ಯಶವಂತಪುರ-ತುಮಕೂರು ರೈಲು ಮಾರ್ಗ ಸಿಆರ್ಎಸ್ ಪರಿಶೀಲನೆ ಪೂರ್ಣ
ಬೆಂಗಳೂರು, ಅಕ್ಟೋಬರ್ 30; ವಿದ್ಯುದೀಕರಣಗೊಂಡಿರುವ ಯಶವಂತಪುರ ಮತ್ತು ತುಮಕೂರು ನಡುವಿನ ರೈಲು ಮಾರ್ಗವನ್ನು ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದರು. ಈ ಮಾರ್ಗ ವಿದ್ಯುದೀಕರಣಗೊಂಡಿರುವುದರಿಂದ ಹೆಚ್ಚಿನ ರೈಲುಗಳನ್ನು ಓಡಿಸಲು ಸಹಾಯಕವಾಗಿದೆ.
ನೈಋತ್ಯ ವಲಯದ ರೈಲ್ವೆ ಸುರಕ್ಷತಾ ಆಯುಕ್ತ ಅಭಿ ಕುಮಾರ್ ರೈ ಮತ್ತು ಬೆಂಗಳೂರು ವಿಭಾಗದ ಮ್ಯಾನೇಜರ್ ಶ್ಯಾಂ ಸಿಂಗ್ ಒಳಗೊಂಡ ಅಧಿಕಾರಿಗಳ ತಂಡ ಯಶವಂತಪುರ-ತುಮಕೂರು ನಡುವಿನ ಮಾರ್ಗದ ಪರಿಶೀಲನೆ ನಡೆಸಿತು. ವಾಣಿಜ್ಯ ಸಂಚಾರಕ್ಕೆ ತಂಡ ಶೀಘ್ರವೇ ಒಪ್ಪಿಗೆ ನೀಡಲಿದೆ.
ಹುಬ್ಬಳ್ಳಿ ವಲಯದಿಂದ ಮೊದಲ ಡೆಮು ರೈಲು; ಯಾವ ಮಾರ್ಗ?
ವಿಶೇಷ ರೈಲಿನ ಮೂಲಕ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಟ ಅಧಿಕಾರಿಗಳ ತಂಡ 69.47 ಕಿ. ಮೀ. ವಿದ್ಯುದೀಕರಣಗೊಂಡಿರುವ ಮಾರ್ಗದಲ್ಲಿ ವಿವಿಧ ಪರಿಶೀಲನೆಗಳನ್ನು ನಡೆಸಿತು. ಅಧಿಕಾರಿಗಳಿಂದ ಮಾಹಿತಿ ಪಡೆಯಿತು.
ಯಶವಂತಪುರ-ತುಮಕೂರು ನಡುವೆ ಓಡಲಿವೆ ಹೆಚ್ಚುವರಿ ರೈಲು
ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದ ಬಳಿಕ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಬೆಂಗಳೂರು-ತುಮಕೂರು ನಡುವೆ ಹೆಚ್ಚಿನ ರೈಲುಗಳನ್ನು ಓಡಿಸಲಿದೆ. ಇದರಿಂದಾಗಿ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ.
ತುಮಕೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ
ಚಿಕ್ಕಬಣಾವರ-ಹುಬ್ಬಳ್ಳಿ ಮಾರ್ಗದ ವಿದ್ಯುದೀಕರಣದ ಭಾಗವಾಗಿ ಯಶವಂತಪುರ-ತುಮಕೂರು ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ. ಮಾರ್ಗದಲ್ಲಿ ರೈಲು ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದ ಬಳಿಕ ನೈಋತ್ಯ ರೈಲ್ವೆ ಮೆಮು ರೈಲುಗಳನ್ನು ಓಡಿಸಲಿದೆ. ಇದರಿಂದಾಗಿ ಇಂಧನದ ವೆಚ್ಚ ಉಳಿತಾಯವಾಗಲಿದೆ.
ರೈಲ್ವೆ ವಿಕಾಸ ನಿಗಮ ಸೇರಿದಂತೆ ವಿವಿಧ ಸಂಸ್ಥೆಗಳು ಒಟ್ಟು 856.76 ಕೋಟಿ ಮೊತ್ತದಲ್ಲಿ ಚಿಕ್ಕಬಣಾವರ-ಹುಬ್ಬಳ್ಳಿ ರೈಲ್ವೆ ಮಾರ್ಗವನ್ನು ವಿದ್ಯುದೀಕರಣ ಮಾಡುವ ಕಾಮಗಾರಿ ಕೈಗೊಂಡಿವೆ. 2022ರ ಮಾರ್ಚ್ ವೇಳೆಗೆ ಬೀರೂರು-ಚಿಕ್ಕಜಾಜೂರು, ತುಮಕೂರು-ಕರಡಿ ಸೆಕ್ಷನ್ ವಿದ್ಯುದೀಕರಣ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಚಿಕ್ಕಜಾಜೂರು-ಹುಬ್ಬಳ್ಳಿ ನಡುವಿನ ಕಾಮಗಾರಿ ಇನ್ನೂ ನಡೆಯುತ್ತಿದೆ. 2022ರ ಡಿಸೆಂಬರ್ ವೇಳೆಗೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಯಶವಂತಪುರ-ತುಮಕೂರು ಮಾರ್ಗದ ವಿದ್ಯುದೀಕರಣ ಉಭಯ ನಗರದ ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲಿದೆ.
