೇಳಿದರು.
"ನವೆಂಬರ್ 25, 2020 ರಂದು ಡೈಮಂಡ್ ಹಾರ್ಬರ್ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ಚುನಾವಣೆಗೆ ಮುಂಚಿತವಾಗಿ ಕಾನೂನು ಬಾಹಿರವಾಗಿ ರಾಜಕೀಯ ಮೈಲೇಜ್ ಪಡೆಯಲು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರನ್ನು ಹೊರಗಿನವನೆಂದು ಬಣ್ಣಿಸಿದ್ದರು. ಅಲ್ಲದೆ ಅವರ ಪುತ್ರ ಆಕಾಶ್ ವಿಜಯವರ್ಗಿಯ ಅವರನ್ನು ಗೂಂಡಾ ಎಂದಿದ್ದರು ಎಂದು ದೂರು ನೀಡಲಾಗಿದೆ.
ಕೈಲಾಶ್ ವಿಜಯವರ್ಗಿಯ ಅವರ ಪುತ್ರ ಆಕಾಶ್ ವಿಜಯವರ್ಗಿಯಾ ಅವರು ಮಧ್ಯಪ್ರದೇಶದ ಇಂದೋರ್-3 ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಇಂದು ಪಶ್ಚಿಮ ಬಂಗಾಳದ ಹೈ-ವೋಲ್ಟೇಜ್ ವಿಧಾನಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
Recommended Video
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