ನಾನು ದಿನಾ ಗಂಜಲ ಕುಡಿಯುತ್ತೇನೆ. ಹೀಗಾಗೇ ಕೊರೊನಾ ಬಂದಿಲ್ಲ; ಪ್ರಗ್ಯಾ ಸಿಂಗ್
ಭೋಪಾಲ್, ಮೇ 17: ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಇದೀಗ ಕೊರೊನಾ ಸೋಂಕಿನ ನಿವಾರಣೆ ಕುರಿತೂ ಅಂಥದ್ದೊಂದು ಹೇಳಿಕೆ ನೀಡಿದ್ದಾರೆ.
ಹಸುವಿನ ಗಂಜಲ ಸೇವನೆ ಶ್ವಾಸಕೋಶದ ಸೋಂಕನ್ನು ನಿವಾರಿಸಬಲ್ಲದು ಎಂದು ಅವರು ಹೇಳಿದ್ದು, "ನಾನು ಪ್ರತಿ ದಿನ ಗಂಜಲ ಕುಡಿಯುತ್ತೇನೆ. ಅದು ನನಗೆ ಕೊರೊನಾ ಸೋಂಕಿನಿಂದ ರಕ್ಷಣೆ ನೀಡಿದೆ" ಎಂದು ಹೇಳಿದ್ದಾರೆ.
ಪ್ರಗ್ಯಾ ಸಿಂಗ್ಗೆ ಉಸಿರಾಟ ಸಮಸ್ಯೆ; ಏರ್ಲಿಫ್ಟ್ ಮೂಲಕ ಮುಂಬೈ ಆಸ್ಪತ್ರೆಗೆ ದಾಖಲು
"ನಾವು ದಿನನಿತ್ಯ ದೇಸಿ ಗೋಮೂತ್ರ ಸೇವಿಸುವುದರಿಂದ ಶ್ವಾಸಕೋಶದ ಸೋಂಕನ್ನು ನಿವಾರಿಸಬಹುದು. ನಾನು ದಿನವೂ ಗಂಜಲ ಕುಡಿಯುತ್ತೇನೆ. ಹೀಗಾಗಿ ಕೊರೊನಾ ಸೋಂಕಿನ ವಿರುದ್ಧ ನಾನು ಯಾವುದೇ ಔಷಧಿ ತೆಗೆದುಕೊಳ್ಳುವುದಿಲ್ಲ. ನನಗೆ ಕೊರೊನಾ ಸೋಂಕು ಕೂಡ ಬಂದಿಲ್ಲ" ಎಂದಿದ್ದಾರೆ. ಎರಡು ವರ್ಷದ ಹಿಂದೆಯೂ ಪ್ರಗ್ಯಾ ಗಂಜಲದ ಕುರಿತು ಮಾತನಾಡಿದ್ದರು. ಗಂಜಲ ಸೇವನೆಯಿಂದ ತಮಗಿದ್ದ ಕ್ಯಾನ್ಸರ್ ವಾಸಿಯಾಯಿತೆಂದು ಹೇಳಿದ್ದರು.
ತಿಂಗಳ ಹಿಂದಷ್ಟೇ ಉತ್ತರ ಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಕೂಡ ಹಸುವಿನ ಗಂಜಲ ಕುಡಿಯುವುದರಿಂದ ಕೊರೊನಾದಿಂದ ರಕ್ಷಣೆ ಪಡೆಯಬಹುದು ಎಂದು ಹೇಳಿದ್ದರು. ಆದರೆ ಕೊರೊನಾ ಸೋಂಕಿಗೆ ಸಗಣಿ ಅಥವಾ ಗಂಜಲ ಉಪಯುಕ್ತ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ ಎಂದು ಭಾರತೀಯ ವೈದ್ಯಕೀಯ ಪ್ರಾಧಿಕಾರ ತಿಳಿಸಿದೆ.
ಕಳೆದ ಡಿಸೆಂಬರ್ನಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.