ನವೆಂಬರ್ನಲ್ಲಿ ವಾಣಿಜ್ಯ ಸಂಚಾರ?; ಬೆಂಗಳೂರಿನ ಯಶವಂತಪುರ-ತುಮಕೂರು ಮಾರ್ಗದಲ್ಲಿನ ತುಮಕೂರು-ಹಿರೇಹಳ್ಳಿ ಮಾರ್ಗದ ವಿದ್ಯುದೀಕರಣ ಹಿಂದೆಯೇ ಪೂರ್ಣಗೊಂಡು ಸಿಆರ್ಎಸ್ ಪರಿಶೀಲನೆ ಪೂರ್ಣಗೊಂಡಿತ್ತು. ರೈಲ್ವೆ ಸುರಕ್ಷತಾ ಆಯುಕ್ತರು ಹೇಳಿದ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ನವೆಂಬರ್ನಲ್ಲಿ ಯಶವಂತಪುರ-ತುಮಕೂರು ವಿದ್ಯುದೀಕರಣ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅವಕಾಶ ನೀಡುವ ನಿರೀಕ್ಷೆಯಲ್ಲಿ ನೈಋತ್ಯ ರೈಲ್ವೆ ಅಧಿಕಾರಿಗಳು ಇದ್ದಾರೆ. ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಸಿಕ್ಕ ಬಳಿಕ ಈ ಮಾರ್ಗದಲ್ಲಿ ಮೆಮು ರೈಲು ಓಡಲಿದೆ.
ತುಮಕೂರು-ಬೆಂಗಳೂರು ನಡುವೆ ಹೆಚ್ಚು ರೈಲು ಓಡಿಸಬೇಕು ಎಂಬುದು ಪ್ರಯಾಣಿಕರ ಬೇಡಿಕೆಯಾಗಿದೆ. ಅದರಲ್ಲಿಯೂ ಬೆಳಗ್ಗೆ ಮತ್ತು ಸಂಜೆ ಹೆಚ್ಚಿನ ರೈಲು ಓಡಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ವಾಣಿಜ್ಯ ಸಂಚಾರ ಆರಂಭಗೊಂಡರೆ ಮಾರ್ಗದಲ್ಲಿ ಹೆಚ್ಚಿನ ರೈಲು ಸಂಚಾರ ನಡೆಸಲಿದೆ.
ಕಾಮಗಾರಿ ಪೂರ್ಣಗೊಂಡಿಲ್ಲ; ನೈಋತ್ಯ ರೈಲ್ವೆ ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದ ವಿದ್ಯುದೀಕರಣವನ್ನು ಸಹ ಕೈಗೊಂಡಿದೆ. ಈ ಮಾರ್ಗದ ಕಾಮಗಾರಿ ಪೂರ್ಣಗೊಂಡರೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮಾರ್ಗವೂ ವಿದ್ಯುದೀಕರಣಗೊಳ್ಳಲಿದೆ. ಈ ಕಾಮಗಾರಿ ಇನ್ನೂ 6 ತಿಂಗಳಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಬೆಂಗಳೂರು ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಇರುವ ರೈಲು ನಿಲ್ದಾಣಕ್ಕೆ ಮೆಮು ರೈಲು ಓಡಿಸಲು ಈ ಮಾರ್ಗದ ವಿದ್ಯುದೀಕರಣ ಪೂರ್ಣಗೊಳ್ಳಬೇಕಿದೆ. 2021ರ ಆಗಸ್ಟ್ನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ವಿದ್ಯುತ್ ಮಾರ್ಗದ ಸ್ಥಳಾಂತರ ಕಾರ್ಯ ಬಾಕಿ ಇರುವುದರಿಂದ ಕಾಮಗಾರಿ ವಿಳಂಬವಾಗಿದೆ.
Recommended Video
ನೈಋತ್ಯ ರೈಲ್ವೆ ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಓಡಿಸುತ್ತಿದ್ದ ರೈಲುಗಳನ್ನು ಸಹ ಇದೇ ಕಾರಣಕ್ಕೆ ಸ್ಥಗಿತಗೊಳಿಸಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ದೇವನಹಳ್ಳಿ ಹಾಲ್ಟ್ ಸ್ಟೇಷನ್ಗೆ ಬೆಂಗಳೂರು ನಗರದಿಂದ ರೈಲು ಓಡಲಿದೆ.