ಮತ್ತೊಬ್ಬ ಕನ್ನಡದ ನಟಿಗೆ ನಾಮ ಹಾಕಿದ್ದಾನಂತೆ ಸ್ವಾಮಿ !
ಬೆಂಗಳೂರು, ಜನವರಿ 11: Rss ನಕಲಿ ನಾಯಕನ ಸೋಗಿನಲ್ಲಿ ಸಿಕ್ಕ ಸಿಕ್ಕವರಿಗೆ ಉಂಡೆ ನಾಮ ತಿಕ್ಕಿರುವ ಯುವರಾಜ್ ಅಲಿಯಾಸ್ ಸ್ವಾಮಿಯ ವಂಚನೆಯ ದಶಾವತಾರಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಬಿಜೆಪಿ ಪವರ್ ಪುಲ್ ನಾಯಕ ಸಂತೋಷ್ ಜೀ ಅಣ್ಣನ ಮಗನ ಹೆಸರಿನಲ್ಲಿ ನಾಮ ಹಾಕಿದ ಬೆನ್ನಲ್ಲೇ ರೂಪದರ್ಶಿ ನಟಿಯೊಬ್ಬಳಿಗೆ ನಾಮ ಹಾಕಿರುವ ಆರೋಪ ಕೇಳಿ ಬಂದಿದೆ.
ನಟಿಗೆ ಟೋಪಿ ಹಾಕಿದ ಸ್ವಾಮಿ !
ಆಕೆ ದೊಡ್ಡ ಪ್ರಶಸ್ತಿ ವಿಜೇತ ನಟಿ. ಸಿನಿಮಾ ರಂಗದಲ್ಲಿ ಪ್ರಶಸ್ತಿ ಪಡೆದಿದ್ದ ನಟಿಗೆ ಹಿರಿಯ ಪತ್ರಕರ್ತರೊಬ್ಬರ ಸಂಪರ್ಕವಿತ್ತು. ನಟಿ ತನ್ನ ಭವಿಷ್ಯದ ಬಗ್ಗೆ ಹಿರಿಯ ಪತ್ರಕರ್ತರ ಸಲಹೆ ಪಡೆಯುತ್ತಿದ್ದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ಬಸವನುಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಮಾತುಕತೆ ನಡೆಸುತ್ತಾರೆ. ಅದೇ ಸಮಯಕ್ಕೆ ಬಿಜೆಪಿಯಿಂದ ಟಿಕೆಟ್ ಪಡೆದರೆ ಪಕ್ಷದ ಹೆಸರಿನಲ್ಲಿ ಗೆದ್ದು ಬರುವುದರಲ್ಲಿ ಅನುಮಾನವೇ ಬೇಡ. ಆದರೆ, ಪಕ್ಷದಿಂದ ಟಿಕೆಟ್ ಗಿಟ್ಟಿಸುವುದು ದೊಡ್ಡ ಕೆಲಸ. ಹೇಗೂ ನಿಮಗೆ ಒಳ್ಳೆಯ ಹೆಸರು ಇದೆ. ಹಿನ್ನೆಲೆ ಕೇಳಿದ ಕೂಡಲೇ ಕೇಂದ್ರ ವರಿಷ್ಠರು ನಿಮ್ಮ ಹೆಸರು ಅಂತಿಮಗೊಳಿಸಿದರೂ ಅಚ್ಚರಿ ಪಡಬೇಕಿಲ್ಲ. ಆದರೆ, ನೀವು ಸ್ಪರ್ಧಿಸುವ ವಿಷಯ ಹಿರಿಯ ನಾಯಕರಿಗೆ ಮುಟ್ಟಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ನಟಿಗೆ ಮೋಸ ಮಾಡುವ ಮುನ್ನ
ಇದೇ ವೇಳೆ ನನಗೆ ಕೇಂದ್ರ ನಾಯಕ ಅಮಿತ್ ಶಾ ಅವರ ಪುತ್ರ ಜೈ ಶಾ ಅವರ ಪರಿಚಯ ಇರುವ ವ್ಯಕ್ತಿ ನನಗೆ ಗೊತ್ತಿದ್ದಾರೆ. ಅವರನ್ನು ಪರಿಚಯ ನಿಮಗೆ ಮಾಡಿಸುತ್ತೇನೆ. ಅವರ ಮುಖಾಂತರ ಭೇಟಿ ಮಾಡಿಸಿದ ಬಳಿಕ ಮುಂದೆ ಏನಾಗುತ್ತೋ ನೋಡಿ ತೀರ್ಮಾನಿಸೋಣ ಎಂದು ಹಿರಿಯ ಪತ್ರಕರ್ತ ಸಲಹೆ ನೀಡಿದ್ದಾರೆ. ಇದಕ್ಕೆ ನಟಿ ಮಣಿ ಒಪ್ಪಿಕೊಂಡಿದ್ದಾರೆ.
