ರಫೇಲ್ ಡೀಲ್: ಮೋದಿಗೆ 10 ಪ್ರಶ್ನೆ ಕೇಳಿದ ಯಶವಂತ್ ಸಿನ್ಹಾ
Recommended Video

ಬೆಂಗಳೂರು, ಆಗಸ್ಟ್ 29: ಫ್ರಾನ್ಸ್ ಜತೆಗಿನ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇರವಾಗಿ ಪ್ರಮಾದವೆಸಗಿದ್ದು ಮೂಲ ಒಪ್ಪಂದದಲ್ಲೇ ನಿಯಮ ಉಲ್ಲಂಘಿಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಫೇಲ್ ಒಪ್ಪಂದ ಕುರಿತಂತೆ ಪ್ರಧಾನಿಗೆ ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ. ದೇಶದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಘೋಷಿಸಿದ್ದರೂ ಬೆಂಗಳೂರಿನ ಎಚ್ಎಎಲ್ ಗೆ ಯುಪಿಎ ಸರ್ಕಾರವೇ ನೀಡಿದ್ದ ರಫೇಲ್ ಡೀಲ್ ನ್ನು ರದ್ದುಪಡಿಸಿ ಫ್ರಾನ್ಸ್ ಕಂಪನಿಗೆ ನೀಡಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಫ್ರಾನ್ಸ್ ನೊಂದಿಗೆ ಮಾಡಿಕೊಳ್ಳಲಾದ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಕೇಂದ್ರ ಸರ್ಕಾರ ತನ್ನ ಅನುಕೂಲಕ್ಕಾಗಿ ಮಾಡಿಕೊಂಡಿದೆ. ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಅವ್ಯವಹಾರವಾಗಿದ್ದು,ಎನ್ ಡಿಎ ಸರ್ಕಾರದ ಬಹುದೊಡ್ಡ ಹಗರಣವಿದು ಎಂದು ಈಗಾಗಲೇ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

1) 126ಯುದ್ಧ ವಿಮಾನಗಳ ಖರೀದಿಯನ್ನು ರಕ್ಷಣಾ ಇಲಾಖೆಯ ಟೆಂಡರ್ ನಿಯಮಾನುಸಾರ ಪರಿಷ್ಕರಿಸಲಾಗಿದೆಯೇ?
2) 2015 ಏಪ್ರಿಲ್ ನಲ್ಲಿ ಪ್ರಧಾನಿ ಫ್ರಾನ್ಸ್ಗೆ ಭೇಟಿ ನೀಡಿದ ವೇಳೆ ಏಕಾಏಕಿ ಎರಡು ದಿನಗಳ ಮುಂಚೆ ವಿದೇಶಾಂಗ ಕಾರ್ಯದರ್ಶಿ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದೇಕೆ?
3) ಭಾರತ ಫ್ರಾನ್ಸ್ ಜಂಟಿ ಮಾತುಕತೆ ವೇಳೆ ರಫೇಲ್ ಡೀಲ್ ಪ್ರತ್ಯೇಕವಾಗಿ ಒಪ್ಪಂದ ಮಾಡಿಕೊಂಡಿದ್ದೇಕೆ?
4) 2019ರ ಸೆಪ್ಟೆಂಬರ್ ವೇಳೆಗೆ ಮೊದಲ ಯುದ್ಧ ವಿಮಾನ ಭಾರತಕ್ಕೆ ದಕ್ಕಬೇಕಾಗಿದ್ದರೂ ಅದನ್ನು 2022ರ ಮಧ್ಯಂತರ ವೇಳೆಗೆ ಎಂದು ಮುಂದೂಡಿದ್ದೇಕೆ?
5) ಎಚ್ಎಎಲ್ ಗೆ ಮೊದಲೇ ನೀಡಲಾಗಿದ್ದ ಯುದ್ಧ ವಿಮಾನ ನಿರ್ಮಾಣ ಒಪ್ಪಂದವನ್ನು ಏಕಾಏಕಿ ಕೈಬಿಟ್ಟಿದ್ದೇಕೆ?
6) ಯೂರೋಫೈಟರ್ ಖರೀದಿಯ ಪರಿಷ್ಕೃತ ಪ್ರಸ್ತಾವನೆಯನ್ನು ಕೈಬಿಟ್ಟಿದ್ದೇಕೆ?
7) 2016ರ ನವೆಂಬರ್ ನಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವರು ಲೋಕಸಭೆಯಲ್ಲಿ ಹೇಳಿಕೆ ನೀಡಿ 26 ರಫೇಲ್ ಯುದ್ಧ ವಿಮಾನಗಳ ಖರೀದಿ ಕುರಿತಂತೆ ಅಂದಾಜು 670 ಕೋಟಿ ರೂಗಳನ್ನು ಮಾತ್ರ ವೆಚ್ಚಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದೇಕೆ?
8) ರಫೇಲ್ ಯುದ್ಧ ವಿಮಾನ ಕುರಿತಂತೆ ಒಪ್ಪಂದ ಇಡೀ ಜಗತ್ತಿಗೆ ಗೊತ್ತಿದ್ದರೂ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಲು ಇದೊಂದು ಗುಪ್ತ ವಿಷಯ ಎಂದು ಸರ್ಕಾರ ಹೇಳುತ್ತಿರುವುದು ಏಕೆ?
9) 36ಯುದ್ಧ ವಿಮಾನಗಳ ಖರೀದಿ ಒಪ್ಪಂದವಾಗಿದ್ದರೂ ಕೇವಲ 16 ಯುದ್ಧ ವಿಮಾನಗಳ ಸ್ವೀಕೃತಿ ಕುರಿತಂತೆ ರಕ್ಷಣಾ ಇಲಾಖೆ ಪ್ರಕಟಿಸಿದ್ದು ಏಕೆ?
10) ಡಸಾಲ್ಟ್ ಕಂಪನಿ ಜತೆ ಸೇವಾ ಒಪ್ಪಂದ ಮಾಡಿಕೊಂಡಿರುವುದು ಹಾಗೂ ಮೂಲ ಖರೀದಿ ಷರತ್ತಿನ ಅನುಸಾರ ಕೇವಲ 20 ದಿನಗಳ ಮುಂಚೆಯಷ್ಟೇ ಸ್ಥಾಪನೆಗೊಂಡಿರುವ ಕಂಪನಿಗೆ ನೀಡಿರುವುದು ಏಕೆ?
ಈ ಹತ್ತು ಪ್ರಶ್ನೆಗಳನ್ನು ಕೇಳಿರುವ ಮಾಜಿ ಬಿಜೆಪಿ ಮುಖಂಡರೂ ಆದ ಯಶವಂತ ಸಿನ್ಹಾ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಪಡೆಯದೆ ನೇರವಾಗಿ ಏಕಪಕ್ಷೀಯ ತೀರ್ಮಾನವನ್ನು ಕೈಗೊಂಡಿದ್ದೇಕೆ?, ಮೋದಿಯವರ ಉದ್ದೇಶವೇನೆಂದು ಪ್ರಶ್ನಿಸಿದ್ದಾರೆ.












Click it and Unblock the Notifications