ಪರಮೇಶ್ವರ್ ಬಿಜೆಪಿಗೆ ಬರಲಿ: ಯಡಿಯೂರಪ್ಪ ಆಹ್ವಾನ ನೀಡಿದ್ದು ಏಕೆ?
Recommended Video

ಬೆಂಗಳೂರು, ಡಿಸೆಂಬರ್ 22: ಯಡಿಯೂರಪ್ಪ ಕಾಂಗ್ರೆಸ್ಗೆ ಬರಲಿ- ಪರಮೇಶ್ವರ್. ಪರಮೇಶ್ವರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಬರಲಿ- ಯಡಿಯೂರಪ್ಪ.
ಹೀಗೆ ಎದುರಾಳಿ ಪಕ್ಷಗಳ ಇಬ್ಬರು ನಾಯಕರು ಪರಸ್ಪರ ಪಕ್ಷ ತೊರೆದು ತಮ್ಮ ಪಕ್ಷಕ್ಕೆ ಆಹ್ವಾನಿಸಿರುವುದು ಸಚಿವ ಸಂಪುಟ ವಿಸ್ತರಣೆಯ ಗೊಂದಲ ನಡುವೆ ರಾಜಕೀಯ ತಿಕ್ಕಾಟಕ್ಕೆ ರಂಗು ನೀಡಿದೆ.
ಹುಬ್ಬಳ್ಳಿಯಲ್ಲಿ ಬೆಳಿಗ್ಗೆ ಮಾತನಾಡಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಂಪುಟ ವಿಸ್ತರಣೆಯಿಂದ ಕಾಂಗ್ರೆಸ್ನಲ್ಲಿ ಅತೃಪ್ತಿ ತಾಂಡವವಾಡುತ್ತಿದೆ. ಸಂಪುಟ ವಿಸ್ತರಣೆ ಮಾಡುವುದಾಗಿ ಮೂರು ತಿಂಗಳು ಕಾಲಕಳೆದಿದ್ದಾರೆ. ಸಂಪುಟ ವಿಸ್ತರಣೆ ಆದ ಬಳಿಕ ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೇಳಲಿದೆ ಎಂದಿದ್ದರು.
ರೈತರ ಸಾಲಮನ್ನಾ ಎಂದು ಹೇಳುತ್ತಾ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರೈತರಿಗೆ ಟೊಪ್ಪಿ ಹಾಕಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ಕಾಂಗ್ರೆಸ್ ಮೇಲೆ ಪರಿಣಾಮ ಬೀರಲಿದೆ. ಶನಿವಾರ ಸಂಜೆಯ ನಂತರ ಅನೇಕ ಬದಲಾವಣೆಗಳು ಆಗಲಿವೆ ಎಂದು ಹೇಳಿದ್ದರು.

ಕಾಂಗ್ರೆಸ್ ಬಗ್ಗೆಯೇ ಆಸಕ್ತಿ
ಯಡಿಯೂರಪ್ಪ ಅವರ ಹೇಳಿಕೆಗೆ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ್ದ ಪರಮೇಶ್ವರ್, ಯಡಿಯೂರಪ್ಪ ಅವರಿಗೆ ಬಿಜೆಪಿಗಿಂತಲೂ ಕಾಂಗ್ರೆಸ್ ಕುರಿತೇ ಹೆಚ್ಚಿನ ಆಸಕ್ತಿ ಇದೆ. ಅವರು ಕಾಂಗ್ರೆಸ್ ಸೇರಿಕೊಳ್ಳಲಿ ಎಂದು ವ್ಯಂಗ್ಯವಾಗಿ ಹೇಳಿದ್ದರು.

ಬಿಜೆಪಿಗೆ ಆಹ್ವಾನ
ಕಾಂಗ್ರೆಸ್ ಪಕ್ಷದ ವಿರುದ್ಧವೇ ಪರಮೇಶ್ವರ್ ಅವರಲ್ಲಿ ಅಸಮಾಧಾನವಿದೆ. ಅವರು ಯಾವಾಗ ಬೇಕಾದರೂ ಬಿಜೆಪಿಗೆ ಬರಬಹುದು ಎಂದು ಆಹ್ವಾನಿಸುತ್ತೇನೆ. ಅವರು ಹಿರಿಯರು ಅವರ ಬಗ್ಗೆ ಗೌರವವಿದೆ. ಅವರಿಗೆ ಸೂಕ್ತ ಸ್ಥಾನಮಾನ, ಗೌರವ ನೀಡುತ್ತೇವೆ ಎಂದು ಯಡಿಯೂರಪ್ಪ ಟಾಂಗ್ ನೀಡಿದ್ದಾರೆ. ಪರಮೇಶ್ವರ್ ಹಾಗೆಲ್ಲ ಹಗುರವಾಗಿ ಮಾತನಾಡಬಾರದು ಎಂದು ಸಲಹೆ ನೀಡಿದ್ದಾರೆ.

ಅತೃಪ್ತರತ್ತ ಗಮನ
ಕಾಂಗ್ರೆಸ್ನಲ್ಲಿ ಸಂಪುಟ ವಿಸ್ತರಣೆ ಕುರಿತಂತೆ ಸಚಿವ ಆಕಾಂಕ್ಷಿಗಳಲ್ಲಿ ಅತೃಪ್ತಿ ಹೊಗೆಯಾಡುತ್ತಿದೆ. ಅವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಅತೃಪ್ತರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅವರು ಮುಂದೆ ಏನು ಮಾಡುತ್ತಾರೆ ನೋಡುತ್ತಿರಿ. ಪ್ರಮಾಣ ವಚನ ಮುಗಿದ ಬಳಿಕ ನೋಡೋಣ. ಅತೃಪ್ತ ಶಾಸಕರು ನಡೆ ನೋಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅತೃಪ್ತರು ಯಾರೂ ಇದುವರೆಗೆ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇನ್ನಾದರೂ ಅಭಿವೃದ್ಧಿ ಮಾಡಿ
ಇಂದು ಸಂಜೆ ಸಂಪುಟ ವಿಸ್ತರಣೆ ಆಗುತ್ತಿದೆ. ಸರ್ಕಾರ ಇನ್ನು ಮುಂದೆಯಾದರೂ ಅಭಿವೃದ್ಧಿ ಕಡೆಗೆ ಗಮನ ನೀಡಲಿ.
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಮಗೆ ಆಹ್ವಾನ ನೀಡಿಲ್ಲ. ಹಿಂದೆಯೂ ನೀಡಿಲ್ಲ. ಮುಂದೆಯೂ ಕೊಡುವುದಿಲ್ಲ. ಹೀಗಾಗಿ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.












Click it and Unblock the Notifications