ಕೂಡಲೇ ಸ್ವಾಮಿ ಅಲಿಯಾಸ್ ಯುವರಾಜ್ ಅವರನ್ನು ಬಿಜೆಪಿಯ ಸೀನಿಯರ್ ಲೀಡರ್ ಎಂದು ಪರಿಚಯಿಸಿದ್ದಾರೆ. ಮೂವರ ಚರ್ಚೆಯ ಬಳಿಕ ದುಬೈಗೆ ಹೋಗಿ ಪ್ಲಾನ್ ರೂಪಿಸುವ ನಿರ್ಧಾರ ಕೈಗೊಳ್ಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ರಾಜಕೀಯ ನಾಯಕಿಯಾಗುವ ಆಸೆ. ಹೀಗಾಗಿ ನಟನೆ, ನಾಟ್ಯ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಡುವ ತಯಾರಿ ನಡೆಸಿದ್ದರು. ಸ್ವಾಮಿಗೆ ವಿಮಾನ ಟಿಕೆಟ್,, ಹೋಟೆಲ್ ಎಲ್ಲದಕ್ಕೂ ಈ ನಟಿಯೇ ಖರ್ಚು ಮಾಡಿದ್ದರು. ವಂಚಕ ಸ್ವಾಮಿ, ನಟಿಮಣಿ ಹಾಗೂ ಪತ್ರಕರ್ತ ದುಬೈಗೆ ಹೋಗಿ ಕೆಲ ದಿನ ತಂಗಿದ್ದರು. ಇದಕ್ಕಾಗಿ ನಟಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ.
ಸಿಸಿಬಿ ಕಸ್ಟಡಿಯಲ್ಲಿರುವ ಯುವರಾಜ ಆಲಿಯಾಸ್ ಸ್ವಾಮಿ 'ಮುಂಡಾಯಿಸಿದ' ಕಥೆ ಬಗೆದಷ್ಟು
ಆದರೆ, ಅಮಿತ್ ಷಾ ಪುತ್ರ ಜೈ ಶಾ ಭೇಟಿ ಮಾಡಿಸಿಲ್ಲ. ಟಿಕೆಟ್ ಕೊಡಿಸಿಲ್ಲ. ನಟಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಸುಮ್ಮನಾಗಿದ್ದಾರೆ. ಇತ್ತೀಚೆಗೆ ಸ್ವಾಮಿ ಬಂಧನದ ಸುದ್ದಿ ಹೊರ ಬೀಳುತ್ತಿದ್ದಂತೆ ಈ ನಟಿ ಮಣಿ ತನ್ನ ಆಪ್ತರೊಬ್ಬರ ಜತೆ ಎಲ್ಲಾ ವಿಷಯ ಹೇಳಿಕೊಂಡಿದ್ದಾರೆ. ನನಗೂ ಸ್ವಾಮಿ ಮೋಸ ಮಾಡಿದ. ಸಿಸಿಬಿ ಪೊಲೀಸರಿಗೆ ದೂರು ಕೊಟ್ಟರೆ ನನ್ನ ಹೆಸರು ಬಂದು ಅವಮಾನ ಆಗುತ್ತದೆ ಎಂದು ಸುಮ್ಮನಾಗಿದ್ದೇನೆ. ಮಾಧ್ಯಮದಲ್ಲಿ ಹೆಸರು ಬರದಂತೆ ನೋಡಿಕೊಂಡರೆ ನಾನೇ ಹೋಗಿ ಹೇಳಿಕೆ ದಾಖಲಿಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ. ಇದರ ಮೂಲಕ ಸ್ವಾಮಿಗೆ ಪತ್ರಕರ್ತರ ಸಾಂಗತ್ಯವೂ ಇತ್ತು ಎಂಬುದು ಈ ವಿಚಾರದಿಂದ ಹೊರ ಬಂದಿದ್ದು ನಟಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರೆ ಸ್ವಾಮಿ ಖಾತೆಗೆ ಇನ್ನೊಂದು ವಂಚನೆ ಪ್ರಕರಣ ಸೇರ್ಪಡೆಯಾಗುವುದು ಖಚಿತ.
