ಮಧ್ಯಪ್ರದೇಶದ ಐಟಿ ದಾಳಿಯಿಂದ ಹೊರಬಿತ್ತು ಲೆಕ್ಕಕ್ಕೆ ಸಿಗದ 281 ಕೋಟಿ
ಮಧ್ಯಪ್ರದೇಶದಲ್ಲಿ ನಡೆದ ಆದಾಯ ತೆರಿಗೆ ದಾಳಿ ಮೂಲಕ 'ವ್ಯಾಪಕವಾದ' ಹಾಗೂ 'ಸಂಘಟಿತವಾದ' ಜಾಲವೊಂದು ಬಯಲಾಗಿದ್ದು, ಲೆಕ್ಕಕ್ಕೆ ಸಿಗದ 281 ಕೋಟಿ ರುಪಾಯಿ ಇದರಲ್ಲಿ ಒಳಗೊಂಡಿತ್ತು ಎಂದು ಆದಾಯ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಹಣದಲ್ಲಿ ಒಂದು ಭಾಗವನ್ನು ಪ್ರಮುಖ ರಾಜಕೀಯ ಪಕ್ಷವೊಂದರ ದೆಹಲಿಯಲ್ಲಿರುವ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇದರಲ್ಲಿ ಹವಾಲಾ (ಕಾನೂನು ಬಾಹಿರ ವ್ಯವಹಾರ) ಮೂಲಕ 20 ಕೋಟಿ ರುಪಾಯಿಯನ್ನು ದೆಹಲಿಯ ತುಘಲಕ್ ರಸ್ತೆಯಲ್ಲಿ ಇರುವ ಹಿರಿಯ ಪದಾಧಿಕಾರಿಯ ಮನೆಯಿಂದ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ರ ಮಾಜಿ ಆಪ್ತ ಕಾರ್ಯದರ್ಶಿ ಪ್ರವೀಣ್ ಕಕ್ಕರ್ ಇಂದೋರ್ ಮನೆ, ಸಲಹೆಗಾರ ರಾಜೇಂದ್ರ ಕುಮಾರ್ ಮಿಗ್ಲಾನಿ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿದ್ದರು. ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ದಾಳಿ ನಡೆಸಲಾಗಿತ್ತು.
ಕೆಲ ದಿನಗಳ ಮೊದಲು ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಾಗಿತ್ತು. ಕರ್ನಾಟಕದಲ್ಲಿ ಅಧಿಕಾರದಲ್ಲಿ ಇರುವ ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟಕ್ಕೆ ಸಂಬಂಧಪಟ್ಟವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ನಡೆದಿತ್ತು. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ಮೈತ್ರಿ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದ್ದರು.