ಪೆಟಾ ಅಂತಿಮ ಸ್ಪರ್ಧೆಯಲ್ಲಿ ಬೆಂಗಳೂರಿನ ಯುವಕ
ಬೆಂಗಳೂರು, ಅಕ್ಟೋಬರ್ 15 : ಪ್ರಾಣಿಗಳ ಸಂರಕ್ಷಣೆಗಾಗಿ ಹೋರಾಟ ನಡೆಸಿರುವ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಎನಿಮಲ್ಸ್ (ಪೆಟಾ) ಸಂಸ್ಥೆ ನಡೆಸಿದ ಇಂಡಿಯಾಸ್ ಕ್ಯೂಟೆಸ್ಟ್ ವೆಜಿಟೇರಿಯನ್ ನೆಕ್ಸ್ಟ್ ಡೋರ್ ಸ್ಪರ್ಧೆಯಲ್ಲಿ ನೂರಾರು ಜನರನ್ನು ಹಿಂದಿಕ್ಕಿ ಬೆಂಗಳೂರಿನ ಕಾಲೇಜು ವಿದ್ಯಾರ್ಥಿ ಕುಶಾಲ್ ಹೆಬ್ಬಾರ್ ಅಂತಿಮ ಹಂತ ತಲುಪಿದ್ದಾರೆ.
ಕುಶಾಲ್ ಸೇರಿದಂತೆ 20 ಅಂತಿಮ ಸ್ಪರ್ಧಾಳುಗಳನ್ನು ಆಯ್ಕೆ ಮಾಡಿರುವ ಪೆಟಾ ಸ್ಪರ್ಧೆಯ ತೀರ್ಪುಗಾರರು, ಮೂರು ಪ್ರಮುಖ ಅಂಶಗಳನ್ನು ಅಭ್ಯರ್ಥಿಗಳ ಆಯ್ಕೆಗೆ ಪರಿಗಣಿಸಿದ್ದಾರೆ. ಅವೆಂದರೆ, ಸ್ಪರ್ಧಾಳುಗಳ ದೈಹಿಕ ಆರೋಗ್ಯ, ಪ್ರಾಣಿಗಳನ್ನು ಕಾಪಾಡಲು ಇರಬೇಕಾದ ಸಮರ್ಪಣಾ ಮನೋಭಾವ ಮತ್ತು ಸಸ್ಯಾಹಾರಿಯಾಗಿದ್ದಕ್ಕೆ ಕಾರಣಗಳು.
ಈಗ, ತನ್ನ ನೆಚ್ಚಿನ ಸ್ಪರ್ಧಾಳು ಯಾರೆಂದು ಆಯ್ಕೆ ಮಾಡುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ. ಮೇಲಿನ ಮೂರು ಗುಣಲಕ್ಷಣಗಳು ಮತ್ತು ಸಾರ್ವಜನಿಕರು ಹಾಕಿದ ಮತಗಳ ಆಧಾರದ ಮೇಲೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯನ್ನು ಜಯಶಾಲಿ ಎಂದು ಆಯ್ಕೆ ಮಾಡಲಾಗುವುದು.
ಕಟ್ಟಾ ಸಸ್ಯಾಹಾರಿಯಾಗಿರುವ ಬೆಂಗಳೂರಿನ ಯುವಕ ಕುಶಾಲ್ ಹೆಬ್ಬಾರ್, ಬಿಎನ್ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, "ಪ್ರಾಣಿಗಳೆಂದರೆ ನನಗೆ ತುಂಬಾ ಪ್ರೀತಿ, ಬರೀ ರುಚಿ ನೋಡುವ ಉದ್ದೇಶದಿಂದ ಕೂಡ ಮಾಂಸಾಹಾರವನ್ನು ಎಂದೂ ಸೇವಿಸುವುದಿಲ್ಲ" ಎಂದು ಅಭಿಮಾನದಿಂದ ಹೇಳಿದ್ದಾರೆ.
ಪೆಟಾ ನ್ಯೂಟ್ರಿಷನಿಸ್ಟ್ ಭುವನೇಶ್ವರಿ ಗುಪ್ತಾ ಹೇಳುವಂತೆ, "ಸಸ್ಯಾಹಾರಿಗಳು ಮಾಂಸಾಹಾರಿಗಳಿಗಿಂತ ತೆಳ್ಳಗಿರುತ್ತಾರೆ ಮತ್ತು ಆರೋಗ್ಯವಂತರಾಗಿರುತ್ತಾರೆ. ಅವರ ಜೀವಮಾನ ಕಾಲದಲ್ಲಿ ಎಷ್ಟೊಂದು ಪ್ರಾಣಿಗಳು ಕಸಾಯಿಖಾನೆಯಲ್ಲಿ ಬಲಿಯಾಗುವುದನ್ನು ತಪ್ಪಿಸುತ್ತಾರೆ. ಸಣ್ಣ ಸಂಗತಿಯೇನಲ್ಲ."
ಮಾಂಸಾಹಾರ ಮತ್ತು ಬೇಕರಿ ಉತ್ಪನ್ನಗಳ ಸೇವನೆಯಿಂದ ಹೃದಯಬೇನೆ, ಲಕ್ವ, ಮಧುಮೇಹ, ಕ್ಯಾನ್ಸರ್ ಮತ್ತು ಬೊಜ್ಜಿನಂತಹ ರೋಗಗಳು ಬರುವ ಸಾಧ್ಯತೆಗಳು ಹೆಚ್ಚು. ಈ ದೃಷ್ಟಿಯಿಂದಲಾದರೂ ಜನರು ಸಸ್ಯಾಹಾರಕ್ಕೆ ಮೊರೆಹೋಗುವುದು ಉಚಿತ.
ಭಾರತದ ಶ್ರೀಸಾಮಾನ್ಯ ನಾಗರಿಕರಿಗಾಗಿ ಏರ್ಪಡಿಸಲಾಗಿದ್ದ ಈ ಸ್ಪರ್ಧೆಯ ವಿಜೇತರನ್ನು ನವೆಂಬರ್ 1ರಂದು, ಅಂದರೆ ಕನ್ನಡ ರಾಜ್ಯೋತ್ಸವದಂದು ಘೋಷಿಸಲಾಗುವುದು. ಕನ್ನಡಿಗನೊಬ್ಬನು ಕನ್ನಡ ರಾಜ್ಯೋತ್ಸವದಂದೇ ಗೆದ್ದರೆ ಕನ್ನಡಿಗನಿಗೆ ಅದಕ್ಕಿಂತ ಹೆಚ್ಚಿನ ಭಾಗ್ಯ ಇನ್ನೇನಿದೆ? ಕುಶಾಲ್ ನನ್ನು ಗೆಲ್ಲಿಸಬೇಕಿದ್ದರೆ ಇಲ್ಲಿ ವೋಟ್ ಮಾಡಿರಿ.