ಸಂತೋಜ್ ಜೀ ತಮ್ಮನ ಮಗನ ಹೆಸರಿನಲ್ಲಿ ವಂಚನೆ: ಇನ್ನು ಕೇಂದ್ರೀಯ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ನಂಬಿಸಿ 30 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿರುವ ಸ್ವಾಮಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಂ.ಸಿ. ಇನಿತ್ ಕುಮಾರ್ ಎಂಬುವರು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕ್ರಿಮಿನಲ್ ದಾವೆ ದಾಖಲಾಗಿದೆ.
ಸ್ವಾಮಿಯಿಂದ ವಂಚನೆ
ಗಿರಿನಗರದ ನಿವಾಸಿ ಇನಿತ್ ಕುಮಾರ್ ಗೆ ಇತ್ತೀಚೆಗೆ ತನ್ನ ಸ್ನೇಹಿತ ಸುರೇಶ್ ಮೂಲಕ ಸ್ವಾಮಿಯ ಪರಿಚಯವಾಗಿತ್ತು. ಬಿಜೆಪಿ ನಾಯಕ ಸಂತೋಷ್ ಜೀ ಅಣ್ಣನ ಮಗ ಎಂದು ಹೇಳಿಕೊಂಡಿದ್ದ. ನಿಮ್ಮಂತವರು ರಾಜಕೀಯಕ್ಕೆ ಬರಬೇಕು. ಕೇಂದ್ರೀಯ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನ ಖಾಲಿಯಿದೆ. ಬೇರೆಯವರಿಗೆ ಮೂರು ಕೋಟಿ ರೂಪಾಯಿ ಆಗುತ್ತೆ. ನಿಮಗೆ ಎರಡು ಕೋಟಿ ರೂಪಾಯಿಗೆ ಆಗುತ್ತದೆ ಎಂದು ಸ್ವಾಮಿ ಬೂಚಿ ಬಿಟ್ಟಿದ್ದ. ಇದನ್ನು ನಂಬಿ ಇನಿತ್ ಕುಮಾರ್ ಎರಡು ಲಕ್ಷ ರೂಪಾಯಿ ಮುಂಗಡ ನೀಡಿದ್ದರು.
ಬಳಿಕ ಹಂತ ಹಂತವಾಗಿ 28 ಲಕ್ಷ ರೂಪಾಯಿ ನೀಡಿದ್ದರು. ಹಣ ಕೊಟ್ಟ ಬಳಿಕ ಉಳಿದಿದ್ದು ನೀಡುವುದಾಗಿ ಹೇಳಿದ್ದರು. ಆದೇಶ ನೀಡುವ ಗಡುವು ಮುಗಿದಿತ್ತು. ಹೋಗಿ ಕೇಳಿದರೆ, ನಿನಗೆ ಮೋಸ ಮಾಡಲೆಂದೇ ಈ ಕೃತ್ಯ ಮಾಡಿದ್ದು. ಯಾವ ದುಡ್ಡು ಕೊಟ್ಟಿಲ್ಲ. ಕೇಳಿದರೆ ನಿನ್ನನ್ನು ಮುಗಿಸಿಬಿಡುತ್ತೇನೆ ಎಂದು ಸ್ವಾಮಿ ಅವಾಜ್ ಬಿಟ್ಟಿದ್ದಾನೆ. ಈ ಕುರಿತು ಸ್ವಾಮಿ ವಿರುದ್ಧ ಇನಿತ್ ಕುಮಾರ್ ದೂರು ನೀಡಿದ್ದು, ಇದು ಕೂಡ ಸಿಸಿಬಿಗೆ ವರ್ಗಾವಣೆಯಾಗಲಿದೆ.
