ಫೇಸ್ಬುಕ್ನಲ್ಲಿ ಕಿರಿಕ್ : ಬೆಂಗಳೂರು ಹುಡುಗನ ಹತ್ಯೆ
ಬೆಂಗಳೂರು, ಮಾರ್ಚ್ 01 : 19 ವರ್ಷದ ಯುವಕನನ್ನು ಅಪಹರಣ ಮಾಡಿ, ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಲಹಂಕ ನ್ಯೂ ಟೌನ್ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವಿದ್ಯಾನಗರ ಕ್ರಾಸ್ ನಿವಾಸಿಯಾದ ಅರುಣ್ ಕೊಲೆಯಾದ ಯುವಕ. ಸೋಮವಾರ ರಾತ್ರಿ 8.30ರ ಸುಮಾರಿಗೆ ಅರುಣ್ ಮನೆ ಬಳಿಗೆ ಬಂದು ಆತನನ್ನು ಅಪಹರಣ ಮಾಡಿದ ಯುವಕರ ಗುಂಪು, ನಂತರ ಕೊಲೆ ಮಾಡಿ ಪರಾರಿಯಾಗಿದೆ. [ಜೋಡಿ ಕೊಲೆ : ಜೆಡಿಎಸ್ ನಗರಸಭಾ ಸದಸ್ಯನಿಗೆ ಜೀವಾವಧಿ ಶಿಕ್ಷೆ]

ಅಮೃತಹಳ್ಳಿಯ ರೌಡಿಗಳಾದ ಕೆಂಚ, ಸುದೀಪ್ ಗ್ಯಾಂಗ್ನ ಹುಡುಗರು ಈ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸೋಮವಾರ ರಾತ್ರಿ ಬಾಗಲೂರು ಕ್ರಾಸ್ ಬಸ್ ನಿಲ್ದಾಣದ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅರುಣ್ನನ್ನು ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.[ಯಲಹಂಕ: ಬಿಜೆಪಿ ಸದಸ್ಯ ಉದ್ಯಮಿ ಕೊಲೆ, ನಾಲ್ವರ ಸೆರೆ]
ಫೇಸ್ ಬುಕ್ನಲ್ಲಿ ಕಿರಿಕ್ : ಅರುಣ್ ಏರ್ ಪೋರ್ಟ್ ಕಾರ್ಗೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲವು ದಿನಗಳ ಹಿಂದೆ ಫೇಸ್ ಬುಕ್ನಲ್ಲಿ ಕೆಲವು ಹುಡುಗರನ್ನು ಸ್ನೇಹಿತರನ್ನಾಗಿ ಮಾಡಿಕೊಂಡಿದ್ದ. ಅವರ ಜೊತೆ ಏಕ ವಚನದಲ್ಲಿ ಚಾಟ್ ಮಾಡುತ್ತಿದ್ದ. ಇದರಿಂದ ಹುಡುಗರು ಮತ್ತು ಅರುಣ್ ನಡುವೆ ಗಲಾಟೆ ನಡೆದಿತ್ತು. ನಂತರ ರಾಜಿ ಸಂಧಾನವೂ ಆಗಿತ್ತು. [ಮಕ್ಕಳನ್ನು ಕೊಂದು ಮೋರಿಗೆ ಶವ ಎಸೆದ ಪಾಪಿ ತಂದೆ]
ಫೆ.29ರ ಸೋಮವಾರ ರಾತ್ರಿ 8.30ರ ಸುಮಾರಿಗೆ ಅರುಣ್ ಮನೆ ಬಳಿ ಆಗಮಿಸಿದ ಯುವಕರ ಗುಂಪು ಮಾತನಾಡುವುದಿದೆ ಬಾ ಎಂದು ಆತನನ್ನು ಕರೆದುಕೊಂಡು ಹೋಗಿದ್ದಾರೆ. ನಂತರ ಬಾಗಲೂರು ಕ್ರಾಸ್ ಬಳಿ ಹೋಗುತ್ತಿದ್ದಂತೆ ಆತನನ್ನು ಕಾರಿನಿಂದ ಹೊರಗೆ ತಳ್ಳಿ ಚಾಕುವಿನಿಂದ ಇರಿದಿದ್ದಾರೆ.
ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅರುಣ್ನನ್ನು ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ರೌಡಿಗಳಾದ ಕೆಂಚ, ಸುದೀಪ್ ಗ್ಯಾಂಗ್ನ ಹುಡುಗರು ಈ ಕೊಲೆ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸುತ್ತಿದ್ದಾರೆ.
ಈಶಾನ್ಯ ವಿಭಾಗದ ಡಿಸಿಪಿ ಡಾ.ಹರ್ಷ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಹೇಳಿದ್ದಾರೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications