ಯುವತಿ ಮೇಲೆ ಹಲ್ಲೆ: ಜೊಮ್ಯಾಟೋ ಡೆಲಿವರಿ ಬಾಯ್ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 12: ನಗರದಲ್ಲಿ ಆಹಾರ ಪೂರೈಕೆ ತಡವಾಗಿದ್ದನ್ನು ಪ್ರಶ್ನಿಸಿದ ಯುವತಿ ಮೇಲೆ ಜೊಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ನಡೆಸಿದ ಪ್ರಕರಣ ಎರಡು ಆಯಾಮಗಳನ್ನು ಪಡೆದುಕೊಂಡಿದೆ. ಹಲ್ಲೆಗೊಳಗಾದ ಯುವತಿ ರಕ್ತ ಸುರಿಯುತ್ತಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ತಮ್ಮ ವಿಡಿಯೋವನ್ನು ಎಡಿಟ್ ಮಾಡಿ ಬ್ಯಾಂಡೇಜ್ ಅಂಟಿಸಿಕೊಂಡ ನಂತರದ ವಿಡಿಯೋವನ್ನು ಕೂಡ ಹಾಕಿದ್ದರು.
ಯುವತಿ ಹಿತೇಶಾ ಚಂದ್ರಾಣಿ ಅವರ ಪೋಸ್ಟ್ಗೆ ವಿವಿಧ ಬಗೆಯ ಕಾಮೆಂಟ್ಗಳು ವ್ಯಕ್ತವಾಗಿದ್ದವು. ಅನೇಕರು ಅವರ ಪರ ಧ್ವನಿ ಎತ್ತಿದ್ದರು. ಕೂಡಲೇ ಕ್ರಮ ಕೈಗೊಂಡಿದ್ದ ನಗರ ಪೊಲೀಸರು ಆರೋಪಿ ಕಾಮರಾಜ್ನನ್ನು ಬಂಧಿಸಿದ್ದರು. ಜೊಮ್ಯಾಟೋ ಕೂಡ ಆತನನ್ನು ಅಮಾನತು ಮಾಡಿತ್ತು. ಈಗ ಕಾಮರಾಜ್ ಪೊಲೀಸರ ಮುಂದೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಿತೇಶಾ ಆರೋಪಿಸಿರುವಂತೆ ತಾನು ಅವರ ಮೇಲೆ ಹಲ್ಲೆ ನಡೆದಿಲ್ಲ. ಬದಲಾಗಿ ಹಿತೇಶಾ ಅವರೇ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹೊಡೆದಿದ್ದರು ಎಂದು ಕಾಮರಾಜ್ ತಿಳಿಸಿದ್ದಾನೆ. ಮುಂದೆ ಓದಿ.

ತಡವಾಗಿದ್ದಕ್ಕೆ ಕ್ಷಮೆ ಕೋರಿದ್ದೆ
'ನಾನು ಅವರ ಅಪಾರ್ಟ್ಮೆಂಟ್ ಬಾಗಿಲು ತಲುಪಿದಾಗ, ಅವರ ಕೈಗೆ ಆಹಾರ ಪೊಟ್ಟಣ ನೀಡಿದೆ. ಅವರು ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಂಡಿದ್ದರಿಂದ ಹಣ ಪಾವತಿಸಲು ಕಾದು ನಿಂತೆ. ಟ್ರಾಫಿಕ್ ಹಾಗೂ ರಸ್ತೆ ಅಗೆದ ಕಾರಣದಿಂದ ತಡವಾಗಿದ್ದಕ್ಕೆ ಕ್ಷಮೆಯನ್ನೂ ಕೋರಿದೆ. ಆದರೆ ಅವರು ಬಹಳ ಒರಟಾಗಿ ವರ್ತಿಸಿದರು. ಆದರೆ ಆರ್ಡರ್ 40-45 ನಿಮಿಷದಲ್ಲಿ ಬರುತ್ತದೆ ಎಂದು ಹೇಳಲಾಗಿತ್ತು ಎಂದು ವಾದಿಸತೊಡಗಿದರು. ನಾನು ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಈ ಕೆಲಸ ಮಾಡುತ್ತಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಇಂತಹ ಸ್ಥಿತಿ ಎದುರಿಸುವಂತಾಗಿದೆ' ಎಂದು ಕಾಮರಾಜ್ ತಿಳಿಸಿದ್ದಾನೆ.

