ಹಿತೇಶಾ ಬೆಂಗಳೂರಿಂದ ಪರಾರಿ: ಮಾಜಿ ರೂಮ್ಮೇಟ್ ಹೇಳಿದ ಸ್ಫೋಟಕ ಸಂಗತಿ
ಬೆಂಗಳೂರು, ಮಾರ್ಚ್ 17: ತನ್ನ ವಿರುದ್ಧ ಹಲ್ಲೆ ಆರೋಪ ಮಾಡಿದ್ದ ಯುವತಿ ಮೇಲೆ ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಎಫ್ಐಆರ್ ದಾಖಲಿಸುತ್ತಿದ್ದಂತೆ, ಆರೋಪ ಮಾಡಿದ್ದ ಯುವತಿ ಹಿತೇಶಾ ಚಂದ್ರಾನಿ ಬೆಂಗಳೂರಿನಿಂದ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಜೊತೆಗೆ ಹಿತೇಶಾ ಚಂದ್ರಾನಿ ಮಾಜಿ ರೂಮ್ಮೇಟ್ ಕೂಡ ಆಕೆ ಬಗ್ಗೆ ಸ್ಫೋಟಕ ಸಂಗತಿಯನ್ನು ತಿಳಿಸಿದ್ದಾರೆ. ಉಚಿತವಾಗಿ ಆಹಾರ ಪಡೆದುಕೊಂಡು, ಕಂಪನಿಯವರನ್ನೇ ನಿಂದನೆ ಮಾಡುವುದು ಹಿತೇಶಾ ಅಭ್ಯಾಸವೇ ಆಗಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಎಫ್ ಐಆರ್ ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ನಡೆಸಲು ಹಿತೇಶಾಗೆ ಕರೆ ಮಾಡಿದಾಗ ಆಕೆ ನಗರ ಬಿಟ್ಟು ಹೋಗಿರುವುದಾಗಿ ತಿಳಿದುಬಂದಿದೆ. ಮಹಾರಾಷ್ಟ್ರದಲ್ಲಿರುವ ಸಂಬಂಧಿ ಮನೆಗೆ ತೆರಳಿರುವುದಾಗಿ ಅವರು ಹೇಳಿದ್ದಾರೆ. ಮುಂದೆ ಓದಿ...

"ಹಿತೇಶಾ ಹಿಂದೆಯೂ ಹೀಗೇ ಮಾಡಿದ್ದಳು"
ಹಿತೇಶಾ ಬೆಂಗಳೂರಿನಲ್ಲಿ ನನಗೆ ಮೂರು ವರ್ಷಗಳ ಕಾಲ ರೂಂ ಮೇಟ್ ಆಗಿದ್ದಳು. ಈ ಹಿಂದೆಯೂ ಪಿಜ್ಜಾವನ್ನು ಹೀಗೇ ಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದಳು. ಆಗಲೂ ಹೀಗೇ ಮಾಡುತ್ತಿದ್ದಳು. ಆಹಾರವನ್ನು ಉಚಿತವಾಗಿ ತೆಗೆದುಕೊಳ್ಳುವುದು ಹಾಗೂ ನಿಂದನೆ ಮಾಡುವುದನ್ನು ಮಾಡುತ್ತಿದ್ದಳು ಎಂದು ಹಿತೇಶಾ ಚಂದ್ರಾನಿ ಸ್ನೇಹಿತೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾರ್ಚ್ 15ರಂದು ಹಿತೇಶಾ ವಿರುದ್ಧ ದೂರು ದಾಖಲು
ಸೋಮವಾರವಷ್ಟೆ, ಆರೋಪಿತನಾಗಿದ್ದ ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಹಿತೇಶಾ ಚಂದ್ರಾನಿ ವಿರುದ್ಧ ದೂರು ದಾಖಲಿಸಿದ್ದರು. ಹಿತೇಶಾ ಅವರ ಮೇಲೆ ತಾನು ಹಲ್ಲೆ ನಡೆಸಿಲ್ಲ. ಹಿತೇಶಾ ಅವರೇ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಲು ಪ್ರಯತ್ನಿಸಿದ್ದರು. ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ನನಗೂ ಬೆಂಬಲ ನೀಡಬೇಡಿ, ಹಿತೇಶಾ ಅವರಿಗೂ ಬೆಂಬಲ ನೀಡಬೇಡಿ, ನ್ಯಾಯಕ್ಕಷ್ಟೇ ಬೆಂಬಲ ನೀಡಿ ಎಂದು ವಿಡಿಯೋ ಮಾಡಿ ಕೇಳಿಕೊಂಡಿದ್ದರು.

"ಪೊಲೀಸರ ಮುಂದೆ ಹಾಜರಾಗದಿದ್ದರೆ ಬಂಧನ"
ಎಫ್ಐಆರ್ ಸಂಬಂಧ ವಿಚಾರಣೆ ನಡೆಸಲು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹಿತೇಶಾಗೆ ಕರೆ ಮಾಡಿದಾಗ, ತಾನು ಬೆಂಗಳೂರಿನಲ್ಲಿಲ್ಲ. ಮಹಾರಾಷ್ಟ್ರದ ಸಂಬಂಧಿ ಮನೆಗೆ ಬಂದಿರುವುದಾಗಿ ಹಿತೇಶಾ ತಿಳಿಸಿದ್ದಾರೆ. ಮಹಾರಾಷ್ಟ್ರದಿಂದ ಹಿಂದಿರುಗಿದ ನಂತರ ಹೇಳಿಕೆ ನೀಡುವಂತೆ ಕೇಳಿದ್ದೇವೆ. ಪೊಲೀಸರ ಮುಂದೆ ಅವರು ಹಾಜರಾಗದೇ ಇದ್ದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಮರಾಜ್ಗೆ ರಾಜ್ಯಸಭೆ ಸಂಸದ ಜಿಸಿ ಚಂದ್ರಶೇಖರ್ ಬೆಂಬಲ
ಹಲ್ಲೆ ಆರೋಪ ಎದುರಿಸುತ್ತಿದ್ದ ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ತನ್ನ ಸ್ಥಿತಿಯ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಂತೆ ಕಾಮರಾಜ್ಗೆ ಸಾಕಷ್ಟು ಜನರು ಬೆಂಬಲ ವ್ಯಕ್ತಪಡಿಸಿದ್ದರು. ಕಾಮರಾಜ್ ಪರ ಅಭಿಯಾನವೂ ಆರಂಭಗೊಂಡಿದ್ದು, ಕಾಮರಾಜ್ ಅವರನ್ನು ಕೆಲಸದಿಂದ ವಜಾ ಮಾಡಿದ್ದರ ವಿರುದ್ಧ ಆಕ್ರೋಶ ವ್ಯಕ್ತಗೊಂಡಿತ್ತು. ಆನಂತರ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ವಕೀಲ ವಿಕ್ರಂ ನೇತೃತ್ವದಲ್ಲಿ ದೂರು ದಾಖಲಿಸಲಾಗಿತ್ತು.
ರಾಜ್ಯಸಭೆ ಸಂಸದ ಜಿಸಿ ಚಂದ್ರಶೇಖರ್ ಕೂಡ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು, ಮಾನವೀಯತೆಯ ದೃಷ್ಟಿಯಿಂದ ಜೊಮ್ಯಾಟೊ ಡೆಲಿವರಿ ಕಾಮರಾಜು ಅವರ ಬೆಂಬಲಕ್ಕೆ ನಾನಿದ್ದೇನೆ. ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡ ಜನರಿಗೆ ಎಂದಿಗೂ ಅನ್ಯಾಯವಾಗಬಾರದು. ಹಾಗಾಗಿ ಪೊಲೀಸರು ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕಾಮರಾಜು ಅವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Recommended Video

ಏನಿದು ಘಟನೆ?
ಮಾರ್ಚ್ 9ರ ಮಧ್ಯಾಹ್ನ ಈ ಘಟನೆ ನಡೆದಿತ್ತು. ಆಹಾರ ಆರ್ಡರ್ ಮಾಡಿ ತುಂಬಾ ಸಮಯವಾದರೂ ಡೆಲಿವರಿ ಆಗಿರಲಿಲ್ಲ. ಆರ್ಡರ್ ಕ್ಯಾನ್ಸಲ್ ಮಾಡುವುದಕ್ಕಾಗಿ ಗ್ರಾಹಕ ಸೇವಾ ಕೇಂದ್ರಕ್ಕೆ ಫೋನ್ ಮಾಡುವ ವೇಳೆ ಡೆಲಿವರಿ ಬಾಯ್ ಕಾಮರಾಜ್ ಮನೆಗೆ ಬಂದಿದ್ದ. ತಡವಾಗಿದ್ದರಿಂದ ಕೋಪಗೊಂಡಿದ್ದ ನಾನು ಜೊಮ್ಯಾಟೊದಿಂದ ಕರೆ ಬರುವವರೆಗೂ ಇಲ್ಲಿಯೇ ಇರಿ ಎಂದಿದ್ದಕ್ಕೆ ಆತ ಕೋಪದಿಂದ ಹಲ್ಲೆ ನಡೆಸಿದ್ದ ಎಂದು ಹಿತೇಶಾ ಚಂದ್ರಾನಿ ಎಂಬ ಯುವತಿ ಆರೋಪಿಸಿದ್ದಳು. ಆನಂತರ ಪ್ರಕರಣ ಬೇರೆಯದ್ದೇ ಆಯಾಮ ಪಡೆದುಕೊಂಡಿತ್ತು. ಯುವತಿಯೇ ಕಾಮರಾಜ್ ಮೇಲೆ ಚಪ್ಪಲಿ ಎಸೆದು ಹಲ್ಲೆ ನಡೆಸಿದ್ದಳು ಎಂಬ ಆರೋಪ ಕೇಳಿಬಂದಿತ್ತು.












Click it and Unblock the Notifications