ಒಳಚರಂಡಿ ಮಣ್ಣು ಕುಸಿತ: ಓರ್ವ ಕಾರ್ಮಿಕ ಸಾವು
ಬೆಂಗಳೂರು, ಡಿಸೆಂಬರ್ 20: ಒಳಚರಂಡಿ ಮಣ್ಣು ಕುಸಿದ ಪರಿಣಾಮ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರನ್ನು ರಕ್ಷಣೆ ಮಾಡಿರುವ ಘಟನೆ ಬುಧವಾರ ರಾಜರಾಜೇಶ್ವರಿನಗರದಲ್ಲಿ ನಡೆದಿದೆ.
ರಾಜರಾಜೇಶ್ವರಿನಗರ ಪದ್ಮಾವತಿ ಕಲ್ಯಾಣ ಮಂಟಪದ ಬಳಿ ನಡೆಯುತ್ತಿದ್ದ ಒಳಚರಂಡಿ ಪೈಪ್ ಲೈನ್ ಕಾಮಗಾರಿ ಕಾಮಗಾರಿ ವೇಳೆ ಕಾಲುವೆಯ ತಡೆಗೋಡೆ ಮಣ್ಣು ಕುಸಿದು ಓರ್ವ ಕಾರ್ಮಿಕ ಮೃತಪಟ್ಟಿದ್ದು ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಲಬುರಗಿ ಮೂಲದ ಮಡಿವಾಳಪ್ಪ(26) ಮೃತರು.ರಾಜಕಾಲುವೆಗೆ ಸೇರುತ್ತಿದ್ದ ಒಳಚರಂಡಿ ನೀರು ತಪ್ಪಿಸುವ ಸಲುವಾಗಿ 100 ಮೀಟರ್ ಒಳಚರಂಡಿ ಪೈಪ್ ಅಳವಡಿಸುವ ಕಾಮಗಾರಿಯನ್ನು ಏಳು ಕಾರ್ಮಿಕರು ಮತ್ತು ಜೆಸಿಬಿ ಬುಧವಾರ ಕಾರ್ಯ ನಿರ್ವಹಿಸುತ್ತಿತ್ತು.
ಮಧ್ಯಾಹ್ನ 1.20ರ ಸುಮಾರಿಗೆ ರಾಜಕಾಲುವೆಯ ತಡೆಗೋಡೆ ಮಣ್ಣು ಕುಸಿದು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ್ದರು. ಸ್ಥಳೀಯರು ನಾಲ್ಕು ಮಂದಿಯನ್ನು ರಕ್ಷಣೆ ಮಾಡಿದ್ದರು.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಸಾಮಕ ಸಿಬ್ಬಂದಿಗಳು ಇಬ್ಬರನ್ನು ರಕ್ಷಿಸಿದ್ದರು. ಮಡಿವಾಳಪ್ಪನ ಮೇಲೆ ಭಾರಿ ಪ್ರಮಾಣದ ಮಣ್ಣು ಬಿದ್ದಿತ್ತು. ಜತೆಗೆ ರಾಜಕಾಲುವೆ ನೀಡು ಹರಿಯುತ್ತಿದ್ದ ಹಿನ್ನೆಲೆಯಲ್ಲಿ ವೇಗವಾಗಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ. ಸತತ ಕಾರ್ಯಾಚರಣೆ ಬಳಿಕ ರಾತ್ರಿ 10 ಗಂಟೆಗೆ ಸುಮಾರಿಗೆ ಮಡಿವಾಳಪ್ಪನ ಶವ ಹೊರತೆಗೆಯಲಾಯಿತು.