ಗುಲಾಮ ಎಂದು ಕರೆದರು
'ಆಹಾರ ತೆಗೆದುಕೊಂಡ ಹಿತೇಶಾ, ಹಣ ನೀಡಲು ನಿರಾಕರಿಸಿದರು. ತಾವು ಜೊಮ್ಯಾಟೋ ಚಾಟ್ ಸಪೋರ್ಟ್ ಜತೆ ಮಾತನಾಡುತ್ತಿರುವುದಾಗಿ ಹೇಳಿದರು. ಹಣ ಕಳೆದುಕೊಳ್ಳುವ ಭೀತಿಯಿಂದ ನಾನು ಹಣ ನೀಡುವಂತೆ ಬೇಡಿಕೊಂಡೆ. ಆಗ ಒಂದು ಹಂತದಲ್ಲಿ ಅವರು ನನ್ನನ್ನು 'ಗುಲಾಮ' ಎಂದು ಹೀಯಾಳಿಸಿದರು. 'ನೀನೇನು ಮಾಡ್ತೀಯಾ?' ಎಂದು ಅರಚಾಡಿದರು. ಅದೇ ವೇಳೆ ಜೊಮ್ಯಾಟೋ ಸಪೋರ್ಟ್ ಕಡೆಯಿಂದ ನನಗೆ ಫೋನ್ ಬಂತು. ಆಕೆ ತಮ್ಮ ಕಡೆಯಿಂದ ಆರ್ಡರ್ ರದ್ದು ಮಾಡಿದ್ದಾರೆ ಎಂದು ತಿಳಿಸಿದರು. ಹೀಗಾಗಿ ಆಹಾರದ ಪ್ಯಾಕೆಟ್ ವಾಪಸ್ ನೀಡುವಂತೆ ನಾನು ಕೋರಿದೆ. ಆದರೆ ಅವರು ಅದಕ್ಕೆ ಸಹಕರಿಸಲಿಲ್ಲ' ಎಂದು ವಿವರಿಸಿದ್ದಾನೆ.

ಚಪ್ಪಲಿ ಎಸೆದು ಹೊಡೆದರು
'ಆಕೆಯ ವರ್ತನೆ ನೋಡಿ ಆಹಾರ ವಾಪಸ್ ತೆಗೆದುಕೊಳ್ಳದೆಯೇ ಅಲ್ಲಿಂದ ಹೊರಡಲು ತೀರ್ಮಾನಿಸಿದೆ. ನಾನು ಲಿಫ್ಟ್ ಕಡೆಗೆ ಹೊರಡುವಾಗ ಆಕೆ ಹಿಂದಿಯಲ್ಲಿ ಕೆಟ್ಟದಾಗಿ ಬೈಯಲು ಆರಂಭಿಸಿದರು. ಇದ್ದಕ್ಕಿದ್ದಂತೆ ನನ್ನ ಕಡೆಗೆ ಚಪ್ಪಲಿ ಎಸೆದು ನನಗೆ ಹೊಡೆಯತೊಡಗಿದರು. ಆಕೆಯ ಹೊಡೆತಗಳಿಂದ ತಪ್ಪಿಸಿಕೊಳ್ಳಲು ನನ್ನ ಆತ್ಮರಕ್ಷಣೆಗಾಗಿ ಕೈಗಳನ್ನು ಅಡ್ಡಹಿಡಿದಿದ್ದೆ' ಎಂದು ಹೇಳಿದ್ದಾನೆ.

