'ನಂ 1, 2 ಆದೇಶಿಸಿದರೆ 24 ಗಂಟೆಯಲ್ಲಿ ಮಧ್ಯಪ್ರದೇಶ ಸರ್ಕಾರವೂ ಉಡೀಸ್!'
ಭೋಪಾಲ್, ಜುಲೈ 24: "ಬಿಜೆಪಿಯ ಕೇಂದ್ರ ನಾಯಕರು, ಪಕ್ಷದ ನಂ.1 ಮತ್ತು ನಂ.2 ಒಮ್ಮೆ ಆದೇಶಿಸಿದರೆ ಸಾಕು 24 ಗಂಟೆಗಳಲ್ಲಿ ನಿಮ್ಮ ಸರ್ಕಾರ ಬೀಳುತ್ತದೆ" ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಮಧ್ಯಪ್ರದೇಶ ವಿಧಾನಸಭೆ ಪ್ರತಿಪಕ್ಷ ನಾಯಕ, ಬಿಜೆಪಿ ಮುಖಂಡ ಗೋಪಾಲ್ ಭಾರ್ಗವ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ವಿಶ್ವಾಸ ಮತದಲ್ಲಿ ಸೋತು, ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ ಪ್ರಹಸನದ ನಂತರ ಕಾಂಗ್ರೆಸ್ ಆಡಳಿತದಲ್ಲಿರುವ ಮಧ್ಯಪ್ರದೇಶದಲ್ಲೂ ಬಿಜೆಪಿ ಸರ್ಕಾರ ರಚಿಸಲು ಮುಂದಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ಆರು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕ: ಎಲ್ಲಿಗೆ ಯಾರು?
ಅದಕ್ಕೆ ಪ್ರತಿಕ್ರಿಯೆ ನೀಡಿದ ಕಮಲ್ ನಾಥ್, "ನಿಮ್ಮ ಕೇಂದ್ರ ನಾಯಕರಿಂದಾಗಲೀ, ನಂ.1, ನಂ.2 ನಿಂದಾಗಲಿ ನಮ್ಮ ಸರ್ಕಾರವನ್ನು ಅಲ್ಲಾಡಿಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಮಧ್ಯಪ್ರದೇಶದ ನಮ್ಮ ಶಾಸಕರು ಮಾರಾಟಕ್ಕಿಲ್ಲ" ಎಂದು ಖಡಕ್ಕಾಗಿ ಉತ್ತರಿಸಿದರು.
2018 ರಲಲಿ ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 230 ವಿಧಾನಸಭಾ ಕ್ಷೇತ್ರಗಳಲ್ಲಿ 114 ರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಬಹುಮತಕ್ಕೆ ಬೇಕಿದ್ದ ಇನ್ನೆರಡು (116) ಕ್ಷೇತ್ರಗಳಿಗಾಗಿ ಕಾಂಗ್ರೆಸ್ ಪಕ್ಷೇತರರ ಮೊರೆ ಹೋಗಿತ್ತು. ನಂತರ ಬಿಎಸ್ಪಿಯ ಇಬ್ಬರು, ನಾಲ್ವರು ಪಕ್ಷೇತರರು ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದ್ದರು.
ಮೈತ್ರಿ ಸರ್ಕಾರ ಪತನ: ಜೆಡಿಎಸ್ ಪಕ್ಷದ ಮುಂದಿನ ನಡೆ ಏನು?
ಬಿಜೆಪಿ 109 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದರಿಂದ ಸರ್ಕಾರವನ್ನು ಅಸ್ಥಿರಗೊಳಿಸುವುದು ಕಷ್ಟದ ಕೆಲಸವಲ್ಲ. ಆದರೆ ನಾವು ಆ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ ಎಂದು ಈ ಮೊದಲೇ ಮಧ್ಯಪ್ರದೇಶದ ನಿಕಟಪೂರ್ವ ಮುಖ್ಯಮಂತ್ರಿ ಬಿಜೆಪಿಯ ಶಿವರಾಜಸಿಂಗ್ ಚೌಹಾಣ್ ಸ್ಪಷ್ಟಪಡಿಸಿದ್ದರು. ಆದರೆ ಕರ್ನಾಟಕದಲ್ಲಿ ನಡೆದ ಬೆಳವಣಿಗೆಯ ನಂತರ ಈ ಸರ್ಕಾರಕ್ಕೂ ಸಂಕಷ್ಟ ಎದುರಾಗಿದೆ. ಅದೂ ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ 29 ರಲ್ಲಿ ಕೇವಲ 1 ಸ್ಥಾನಗಳಲ್ಲಷ್ಟೇ ಕಾಂಗ್ರೆಸ್ ಗೆಲುವು ಸಾಧಿಸಿತ್ತು.