ಸಂಸದೆ ಪ್ರಜ್ಞಾ ಠಾಕೂರ್ಗೆ ವಿಡಿಯೋ ಕರೆ: ಆರೋಪಿಗಳು ಅಂದರ್
ಭರತ್ಪುರ ಫೆಬ್ರವರಿ 15: ರಾಜಸ್ಥಾನದಲ್ಲಿ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ವಿಡಿಯೊ ಕರೆಗಳಲ್ಲಿ ಅಶ್ಲೀಲ ಕೃತ್ಯಗಳನ್ನು ಮಾಡುವ ಮೂಲಕ ಜನರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಇಬ್ಬರು ಸಹೋದರರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ಗೆ ವಿಡಿಯೋ ಕರೆ ಮಾಡಿ ಬ್ಲಾಕ್ ಮೇಲ್ ಮಾಡಿ ಸಿಕ್ಕಿಬಿದ್ದಿದ್ದಾರೆ.
ಇವರು ಸಂಸದೆ ಪ್ರಜ್ಞಾ ಠಾಕೂರ್ ಅವರಿಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲ ಕೃತ್ಯದ ಮೂಲಕ ಬ್ಲಾಕ್ ಮೇಲ್ ಮಾಡಲು ಯತ್ನಿಸಿದ್ದರು. ಭೋಪಾಲ್ ಸೈಬರ್ ಸೆಲ್ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಚಂದಾ ಗ್ರಾಮದ ನಿವಾಸಿ ರವೀನ್ ಮತ್ತು ಆತನ ಸಹೋದರ ಇಬ್ಬರನ್ನೂ ಹೆಡೆಮುರಿ ಕಟ್ಟಿದ್ದಾರೆ. ಬಳಿಕ ಈ ಪ್ರಕರಣ ಮುನ್ನೆಲೆಗೆ ಬಂದಿದೆ. ಭೋಪಾಲ್ ಸಂಸದರು ಆರೋಪಿಗಳ ವಿರುದ್ಧ ಟಿಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಭರತ್ಪುರ ಐಜಿ ಪ್ರಸನ್ನ ಕುಮಾರ್ ಖಮೇಸ್ರಾ ಹೇಳಿದ್ದಾರೆ. ಸೋಮವಾರ ಭೋಪಾಲ್ ಪೊಲೀಸರು ರಾಜಸ್ಥಾನದ ಸಿಕ್ರಿ ಪೊಲೀಸ್ ಠಾಣೆಯ ಸಹಾಯದಿಂದ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.
'ಕಡಿಮೆ ಮದ್ಯ ಸೇವಿಸಿದರೆ ಅದು ಔಷಧಿಯಾಗುತ್ತದೆ': ಪ್ರಜ್ಞಾ ಠಾಕೂರ್
ವೀಡಿಯೊ ಕರೆಯಲ್ಲಿ ಅಶ್ಲೀಲ ಕೃತ್ಯ
ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಫೆಬ್ರವರಿ 6 ರಂದು ಸಂಜೆ 7 ಗಂಟೆ ಸುಮಾರಿಗೆ ತನ್ನ ಮೊಬೈಲ್ಗೆ ವಾಟ್ಸಾಪ್ನಿಂದ ಪ್ರಜ್ಞಾ ಅವರಿಗೆ ವಿಡಿಯೋ ಕರೆ ಬಂದಿದೆ. ಅವರು ಇದರಲ್ಲಿದ್ದಾರೆಂದು ಬಿಂಬಿಸಲಾಗಿದೆ. ಹುಡುಗಿಯೊಬ್ಬಳು ವಿಡಿಯೋ ಕಾಲ್ ನಲ್ಲಿ ಬಟ್ಟೆ ಬಿಚ್ಚಲು ಶುರು ಮಾಡಿದ್ದಾಳೆ. ಈ ವೇಳೆ ಸಂಸದರು ವಿಡಿಯೋ ಕಾಲ್ ಕಟ್ ಮಾಡುವ ಮೂಲಕ ಅದನ್ನು ತಡೆದರು. ಸ್ವಲ್ಪ ಸಮಯದ ನಂತರ ಇನ್ನೊಂದು ನಂಬರ್ನಿಂದ ಫೋಟೋ ಬಂದಿದೆ. ಫೋಟೋದಲ್ಲಿ ಮೊದಲ ಸಂಖ್ಯೆಯಿಂದ ವೀಡಿಯೊ ಕರೆಯ ಸ್ಕ್ರೀನ್ ಶಾಟ್ ಇತ್ತು. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಆರೋಪಿಗಳು ಸಂಸದೆ ಪ್ರಜ್ಞಾ ಠಾಕೂರ್ ಅವರಿಗೆ ಬೆದರಿಕೆ ಹಾಕಿದ್ದಾರೆ.