ಅವರದೇ ಉಂಗುರ ತಾಗಿ ಗಾಯ
'ಆಗ ನನ್ನ ಕೈಗಳನ್ನು ತಳ್ಳಲು ಅವರು ಪ್ರಯತ್ನಿಸಿದರು. ಆಕೆಯ ಕೈಯಲ್ಲಿದ್ದ ಉಂಗುರ ಆಕಸ್ಮಿಕವಾಗಿ ಅವರ ಮೂಗಿಗೆ ತಾಗಿ ರಕ್ತ ಸುರಿಯಲು ಶುರುವಾಯ್ತು. ಆಕೆಯ ಮೂಗನ್ನು ಯಾರಾದರೂ ನೋಡಿದರೆ, ಅದು ಗುದ್ದುವುದರಿಂದ ಆಗುವ ಆಗ ಅಲ್ಲ ಎನ್ನುವುದು ಅರ್ಥವಾಗುತ್ತದೆ. ಹಾಗೆಯೇ ನಾನು ಉಂಗುರ ಧರಿಸುವುದಿಲ್ಲ' ಎಂದು ವಿವರಿಸಿದ್ದಾನೆ. ಹಿತೇಶಾ ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಅವರು ಉಂಗುರ ಧರಿಸಿರುವುದು ಕಾಣಿಸುತ್ತದೆ.

ಮೆಟ್ಟಿಲಿನಿಂದ ಓಡಿ ಹೋದೆ
'ನನಗೆ ಲಿಫ್ಟ್ ಬಳಸಲು ಅವರು ಬಿಡಲಿಲ್ಲ. ಹೀಗಾಗಿ ನಾನು ಮೆಟ್ಟಿಲು ಇಳಿದು ಮೂರನೇ ಮಹಡಿಗೆ ಓಡಿದೆ. ದೆಹಲಿಯ ಜೊಮ್ಯಾಟೋ ಸಪೋರ್ಟ್ ತಂಡ ಕೂಡ ನನಗೆ ಬೆಂಬಲ ನೀಡಿತು. ನಾನು ಎದುರಿಸಿದ ಕಷ್ಟಗಳನ್ನು ವಿವರಿಸಿದ ಬಳಿಕ ನನ್ನ ಕಡೆ ಸಹಾನುಭೂತಿ ವ್ಯಕ್ತಪಡಿಸಿತು. ನನ್ನ ಮುಗ್ಧತೆಯನ್ನು ಸಾಬೀತುಪಡಿಸಲು ಅಲ್ಲಿ ಸಿಸಿಟಿವಿ ದೃಶ್ಯಗಳು ಇಲ್ಲದಿರುವುದು ನನ್ನ ದುರದೃಷ್ಟ' ಎಂದಿದ್ದಾನೆ.
Recommended Video

25,000 ರೂ ಖರ್ಚಾಗಿದೆ
ಬುಧವಾರ ಸಂಜೆ 6.30ರ ಸುಮಾರಿಗೆ ಕಾಮರಾಜ್ನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅತನನ್ನು ಠಾಣೆಗೆ ಕರೆಯಿಸಿ ಸುಮಾರು 2 ಗಂಟೆ ವಿಚಾರಣೆಗೆ ಒಳಪಡಿಸಿದ್ದರು. ಪೊಲೀಸರು ನನ್ನನ್ನು ಚೆನ್ನಾಗಿಯೇ ನಡೆಸಿಕೊಂಡಿದ್ದಾರೆ. ಆದರೆ ನನ್ನ ಬಂಧನ ತಡೆಯಲು ಕಾನೂನು ವೆಚ್ಚವಾಗಿ ಈಗಾಗಲೇ 25,000 ರೂ ಖರ್ಚು ಮಾಡಿದ್ದೇನೆ ಎಂದು ಆತ ಅಳಲು ತೋಡಿಕೊಂಡಿದ್ದಾನೆ.












Click it and Unblock the Notifications