'ಸಾವರ್ಕರ್' ಮೇಲ್ಸೇತುವೆ: ಕುಮಾರಸ್ವಾಮಿಗೆ ಯಲಹಂಕ ಶಾಸಕ ವಿಶ್ವನಾಥ್ ಸವಾಲು
ಬೆಂಗಳೂರು, ಮೇ 28: ವಿವಾದಕ್ಕೆ ಕಾರಣವಾಗಿದ್ದ ಯಲಹಂಕ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಫ್ಲೇ ಓವರ್ಗೆ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಹೆಸರಿಟ್ಟು ಗುರವಾರ ಲೋಕಾರ್ಪಣೆ ಮಾಡಬೇಕಿತ್ತು.
ಆದರೆ, ಮೇಲ್ಸೇತುವೆಗೆ ವೀರ್ ಸಾವರ್ಕರ್ ಹೆಸರು ಇಡಬಾರದು ಎಂದು ವಿಪಕ್ಷಗಳಿಂದ ಭಾರಿ ಟೀಕೆ ವ್ಯಕ್ತವಾಯಿತು. ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಖಂಡಿಸಿದರು.
'ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ನಾಮಕರಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ನಾಡಿನ ಅಭ್ಯುದಯಕ್ಕೆ ಹೋರಾಟ ಮಾಡಿದವರಿಗೆ ಮಾಡುತ್ತಿರುವ ಅಪಮಾನ' ಎಂದು ಕುಮಾರಸ್ವಾಮಿ ಟೀಕಿಸಿದ್ದರು. ಕುಮಾರಸ್ವಾಮಿ ಟೀಕೆಗೆ ಯಲಹಂಕ ಶಾಸಕ ಎಚ್ ಆರ್ ವಿಶ್ವನಾಥ್ ಪ್ರತಿಕ್ರಿಯಿಸಿದ್ದು, ಸವಾಲು ಹಾಕಿದ್ದಾರೆ. ಮುಂದೆ ಓದಿ.....

ಕುಮಾರಸ್ವಾಮಿ ಹೇಳಿದ್ದೇನು?
ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ನಾಮಕರಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ನಾಡಿನ ಅಭ್ಯುದಯಕ್ಕೆ ಹೋರಾಟ ಮಾಡಿದವರಿಗೆ ಮಾಡುತ್ತಿರುವ ಅಪಮಾನ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರದು. ಸ್ವಾತಂತ್ರ್ಯಪೂರ್ವ ಮತ್ತು ನಂತರ ನಾಡಿನ ಅಭಿವೃದ್ಧಿಗೆ ಮತ್ತು ಹಿತಕ್ಕಾಗಿ ದುಡಿದ ಹಲವು ಮಹನೀಯರಿದ್ದಾರೆ. ಅವರ ಹೆಸರನ್ನು ಈ ಮೇಲ್ಸೇತುವೆಗೆ ಇಡಬಹುದಿತ್ತು. ರಾಜ್ಯದ ಹೋರಾಟಗಾರರ ಹೆಸರನ್ನು ಬೇರೆ ರಾಜ್ಯಗಳಲ್ಲಿ ನಾಮಕರಣ ಮಾಡುವುದುಂಟೆ? ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ನಾಡಿನ ಜನತೆಯ ಪರವಾಗಿ ಆಗ್ರಹ ಪಡಿಸುತ್ತೇನೆ'' ಎಂದಿದ್ದರು.

