ಬೆಂಗಳೂರು: ಹೆಬ್ಬಾಳದಿಂದ ಏರ್ಪೋರ್ಟ್ಗೆ ಮೆಟ್ರೋ ಸಂಪರ್ಕ; ಸಿಎಂ ಬೊಮ್ಮಾಯಿ
ಬೆಂಗಳೂರು, ಫೆಬ್ರವರಿ 15: "ರಾಜಧಾನಿ ಬೆಂಗಳೂರು ನಗರದಲ್ಲಿ ಬಿಎಂಆರ್ಸಿಎಲ್ನಿಂದ ಹೆಬ್ಬಾಳದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
"ರಾಜಧಾನಿ ಬೆಂಗಳೂರಿಗೆ ಶ್ರೀಮಂತ ಇತಿಹಾಸ ಹಾಗೂ ಶ್ರೀಮಂತ ಸಂಸ್ಕೃತಿ ಇದೆ. ದೇಶದೆಲ್ಲೆಡೆಯಿಂದ ಬಂದು ನೆಲೆಸುವ ಜನರು ಈ ನಗರದ ಸಂಸ್ಕೃತಿಯನ್ನು ತಮ್ಮದಾಗಿಸಿಕೊಳ್ಳುವಂತಿರಬೇಕು. ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಒಂದು ಸವಾಲಾಗಿದೆ. ಫೆರಿಫೆರಲ್ ರಿಂಗ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಹೆಬ್ಬಾಳ ಫ್ಲೈಓವರ್ ಅನ್ನು ದೊಡ್ಡದು ಮಾಡುವ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಲಾಗಿದೆ. ಇದರಿಂದ ವಾಹನ ದಟ್ಟಣೆಯನ್ನು ಕಡಿಮೆಗೊಳಿಸಬಹುದಾಗಿದೆ," ಎಂದರು.
ಬೆಂಗಳೂರು ವಾಸಯೋಗ್ಯ ನಗರ
"ಬೆಂಗಳೂರಿನ ಅಭಿವೃದ್ಧಿಗಾಗಿ 6 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ. 1500 ಕೋಟಿ ರೂ.ಗಳನ್ನು ಒಳಚರಂಡಿ ವ್ಯವಸ್ಥೆಗೆ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಉತ್ತಮವಾದ ವಾಸಯೋಗ್ಯ ನಗರವಾಗಲಿದೆ. ನಗರ ಯೋಜನೆಯಲ್ಲಿನ ಎಲ್ಲ ಅಡಚಣೆಗಳನ್ನು, ಸವಾಲುಗಳನ್ನು ನಿವಾರಿಸಿ ಬೆಂಗಳೂರಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು, ಮುಂಬೈ, ಚೆನ್ನೈ, ಹೈದರಾಬಾದ್ ನಗರಗಳಿಗೆ ನೇರ ಸಂಪರ್ಕ ಒದಗಿಸುವ ಸಿಗ್ನಲ್ ರಹಿತ 12 ಕಾರಿಡಾರ್ಗಳನ್ನು ನಿರ್ಮಿಸಲಾಗುವುದು, ಈ ಕುರಿತು ಬೆಂಗಳೂರು ವಿಷನ್ ಬಿಡುಗಡೆ ಮಾಡಲಾಗಿದೆ," ಎಂದು ತಿಳಿಸಿದರು.

ಇಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಔಟರ್ ರಿಂಗ್ ರಸ್ತೆಯ ತ್ರಿಪಥ ಮೇಲುಸೇತುವೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಸಿಎಂ ಬೊಮ್ಮಾಯಿ, ಶಿಕ್ಷಣ, ಆರೋಗ್ಯ ಮುಂತಾದ ಎಲ್ಲ ಅಗತ್ಯಗಳನ್ನು ನೋಡಿಕೊಳ್ಳುವ ಸುವ್ಯವಸ್ಥಿತ ಬೆಂಗಳೂರನ್ನು ಕಟ್ಟಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಾಮಾಜಿಕ ಕೆಲಸಗಳಿಗೆ ಮುಂದಾಗಿರುವ ಮಾನ್ಯತಾ ಪಾರ್ಕ್, ಹಿಂದೆ ಇದ್ದ ನಾಗರಿಕ ಸಮಾಜವನ್ನು ಕಟ್ಟಬೇಕು. ಯಾವುದೇ ನಗರದಲ್ಲಿ ನಾಗರಿಕ ಸಂಸ್ಥೆಗಳಿರಬೇಕು. ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವುಗಳಿಗೆ ಪರಿಹಾರ ದೊರಕಿಸಬೇಕು ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಬೆಳವಣಿಗೆಯಾಗುತ್ತಲೇ ಇರುವ ನಗರ. ಇಲ್ಲಿ ಶಿಕ್ಷಣ, ಕೆಲಸ, ವ್ಯಾಪಾರಕ್ಕಾಗಿ ಬರುವ ಜನ ಇಲ್ಲಿಯೇ ನೆಲೆಸುತ್ತಾರೆ. ರಾಜಧಾನಿಯಲ್ಲಿನ ಸೌಲಭ್ಯಗಳು ಅದನ್ನು ಜನಪ್ರಿಯಗೊಳಿಸಿವೆ ಎಂದರು.
ಬೆಂಗಳೂರನ್ನು ಯೋಜನಾಬದ್ಧವಾಗಿ ಬೆಳೆಸಬೇಕು
"ಬೆಂಗಳೂರಿನ ಗತ ವೈಭವವನ್ನು ನೆನೆಸುವ ಹಾಗೂ ಭವಿಷ್ಯದತ್ತ ದಾಪುಗಾಲು ಹಾಕುತ್ತಿರುವ ಬೆಂಗಳೂರು ನಿರ್ಮಿಸುವ ಕನಸು ನನ್ನದು. ಯಾವುದೇ ಮಾದರಿಯನ್ನು ನಾವು ಅನುಸರಿಸಬೇಕಿಲ್ಲ. ನಾವು ಮೂಲ ಜನ. ನಗರವನ್ನು ಯೋಜನಾರಹಿತವಾಗಿ ಬೆಳೆಸುವುದನ್ನು ತಡೆದು ಯೋಜನಾ ಬದ್ಧವಾಗಿ ಬೆಳೆಸಬೇಕು. ಎಲ್ಲಾ ಉತ್ತಮ ಮತ್ತು ಆಧುನಿಕ ಸೌಲಭ್ಯಗಳನ್ನು ಹೊಂದಿರುವ, ಸಾರಿಗೆ ವ್ಯವಸ್ಥೆಗಳಿರಬೇಕು. ಇದು ದೊಡ್ಡ ಸವಾಲು. ಬೆಂಗಳೂರು ನಾಲ್ಕು ದಿಕ್ಕುಗಳಲ್ಲಿಯೂ ಬೆಳೆಯುತ್ತಿದೆ. ನಗರ ಅಡ್ಡವಾಗಿ ಬೆಳೆಯುತ್ತಿದ್ದು, ಅದರಿಂದ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮುಂಬೈಯಂತಹ ನಗರಗಳು ಲಂಬವಾಗಿ ಬೆಳೆದು ಯುಜಿಡಿ, ನೀರು ಸರಬರಾಜು ಮುಂತಾದವುಗಳ ಅಂತರ ಕಡಿಮೆಯಿದೆ. ಗ್ರಾಮಗಳನ್ನು ನಗರಗಳಾಗಿ ಪರಿವರ್ತಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ಮಾಡಿದ್ದೇವೆ. ಸರ್ಕಾರ, ಬಿಬಿಎಂಪಿ ಬೆಸ್ಕಾಂ, ಬೆಂಗಳೂರು ನೀರು ಸರಬರಾಜು ಮಂಡಳಿ, ಬಿಡಿಎ, ಹಾಗೂ ಮತ್ತಿತರ ಏಜೆನ್ಸಿಗಳ ಮೇಲೆ ಹಾಗೂ ಬೆಂಗಳೂರಿನ ಜನತೆಯ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ ಎಂದು ತಿಳಿಸಿದರು.