ಕೋಟ್ಯಂತರ ವೆಚ್ಚ
ಇನ್ನು ಸ್ವಾಮಿ ಯಾವಾಗಲೂ ವಿಮಾನದಲ್ಲೇ ಓಡಾಡುತ್ತಿದ್ದು, ಇದಕ್ಕಾಗಿ ಬರೋಬ್ಬರಿ ಎಂಟು ಕೋಟಿ ರೂಪಾಯಿ ವೆಚ್ಚ ಮಾಡಿರುವುದು ಸಿಸಿಬಿಯ ತನಿಖೆಯಲ್ಲಿ ಬಯಲಾಗಿದೆ. ದೆಹಲಿ ಮತ್ತು ಬೆಂಗಳೂರಿಗೆ ಹೆಚ್ಚಾಗಿ ಓಡಾಡಿದ್ದು, ಈ ಅವಧಿಯಲ್ಲಿ ಪಕ್ಕದಲ್ಲಿ ಕೂರುವರನ್ನು ಬುಟ್ಟಿಗೆ ಹಾಕಿಕೊಂಡು ಮೋಸ ಮಾಡುತ್ತಿರುವ ಸಂಗತಿ ತನಿಖೆಯಲ್ಲಿ ಬಯಲಾಗಿದೆ. ಸಾಕಷ್ಟು ಮಂದಿಯನ್ನು ವಿಮಾನದಲ್ಲೇ ತನ್ನ ಬಗ್ಗೆ ಪರಿಚಯಿಸಿಕೊಂಡು ತನ್ನ ವಂಚನೆ ಜಾಲ ವಿಸ್ತರಿಸಿದ್ದ ಎಂಬುದು ಇದೇ ವೇಳೆ ಗೊತ್ತಾಗಿದೆ.
ಮೊದಲ ಪ್ರಕರಣದಲ್ಲಿ ಟೋಪಿರಾಜ್ ಜಾಮೀನು ಅರ್ಜಿ ವಜಾ !
Recommended Video
ಪ್ರಭಾವಿಗಳೇ ಬಿದ್ದಿದ್ದರು
ಸ್ವಾಮಿ ಜ್ಯೋತಿಷ್ಯ ಮತ್ತು ಆರ್ಎಸ್ ಎಸ್ ಮುಖವಾಡ ನಂಬಿ ದೊಡ್ಡ ರಾಜಕೀಯ ನಾಯಕರೇ ಮರುಳಾಗಿದ್ದಾರೆ. ಲಕ್ಷ್ಮಣ ಸವದಿ ಕೂಡ ಸ್ವಾಮಿ ಅವರನ್ನು ಭೇಟಿ ಮಾಡಿದ್ದರು. ಸಚಿವ ವಿ. ಸೋಮಣ್ಣ ಅವರ ಮನೆಗೆ ಹೋಗಿ ಬಂದಿದ್ದರು. ಇಷ್ಟೇ ಅಲ್ಲ ಇನ್ನೊಬ್ಬ ಪ್ರಭಾವಿ ಬಿಜೆಪಿ ನಾಯಕ ಏನಾದರೂ ಮಾಡಿ ನಾನು ಸಿಎಂ ಆಗಬೇಕು ಎಂದು ಸ್ವಾಮಿಯವರನ್ನು ಭೇಟಿ ಮಾಡಿ ಹೇಳಿಕೊಂಡಿದ್ದರಂತೆ. ಇದೆಲ್ಲವನ್ನೂ ಗಮನಿಸಿದೆ ಸ್ವಾಮಿ ಜೋತಿಷ್ಯ ಹೇಳುವ ಹೆಸರಿನಲ್ಲಿ ಪ್ರಭಾವಿ ಬಿಜೆಪಿ ನಾಯಕರ ಸಾಂಗತ್ಯ ಬೆಳೆಸಿದ್ದರು ಎಂಬುದು ಖಚಿತವಾಗುತ್ತದೆ. ಇನ್ನೂ ಕೆಲವರಿಗೆ ಗುತ್ತಿಗೆ ಕೊಡಿಸುವುದಾಗಿ ಹೇಳಿ ಹಣ ಪಡೆದಿದ್ದು, ಅವರಿಗೆ ಗುತ್ತಿಗೆ ಕೊಡಿಸಿದ್ದಾರೆ ಎಂಬ ವಾಸ್ತವಗಳು ಹೊರ ಬಿದ್ದಿದೆ. ಇನ್ನೂ ಆಪರೇಷನ್ ಕಮಲ, ನಾಯಕತ್ವ ಬದಲಾವಣೆ ವೇಳೆ ಸ್ವಾಮಿಯನ್ನು ಕೆಲ ಬಿಜೆಪಿ ನಾಯಕರು ಬಳಸಿಕೊಂಡಿದ್ದರು ಎಂಬ ಮಾತು ಕೇಳಿ ಬರುತ್ತಿದೆ. ಸ್ವಾಮಿಗೆ ತಮಿಳುನಾಡಿನ ನಟಿಯರ ಸ್ನೇಹವೂ ಇದೆ ಎಂದು ಹೇಳಲಾಗಿದೆ.