'ಕಾಮೆಡಿ ಶೋ ಮಾಡಲು ರಾಹುಲ್ ಗಾಂಧಿಯನ್ನು ಕರೆಯಲಿ': ಮಧ್ಯಪ್ರದೇಶ ಸಚಿವ
ಭೋಪಾಲ್, ಡಿಸೆಂಬರ್ 14: ಸ್ಟಾಂಡ್ ಅಪ್ ಕಾಮೆಡಿ ಸ್ಟಾರ್ ಕುನಾಲ್ ಕಮ್ರಾ ಮತ್ತು ಮುನಾವರ್ ಫರುಕಿರನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದು ಮಧ್ಯ ಪ್ರದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನಿಗದಿಯಾಗಿದ್ದ ಕುನಾಲ್ ಕಮ್ರಾ ಮತ್ತು ಮುನಾವರ್ ಫರುಕಿ ಕಾರ್ಯಕ್ರಮಗಳು ಬಿಜೆಪಿ ಸರ್ಕಾರ ಹಾಗೂ ಬಲಪಂಥೀಯ ಗುಂಪುಗಳ ಒತ್ತಡದಿಂದಾಗಿ ರದ್ದಾದ ಹಲವಾರು ಘಟನೆಗಳು ಈ ಹಿಂದೆ ನಡೆದಿದೆ. ಈಗ ದಿಗ್ವಿಜಯ್ ಸಿಂಗ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದಕ್ಕೆ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ ವ್ಯಂಗ್ಯವಾಗಿ, "ಕಾಮೆಡಿ ಶೋ ಮಾಡುವುದಾದರೆ ರಾಹುಲ್ ಗಾಂಧಿಯನ್ನು ಕರೆಯಲಿ," ಎಂದಿದ್ದಾರೆ.
ಆಕ್ಷೇಪಾರ್ಹ ಆಡಿಯೋ-ವಿಡಿಯೋ ಹಾಗೂ ಬರವಣಿಗೆಗಳ ವಿರುದ್ಧವಾಗಿ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ನಿರಂತರವಾಗಿ ವಾಕ್ಸಮರ ನಡೆಸುತ್ತಲೇ ಇದ್ದಾರೆ. ಹಾಗೆಯೇ ಪೊಲೀಸ್ ಪ್ರಕರಣ ದಾಖಲು ಮಾಡುವ ಎಚ್ಚರಿಕೆಯನ್ನು ಕೂಡಾ ನೀಡುತ್ತಾ ಬಂದಿದ್ದಾರೆ. ಈಗ ಕುನಾಲ್ ಕಮ್ರಾ ಮತ್ತು ಮುನಾವರ್ ಫರುಕಿಗೂ ಅದೇ ಎಚ್ಚರಿಕೆಯನ್ನು ನೀಡಿದ್ದಾರೆ. ಹಿಂದೂ ಧರ್ಮದ ದೇವರುಗಳನ್ನು ತಮಾಷೆ ಮಾಡಿದರೆ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಬೆಂಗಳೂರು:ಫಾರೂಖಿ ಬಳಿಕ ಸ್ಟ್ಯಾಂಡ್-ಅಪ್ ಕಮೆಡಿಯನ್ ಕುನಾಲ್ ಕಾಮ್ರಾ ಶೋ ರದ್ದು
"ಹಿಂದೂ ಧರ್ಮ, ಹಿಂದೂ ಧರ್ಮದ ದೇವತೆ, ದೇವರುಗಳನ್ನು ಅವಮಾನ ಮಾಡಿ ಯಾರೇ ಕಾರ್ಯಕ್ರಮವನ್ನು ಮಾಡಿದರೂ ಕೂಡಾ ಅವರನ್ನು ಜೈಲಿಗೆ ಅಟ್ಟಲಾಗುವುದು. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದರೆ ಯಾವುದೇ ದಾಕ್ಷಿಣ್ಯವಿಲ್ಲದೆಯೇ ಕ್ರಮವನ್ನು ಕೈಗೊಳ್ಳಲಾಗುವುದು," ಎಂದು ಮತ್ತೆ ಎಚ್ಚರಿಕೆಯನ್ನು ನೀಡಿರುವ ನರೋತ್ತಮ್ ಮಿಶ್ರಾ, "ದಿಗ್ವಿಜಯ್ ಸಿಂಗ್ ಜಿ ಅವರು ಕಾಮೆಡಿ ಶೋ ಅನ್ನು ಆಯೋಜನೆ ಮಾಡಲೇ ಬೇಕು ಎಂದು ಬಯಸಿದ್ದರೆ, ಅವರು ರಾಹುಲ್ ಗಾಂಧಿಯನ್ನು ಯಾಕೆ ಕರೆಯ ಬಾರದು," ಎಂದು ವ್ಯಂಗ್ಯವಾಡಿದ್ದಾರೆ.
