ಹಳಿ ತಪ್ಪಿದ ಯಶವಂತಪುರ ರೈಲು: ತಪ್ಪಿದ ದುರಂತ
ಬೆಂಗಳೂರು, ಜೂನ್ 4: ಯಶವಂತಪುರ-ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಿನ್ನೆ ರಾತ್ರಿ ಹಳಿ ತಪ್ಪಿದರೂ ಡ್ರೈವರ್ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದೆ.
ಮಂಗಳವಾರ ರಾತ್ರಿ ಬೆಂಗಳೂರಿನಿಂದ ಹೌರಾಕ್ಕೆ ಹೊರಟಿದ್ದ ಸೂಪರ್ ಫಾಸ್ಟ್ ಟ್ರೈನು 120 ಕಿಮೀ ದೂರ ಸಾಗುತ್ತಿದ್ದಂತೆ ಕುಪ್ಪಂ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ ಇಂಜಿನ್ ಮತ್ತು 2 ಬೋಗಿಗಳು ಹಳಿ ತಪ್ಪಿದವಾದರೂ ಚಾಲಕ ಬಾಲಕೃಷ್ಣ ಅವರ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಘಟನೆಯಲ್ಲಿ ಯಾರಿಗೂ ಗಾಯವೂ ಆಗಿಲ್ಲ.
ಯಶವಂತಪುರ-ಹೌರಾ ಸೂಪರ್ ಫಾಸ್ಟ್ ಟ್ರೈನು ನಿಗದಿತ ಮುಖ್ಯ ಹಳಿಯಲ್ಲಿ ಚಲಿಸುವ ಬದಲು ಮರಳಿನಿಂದ ಆವೃತ್ತವಾಗಿದ್ದ ಲೂಪ್ ಲೈನ್ ಮೇಲೆ ಚಲಿಸಲಾರಂಭಿಸಿದೆ. ಇದು ತಕ್ಷಣ ಚಾಲಕ ಬಾಲಕೃಷ್ಣ ಅವರ ಅನುಭವಕ್ಕೆ ಬಂದಿದೆ. ಟ್ರೈನು ಓಲಾಡುತ್ತಿದ್ದಂತೆ ಬ್ರೇಕು ಹಾಕಿ ಟ್ರೈನನ್ನು ತಹಬಂದಿಗೆ ತಂದಿದ್ದಾರೆ.

ಟ್ರೈನು ಅದೇ ಪರಿಸ್ಥಿತಿಯಲ್ಲಿ ಇನ್ನು ಸ್ವಲ್ಪ ಮುಂದೆ ಚಲಿಸಿದ್ದರೆ ಹಳ್ಳದೊಳಕ್ಕೆ ಕುಸಿಯಬೇಕಿತ್ತು. ತತ್ಪರಿಣಾಮ ಭಾರಿ ಅವಘಡ ಸಂಭವಿಸುವುದಿತ್ತು. ಆದರೆ ಆ ವೇಳೆಗೆ ಚಾಲಕ ಬಾಲಕೃಷ್ಣ ಜತೆಗೆ ಇತರೆ ಸಿಬ್ಬಂದಿಯೂ ಸೇರಿ, ರೈಲನ್ನು ನಿಲ್ಲಿಸಿದ್ದಾರೆ.
ತಕ್ಷಣ ರಕ್ಷಣಾ ತಂಡವು ಜೋಲಾರಪೇಟೆಯಿಂದ ಸ್ಥಳಕ್ಕೆ ಆಗಮಿಸಿದೆ. ಬೇರೆ ಎರಡು ಬೋಗಿ ಮತ್ತು ಇಂಜಿನ್ನಿಗೆ ಸುಸ್ಥಿಯಲ್ಲಿದ್ದ ಬೋಗಿಗಳನ್ನು ಜೋಡಿಸಿ, ಇಂದು ಬುಧವಾರ ಬೆಳಗಿನ ಜಾವ 2.245ರಲ್ಲಿ ಸಂಚಾರವನ್ನು ಮುಂದುವರಿಸಲಾಯಿತು. ಈ ಮಧ್ಯೆ, ಇತರೆ ರೈಲುಗಳ ಸಂಚಾರಕ್ಕೂ ಧಕ್ಕೆಯೊದಗಿತ್ತು.
ರಕ್ಷಣಾ ತಂಡವು ಇದೀಗ ಹಳಿತಪ್ಪಿದ ಎರಡು ಬೋಗಿ ಮತ್ತು ಇಂಜಿನ್ನನ್ನು ಲೂಪ್ ಲೈನ್ ನಿಂದ ಹೊರತೆಗೆಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ರೈಲ್ವೆ ಅಧಿಕಾರಿಗಳು ಘಟನೆಯ ತನಿಖೆ ಕೈಗೆತ್ತಿಕೊಂಡಿದ್ದಾರೆ.












Click it and Unblock the Notifications