ಆನೇಕಲ್ ಆಸ್ಪತ್ರೆ ಎಡವಟ್ಟು; ಕೋವಿಡ್ ಸೋಂಕಿತರ ಶವ ಅದಲು ಬದಲು
ಬೆಂಗಳೂರು, ಮೇ 10; ಇಬ್ಬರು ಕೋವಿಡ್ ಸೋಂಕಿತರ ಶವಗಳನ್ನು ಕುಟುಂಬಕ್ಕೆ ಹಸ್ತಾಂತರ ಮಾಡುವಾಗ ಆನೇಕಲ್ ಸರ್ಕಾರಿ ಆಸ್ಪತ್ರೆ ಎಡವಟ್ಟು ಮಾಡಿದೆ. ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಕರು ಪ್ರತಿಭಟನೆ ಮಾಡಿದರು.
ಮುತ್ತುಗತ್ತಿಯ ನಿವಾಸಿ 38 ವರ್ಷದ ಮಂಜುನಾಥ್ಗೆ ಕೋವಿಡ್ ಸೋಂಕು ತಗುಲಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಅವರು ಮೃತಪಟ್ಟಿದ್ದರು. ಮರುದಿನ ಕುಟುಂಬದವರು ಶವ ಪಡೆಯಲು ಬಂದಿದ್ದರು.
ಆದರೆ ಆಸ್ಪತ್ರೆ ಸಿಬ್ಬಂದಿ ಕೋವಿಡ್ನಿಂದ ಮೃತಪಟ್ಟ 70 ವರ್ಷದ ಕೃಷ್ಣಪ್ಪ ಶವವನ್ನು ಮಂಜುನಾಥ್ ಕುಟುಂದವರಿಗೆ ನೀಡಿದ್ದಾರೆ. ಶವವನ್ನು ಪಡೆದ ಕುಟುಂಬದವರು ತಮ್ಮ ಊರಿಗೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಶನಿವಾರ ಮಧ್ಯಾಹ್ನ 3 ಗಂಟೆಗೆ ಕೃಷ್ಣಪ್ಪ ಕುಟುಂಬದವರು ಶವ ಪಡೆಯಲು ಬಂದಾಗ ಶವ ಅದಲು ಬದಲಾಗಿರುವ ವಿಚಾರ ಬೆಳಕಿಗೆ ಬಂದಿದೆ. ಮಂಜುನಾಥ್ ಶವ ನೋಡಿದ ಕುಟುಂಬದವರು ಆಸ್ಪತ್ರೆ ಸಿಬ್ಭಂದಿಗೆ ವಿಚಾರ ತಿಳಿಸಿದ್ದಾರೆ.
ತಕ್ಷಣ ಆಸ್ಪತ್ರೆ ಸಿಬ್ಭಂದಿ ಮಂಜುನಾಥ್ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಕುಟುಂಬದವರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಆನೇಕಲ್ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಮಂಜುನಾಥ್ ಕುಟುಂಬದವರು ಆನೇಕಲ್ ತಹಶೀಲ್ದಾರ್ಗೆ ಈ ಕುರಿತು ದೂರು ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೋವಿಡ್ ಮಾರ್ಗಸೂಚಿ ಪ್ರಕಾರ ರಕ್ತ ಸಂಬಂಧಿಗಳು ಶವದ ಗುರುತು ಪತ್ತೆ ಹಚ್ಚಿದ ಬಳಿಕ ಸಹಿ ಪಡೆದು ಶವವನ್ನು ಹಸ್ತಾಂತರ ಮಾಡಲಾಗುತ್ತದೆ. ಆದರೆ ಈ ಪ್ರಕರಣಲ್ಲಿ ಮಂಜುನಾಥ್ ಪುತ್ರ ಶವದ ಗುರುತು ಹಿಡಿಯಲಿಲ್ಲ ಎಂದು ಆರೋಪಿಸಲಾಗಿದೆ.












Click it and Unblock the Notifications