ಕುನಾಲ್ ಕಮ್ರಾ, ಮುನಾವರ್ ಫರುಕಿಗೆ ದಿಗ್ವಿಜಯ್ ಆಹ್ವಾನ
ಇನ್ನು ಈ ವಿಚಾರದಲ್ಲಿ ಟ್ವೀಟ್ ಮಾಡಿರುವ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, "ಕುನಾಲ್ ಹಾಗೂ ಮುನಾರ್ಗಾಗಿ ನಾನು ಒಂದು ಕಾರ್ಯಕ್ರಮವನ್ನು ಭೋಪಾಲ್ನಲ್ಲಿ ಆಯೋಜನೆ ಮಾಡಲಿದ್ದೇನೆ. ಎಲ್ಲಾ ಜವಾಬ್ದಾರಿಯು ನನ್ನದು ಆಗಿರಲಿದೆ," ಎಂದು ತಿಳಿಸಿದ್ದಾರೆ. "ಸಂಘಿಗಳು (ಆರ್ಎಸ್ಎಸ್ ಕಾರ್ಯಕರ್ತರು) ಇದಕ್ಕೆ ವಿರೋಧ ಮಾಡಬೇಕಾಗಿಲ್ಲ. ಭಯಪಡಬೇಡಿ, ನಿಮಗೆ ಬರಲು ಸಾಧ್ಯವಾಗುವ ದಿನ ಹಾಗೂ ಸಮಯವನ್ನು ತಿಳಿಸಿ," ಎಂದು ಕೂಡಾ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ದಿಗ್ವಿಜಯ್ಗೆ ಕುನಾಲ್ ಕಮ್ರಾ ಪ್ರತಿಕ್ರಿಯೆ
ಇನ್ನು ದಿಗ್ವಿಜಯ್ ಸಿಂಗ್ ಆಹ್ವಾನಕ್ಕೆ ಪ್ರತಿಕ್ರಿಯೆ ನೀಡಿರುವ ಕುನಾಲ್ ಕಮ್ರಾ, "ಸರ್, ಈ ಆಹ್ವಾನಕ್ಕೆ ಧನ್ಯವಾದಗಳು. ನಮಗೆ ಜೀವ ವಿಮೆ ಹಾಗೂ ಹಿಂದಕ್ಕೆ ಬರುವ ಅವಕಾಶ ಇದೆಯೇ ಎಂದು ನಾವು ಪರಿಶೀಲನೆ ಮಾಡುತ್ತಿದ್ದೇವೆ," ಎಂದು ವ್ಯಂಗ್ಯವಾಡಿದ್ದಾರೆ. ಕಮಲ್ ಕಮ್ರಾ ಮತ್ತು ಮುನಾವರ್ ಫರುಕಿ ಇಬ್ಬರೂ ತಮ್ಮ ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡಲಾಗುತ್ತಿಲ್ಲ. ಅಷ್ಟೇ ಅಲ್ಲದೆ ಹಲವಾರು ಕಾರ್ಯಕ್ರಮಗಳು ಬೆದರಿಕೆಯ ಹಿನ್ನೆಲೆ ರದ್ದಾಗುತ್ತಿದೆ.