ದೂರು ದಾಖಲು
ಇದಾದ ಬಳಿಕ ಆರೋಪಿಗಳು ಮಧ್ಯಾಹ್ನ 2.30ರವರೆಗೂ ಸಂಸದರಿಗೆ ಕರೆ ಮಾಡಿದರೂ ಸಂಸದರು ಫೋನ್ ತೆಗೆಯಲಿಲ್ಲ. ಇದರ ನಂತರ, ಸಂಸದರು ಫೆಬ್ರವರಿ 7 ರಂದು ಭೋಪಾಲ್ನ ಟಿಟಿ ನಗರದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಭೋಪಾಲ್ ಪೊಲೀಸರು ಕರೆ ಮಾಡಿದವರ ಸಂಖ್ಯೆಗಳನ್ನು ಪತ್ತೆಹಚ್ಚಿದರು ಮತ್ತು ಭರತ್ಪುರ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಿ ಮಧ್ಯಪ್ರದೇಶಕ್ಕೆ ಕರೆತಂದಿದ್ದಾರೆ.
ಮದ್ಯಪಾನ ನಿಷೇಧಕ್ಕೆ ಆಗ್ರಹ
ಇತ್ತೀಚೆಗೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಮದ್ಯ ಸೇವನೆಯ ಬಗ್ಗೆ ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದರು. ಆಲ್ಕೋಹಾಲ್ ಅನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಅದು ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೆಚ್ಚು ಸೇವಿಸಿದರೆ ಅದು ವಿಷವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ತಮ್ಮ ಹೇಳಿಕೆಯಲ್ಲಿ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿದ್ದಾರೆ.
ಕ್ಯಾನ್ಸರ್ ವಾಸಿ ಮಾಡಿದ ಗಂಜಲ
ಈ ಹಿಂದೆ ಕೊರೊನಾ ಸೋಂಕಿನ ನಿವಾರಣೆ ಕುರಿತು ಹೇಳಿಕೆ ನೀಡಿದ್ದ ಪ್ರಜ್ಞಾ ಸಿಂಗ್, ಹಸುವಿನ ಗಂಜಲ ಸೇವನೆ ಶ್ವಾಸಕೋಶದ ಸೋಂಕನ್ನು ನಿವಾರಿಸಬಲ್ಲದು ಎಂದಿದ್ದರು. "ನಾನು ಪ್ರತಿ ದಿನ ಗಂಜಲ ಕುಡಿಯುತ್ತೇನೆ. ಅದು ನನಗೆ ಕೊರೊನಾ ಸೋಂಕಿನಿಂದ ರಕ್ಷಣೆ ನೀಡಿದೆ" ಎಂದು ಹೇಳಿದ್ದರು. ಇಷ್ಟೇ ಅಲ್ಲದೆ, ಗಂಜಲ ಸೇವನೆಯಿಂದ ತಮಗಿದ್ದ ಕ್ಯಾನ್ಸರ್ ವಾಸಿಯಾಯಿತೆಂದು ಹೇಳಿ ಅಚ್ಚರಿ ಮೂಡಿಸಿದ್ದರು.