ಏನೇ ಹೋರಾಟ ಮಾಡಿದ್ರು ಹೆಸರಿಡುವುದು ತಡೆಯಲು ಆಗಲ್ಲ
''ಮಣ್ಣಿನ ಮಕ್ಕಳ ಮೇಲೆ ನಮಗೆ ಗೌರವ ಇದೆ. ಕುಮಾರಸ್ವಾಮಿಯವರು ವೀರ ಸ್ವಾತಂತ್ರ್ಯ ಸೇನಾನಿಗೆ ಅವಮಾನ ಮಾಡ್ತಿದ್ದಾರೆ. ನಿಮ್ಮ ಮನೆಯವರದ್ದೇನಾದ್ರೂ ಹೆಸರಡಬೇಕು ಅಂದರೆ ಹೇಳಿ ಮುಂದೆ ಅವರ ಹೆಸರನ್ನೂ ಇಡ್ತೀವಿ. ನೀವು ಎಷ್ಟೇ ಹೋರಾಟ ಮಾಡಿದರೂ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದು ತಡೆಯಲು ಸಾಧ್ಯವಿಲ್ಲ. ಏನ್ ಹೋರಾಟ ಮಾಡಿಕೊಳ್ಳುತ್ತಿರೋ ಮಾಡ್ಕೊಳ್ಳಿ'' ಎಂದು ಯಲಹಂಕ ಶಾಸಕ ಸ್ ಆರ್ ವಿಶ್ವನಾಥ್ ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಅಂದ್ರೆ ಹಿಟ್ ಅಂಡ್ ರನ್
'ಕುಮಾರಸ್ವಾಮಿಯವರಿಗೆ ಮೊದಲಿಂದಲೂ ಹಿಟ್ ಆಂಡ್ ರನ್ ರೂಢಿಯಾಗಿದೆ. ಕೊರೊನಾ ವೈರಸ್ ವಿಚಾರದಲ್ಲಿ ಬರೀ ಹೇಳಿಕೆಗಳನ್ನು ನೀಡ್ತಾ ಬಂದಿದ್ದೀರಿ. ಸರಕಾರಕ್ಕೆ ಎಲ್ಲಿ ಸಹಕಾರ ಕೊಟ್ಟಿದ್ದೀರಿ? ಕೊರೊನಾ ಭಯದಿಂದ ಕುಮಾರಸ್ವಾಮಿ ಹೊರಗೆ ಬಂದೇ ಇಲ್ಲ. ಆದರೆ ನಮ್ಮ ಇಡೀ ಸರ್ಕಾರ, ಮಂತ್ರಿ ಮಂಡಲ ಕೊರೋನಾ ವಿರುದ್ಧ ಹೋರಾಟಕ್ಕೆ ನಿಂತಿದೆ'' ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಹೊರ ದೇಶದವರ ದಾಸ್ಯದಲ್ಲೇ ಇದೆ
''ಕಾಂಗ್ರೆಸ್ ಸ್ಥಾಪನೆ ಮಾಡಿದವರು ಎ.ಒ ಹ್ಯೂಮ್ ಅಂತ ಹೊರದೇಶದ ವ್ಯಕ್ತಿ. ಹೀಗಾಗಿ ಕಾಂಗ್ರೆಸ್ ಇನ್ನೂ ಹೊರ ದೇಶದವರ ದಾಸ್ಯದಲ್ಲೇ ಇದೆ. ನಾವು ಹಿಂದೆ ಇಂದಿರಾ ಕ್ಯಾಂಟೀನ್ ಅಂತ ಹೆಸರಿಟ್ಟಾಗ ವಿರೋಧ ಮಾಡಿದ್ದೆವಾ? ಬ್ರಿಟಿಷರ ವಿರುದ್ದ ಹೋರಾಟ ಮಾಡಿದ ಸೇನಾನಿಯ ಹೆಸರಿಡಬಾರದೇ?'' ಎಂದು ಕೈ ವಿರುದ್ಧ ಗುಡುಗಿದ್ದಾರೆ.

ಸಾವರ್ಕರ್ ಹೆಸರಿಟ್ಟೇ ತೀರುತ್ತೇವೆ
''ಕಾರ್ಯಕ್ರಮ ತಾತ್ಕಾಲಿಕವಾಗಿ ಮುಂದೆ ಹೋಗಿದೆ ಅಷ್ಟೆ. ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟೇ ತೀರುತ್ತೇವೆ. ಲಾಕ್ ಡೌನ್ ಇರುವ ಕಾರಣ, ಕಾರ್ಯಕ್ರಮಕ್ಕೆ ಜಾಸ್ತಿ ಜನ ಸೇರಬಹುದು ಎಂಬ ಕಾರಣಕ್ಕೆ ಕಾರ್ಯಕ್ರಮ ಮುಂದೂಡಲಾಗಿದೆ. ಈಗಾಗಲೇ ಬಿಬಿಎಂಪಿಯಲ್ಲಿ ಇದು ಅನುಮೋದನೆಗೊಂಡಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಯಲಹಂಕ ಶಾಸಕರಾಗಿರುವ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ.












Click it and Unblock the Notifications