ಮಧ್ಯಪ್ರದೇಶ: ಕೃಷಿ ಕಾಯ್ದೆ ವಿರುದ್ಧ ಹೋರಾಟದಲ್ಲಿ ರಾಕೇಶ್ ತಿಕೈಟ್
ಭೋಪಾಲ್, ಫೆಬ್ರವರಿ.22: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಮಧ್ಯಪ್ರದೇಶದಲ್ಲಿ ನಡೆಯಲಿರುವ ಪ್ರತಿಭಟನೆಗಳಲ್ಲಿ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಭಾಗವಹಿಸಲಿದ್ದಾರೆ.
ಮಾರ್ಚ್.08ರಂದು ಮಧ್ಯಪ್ರದೇಶದ ಶಿಯಾಪುರ್, ರೇವಾ, ದೇವಸ್ ನಲ್ಲಿ ಕೇಂದ್ರ ಸರ್ಕಾರದ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ರಾಕೇಶ್ ತಿಕೈಟ್ ಕೂಡಾ ಭಾಗವಹಿಸಲಿದ್ದಾರೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಕಾರ್ಯದರ್ಶಿ ಅನಿಲ್ ಯಾದವ್ ಮಾಹಿತಿ ನೀಡಿದ್ದಾರೆ.
ವಯನಾಡಿನಲ್ಲಿ ರಾಹುಲ್ ಗಾಂಧಿ ಟ್ರ್ಯಾಕ್ಟರ್ ರ್ಯಾಲಿ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿಯಲ್ಲಿ ಸಾವಿರಾರು ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಧ್ಯಪ್ರದೇಶದಲ್ಲಿ ರಾಕೇಶ್ ತಿಕೈಟ್ ವಿರುದ್ಧ ಕೇಸ್:
ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ವಿರುದ್ಧ 2012ರಲ್ಲಿ ನಡೆದ ಹಿಂಸಾಚಾರ ಮತ್ತು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ವಾರೆಂಟ್ ಬಾಕಿ ಉಳಿದಿದೆ ಎಂದು ಅನುಪ್ಪುರಾ ಠಾಣೆ ಪೊಲೀಸ್ ಮಾಹಿತಿ ನೀಡಿದ್ದಾರೆ.
ಜೈತಾರಿ ಪ್ರದೇಶದಲ್ಲಿ ಪವರ್ ಪ್ಲಾಂಟ್ ಯೋಜನೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅಂದು ರಾಕೇಶ್ ತಿಕೈಟ್ ಕೂಡಾ ಸೇರಿಕೊಂಡಿದ್ದರು. ಈ ಹಿಂದಿನ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕೇಶ್ ತಿಕೈಟ್ ಸೇರಿದಂತೆ 100 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 147(ಹಿಂಸಾಚಾರ), 147(ಮಾರಕಾಸ್ತ್ರಗಳಿಂದ ಹಿಂಸೆ), 149(ಕಾನೂನು ವಿರೋಧಿ ಚಟುವಟಿಕೆ) ಮತ್ತು 307(ಕೊಲೆ ಯತ್ನ ) ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. 2012ರಲ್ಲಿ ಬೇಲ್ ಮೇಲೆ ರಾಕೇಶ್ ತಿಕೈಟ್ ಬಿಡುಗಡೆಯಾಗಿದ್ದರು. ಕೋರ್ಟ್ ಎದುರು ಹಾಜರಾಗದಿದ್ದ ಹಿನ್ನೆಲೆ 2016ರಲ್ಲಿ ಅವರ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಲಾಗಿತ್ತು ಎಂದು ಅನುಪ್ಪುರಾ ಪೊಲೀಸ್ ವರಿಷ್ಠಾಧಿಕಾರಿ ಮಂಗಿಲಾಲ್ ಸೋಲಂಕಿ ತಿಳಿಸಿದ್ದಾರೆ.












Click it and Unblock the Notifications