ಪ್ರತಿ ಜಿಲ್ಲೆಯಲ್ಲೂ ಒಂದು ಲಕ್ಷ ಉದ್ಯೋಗ ಸೃಷ್ಟಿ: ಸಿಎಂ ಭರವಸೆ
ಬೆಂಗಳೂರು, ಫೆಬ್ರವರಿ 18: ರಾಜ್ಯದ ಆಯ್ದ 9 ಜಿಲ್ಲೆಗಳಲ್ಲಿ ಅಲ್ಲಿನ ವೈವಿಧ್ಯತೆಗನುಗುಣವಾಗಿ ಕೈಗಾರಿಕೆ ಕ್ಲಸ್ಟರ್ ಸ್ಥಾಪಿಸಲಾಗುತ್ತಿದ್ದು ಪ್ರತಿ ಜಿಲ್ಲೆಯಲ್ಲೂ ಒಂದು ಲಕ್ಷ ಉದ್ಯೋಗವನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ನಗರದ ಖಾಸಗಿ ಹೊಟೆಲ್ನಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಜವಳಿ ಕ್ಲಸ್ಟರ್, ಕೊಪ್ಪಳ ಟಾಯ್ಸ್ ಕ್ಲಸ್ಟರ್ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯೋಜಿಸಿತ್ತು.
ಕರ್ನಾಟಕ ರಾಜ್ಯದ ಅಭಿವೃದ್ಧಿ ಶೇ10 ಇದ್ದು, ಇದು ಒಟ್ಟಾರೆ ರಾಷ್ಟ್ರದ ಅಭಿವೃದ್ಧಿ ದರಕ್ಕಿಂತಲೂ ಹೆಚ್ಚಿದೆ ಎಂದ ಅವರು, ವಿಶ್ವ ದರ್ಜೆಯ ಕೈಗಾರಿಕಾ ಕ್ಲಸ್ಟರ್ಗಳನ್ನು ಸ್ಥಾಪಿಸುವ ಉದ್ದೇಶ ಇದ್ದು, ಅದರ ಭಾಗವಾಗಿ ಮೊದಲಿಗೆ ಕೊಪ್ಪಳ ಹಾಗೂ ಬಳ್ಳಾರಿ ಎರಡು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದರು.

ಯುವ ಸಮುದಾಯಕ್ಕೆ ಉದ್ಯೋಗ, ಆರ್ಥಿಕ ಸುಧಾರಣೆ, ಮಹಿಳಾ ಸ್ವಾವಲಂಬನೆಗೆ ಈ ಕೈಗಾರಿಕಾ ಕ್ಲಸ್ಟರ್ಗಳು ಸಹಕಾರಿ ಆಗಲಿವೆ. ಈ ಕೈಗಾರಿಕಾ ಕ್ಲಸ್ಟರ್ಗಳಿಗೆ ಹೂಡಿಕೆ ಸ್ನೇಹಿ ಪರಿಸರ ನಿರ್ಮಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಬಳ್ಳಾರಿ, ಮೈಸೂರು, ಚಿತ್ರದುರ್ಗ, ಕಲಬುರಗಿಗಳಲ್ಲಿ ರಾಜ್ಯಮಟ್ಟದ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಿ ತಲಾ 5 ಕೋಟಿ ನೀಡಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ 7940 ಕಿ.ಮೀ. ರಸ್ತೆ-ಸೇತುವೆ ನಿರ್ಮಾಣ ಮಾಡುವ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಒತ್ತು ನೀಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಮಾತನಾಡಿ, ಮೈತ್ರಿ ಸರ್ಕಾರವು ನೀಡಿದ್ದ ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಯ ಭರವಸೆಯನ್ನು ಈಡೇರಿಸಲು ಕೈಗಾರಿಕಾ ಕ್ಲಸ್ಟರ್ ಮೊದಲ ಹೆಜ್ಜೆ ಆಗಲಿದೆ. 9 ಕೈಗಾರಿಕಾ ಕ್ಲಸ್ಟರ್ಗೆ 1.5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗುವ ಅಂದಾಜಿದೆ ಎಂದರು.











Click it and Unblock the Notifications