ಐಟಿ- ಬಿಟಿ ಬೆಂಗಳೂರು
ಐಟಿ ನಗರವಾಗಿರುವ ಬೆಂಗಳೂರು ಇನ್ನು ಮುಂದೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ನವೀಕೃತ ಇಂಧನ, ಸೆಮಿ ಕಂಡಕ್ಟರ್ ಸೇರಿದಂತೆ ಎಲ್ಲ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಂತಹ ನಗರವಾಗಬೇಕು. ನಗರದಲ್ಲಿ ಎಚ್ಎಎಲ್, ಬಿಇಎಲ್, ಎಚ್ಎಂಟಿ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಉತ್ತಮ ಇಂಜಿನಿಯರಿಂಗ್ ಉತ್ಪಾದನೆಗಳನ್ನು ಉತ್ಪಾದಿಸಲಾಗುತ್ತಿದ್ದು, ಅತ್ಯುತ್ತಮ ಸಂಶೋಧನಾ ಕೇಂದ್ರಗಳನ್ನು ಹೊಂದಿವೆ.
ಆರ್ ಎಂಡ್ ಡಿ ವಲಯದಲ್ಲಿನ ಈ ಕೌಶಲ್ಯವೇ ಬೆಂಗಳೂರು ನಗರವನ್ನು ಐಟಿ ಬಿಟಿ ನಗರವನ್ನಾಗಿಸಿದೆ. ಪ್ರಸ್ತುತ ರಕ್ಷಣಾವಲಯ, ಇಸ್ರೋ, ಬಯೋಟೆಕ್, ಆಹಾರ, ಏರೋಸ್ಪೇಸ್ ಸೇರಿದಂತೆ ಹಲವಾರು ಕ್ಷೇತ್ರಗಳ ಸಂಶೋಧನಾ ಕೇಂದ್ರಗಳಿವೆ. 180 ಸಂಶೋಧನಾ ಕೇಂದ್ರಗಳು ಬೆಂಗಳೂರು ನಗರದಲ್ಲಿವೆ. ಬೆಂಗಳೂರಿನ ಭದ್ರ ಭವಿಷ್ಯಕ್ಕೆ ಇವುಗಳನ್ನು ಬಂಡವಾಳವಾಗಿಸಿಕೊಳ್ಳಬೇಕು. ನಾಡಿನ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ ನೀಡಬೇಕಿದೆ ಎಂದು ತಿಳಿಸಿದರು.
ಯೋಜನಾ ಬದ್ಧವಾದ ನಗರ; ಉತ್ತಮ ಭವಿಷ್ಯದ ಗುರಿ
ಬೆಂಗಳೂರು ನಗರವನ್ನು ಮೂಲ ಬೆಂಗಳೂರಿನ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಅನೇಕ ಅಭಿಪ್ರಾಯಗಳು, ಮಾರ್ಗದರ್ಶನ ನಮಗೆ ಬೇಕಿದೆ. ಯೋಜನಾಬದ್ಧವಾದ, ಉತ್ತಮ ಭವಿಷ್ಯದ ಗುರಿ ಇರುವ ನಗರವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದರು
183 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಿಂಗ್ ರಸ್ತೆ ಮತ್ತು ಮಾನ್ಯತಾ ಟೆಕ್ ಪಾರ್ಕ್ನ ಫ್ಲೈಓವರ್ ವಾಹನ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸಲಿದೆ. ಖಾಸಗಿ ಸಂಸ್ಥೆಗಳ ಇಂತಹ ಉಪಕ್ರಮ ನಗರಕ್ಕೆ ಬಹಳ ಸಹಕಾರಿಯಾಗಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸಿದ ಎಂಬೆಸ್ಸಿ ಗ್ರೂಪ್ಗೆ ಮುಖ್ಯಮಂತ್ರಿಗಳು ಅಭಿನಂದಿಸಿದರು.












Click it and Unblock the Notifications