ಕಮ್ರಾ, ಫರುಕಿ ಹಲವಾರು ಕಾರ್ಯಕ್ರಮಗಳು ರದ್ದು
ಸ್ಟಾಂಡ್ ಅಪ್ ಕಾಮೆಡಿ ಸ್ಟಾರ್ ಕುನಾಲ್ ಕಮ್ರಾ ಮತ್ತು ಮುನಾವರ್ ಫರುಕಿಯ ಹಲವಾರು ಕಾರ್ಯಕ್ರಮಗಳು ಕೊನೆ ಕ್ಷಣದಲ್ಲಿ ರದ್ದಾಗಿರುವ ಘಟನೆಗಳು ನಡೆಯುತ್ತಿದೆ. ಕಳೆದ ವಾರ ಆಯೋಜಕರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದೆ ಎಂಬ ಕಾರಣಕ್ಕೆ ಮುನಾವರ್ ಫರುಕಿ ಹರಿಯಾಣದಲ್ಲಿ ಕಾರ್ಯಕ್ರಮವನ್ನು ಕೈ ಬಿಟ್ಟಿದ್ದಾರೆ. ಕಾರ್ಯಕ್ರಮಕ್ಕೆ ಅವಕಾಶ ನೀಡಲ್ಲ ಎಂದು ಹೇಳಿ ಟ್ವೀಟ್ ಮಾಡಿದ್ದ ಬಿಜೆಪಿ ನಾಯಕ ಅರುಣ್ ಯಾದವ್, "ನಾವು ಈ ದೇಶದ್ರೋಹಿಗಳ ಕಾರ್ಯಕ್ರಮಕ್ಕೆ ಅವಕಾಶವನ್ನು ನೀಡಲ್ಲ. ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ," ಎಂದಿದ್ದಾರೆ. ನವೆಂಬರ್ ತಿಂಗಳಿನಲ್ಲಿಯೂ ಕರ್ನಾಟಕದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವು ರದ್ದಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಕಳೆದ ಜನವರಿಯಲ್ಲಿ ಮುನಾವರ್ ಫರುಕಿಯನ್ನು ಬಂಧನ ಮಾಡಲಾಗಿದ್ದು, ತಿಂಗಳುಗಳ ಕಾಲ ಫರೂಕಿ ಜೈಲಿನಲ್ಲಿ ಇದ್ದರು. ತನ್ನ ಕಾರ್ಯಕ್ರಮಗಳು ರದ್ದಾಗುತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ಫರುಕಿ, "ನಾನು ಈಗ ವೈರಸ್ನ ರೂಪಾಂತರದಂತೆ ಕಾಣುತ್ತಿದ್ದೇನೆ ಎಂದು ಅನಿಸುತ್ತಿದೆ," ಎಂದು ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)
ಕುನಾಲ್ ಕಮ್ರಾ, ಮುನಾವರ್ ಫರುಕಿ ಆಹ್ವಾನಕ್ಕೆ ತೀವ್ರ ವಿರೋಧ
ಸ್ಟಾಂಡ್ ಅಪ್ ಕಾಮೆಡಿ ಸ್ಟಾರ್ ಕುನಾಲ್ ಕಮ್ರಾ ಮತ್ತು ಮುನಾವರ್ ಫರುಕಿರನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆಹ್ವಾನ ಮಾಡಿರುವುದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ದಿಗ್ವಿಜಯ್ ಸಿಂಗ್ ಪಾಕಿಸ್ತಾನದ ಭಯೋತ್ಪಾದಕರನ್ನು ತನ್ನ ಮನೆಯಲ್ಲಿ ಬಿರಿಯಾನಿ ಪಾರ್ಟಿಗೆ ಆಹ್ವಾನ ಮಾಡಲು ಮುಂದಾಗಿದ್ದಾರೆ. ಅಷ್ಟಕ್ಕೆ ನಾವೆಲ್ಲವೂ ಇದನ್ನು ಒಪ್ಪುತ್ತೇವೆ ಎಂದು ಅರ್ಥವಲ್ಲ," ಎಂದು ಭೋಪಾಲ್ನ ಹುಜುರ್ನ ಶಾಸಕ ರಾಮೇಶ್ವರ್ ಶರ್ಮಾ ಹೇಳಿದ್ದಾರೆ.
Recommended Video