ಟೆಕ್ಕಿ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ
ಬೆಂಗಳೂರು, ಫೆಬ್ರವರಿ: 05: ಅತನಿಗೆ ಮದುವೆಯಾಗಿ ಹದಿನೈದು ವರ್ಷಗಳೇ ಅಗಿವೆ. ಹನ್ನೊಂದು ವರ್ಷದ ಮಗ ಕೂಡ ಇದ್ದಾನೆ. ಹೀಗಿದ್ದರೂ 38 ವರ್ಷ ವಯಸ್ಸಿನ ಹೆಂಡತಿ ರಾತ್ರಿ ವೇಳೆ ಚಿಯರ್ಸ್ ಗರ್ಲ್ ನಂತೆ ಬೇರೆಯವರ ಜತೆ ಕುಣಿಯಬೇಕಂತೆ !
ಟೆಕ್ಕಿಯ ವಿಕೃತ ಆಸೆ ತೀರಿಸಲಾಗದೇ ಆತನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತ್ನಿಯ ಆತ್ಮಹತ್ಯೆಗೆ ಕಿರುಕುಳ ನೀಡಿದ ಆರೋಪದಡಿ ಸಾಫ್ಟ್ ವೇರ್ ಇಂಜಿನಿಯರ್ ನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ವರ್ತೂರಿನ ನಿವಾಸಿ ಪದ್ಮಾವತಿ (38) ಆತ್ಮಹತ್ಯೆ ಮಾಡಿಕೊಂಡವರು. ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅರೋಪದಡಿ ಬಂಧನಕ್ಕೆ ಒಳಗಾಗಿದ್ದು ಪ್ರತಿಷ್ಠಿತ ಕಂಪನಿ ಸಾಫ್ಟ್ ವೇರ್ ಎಂಜಿನಿಯರ್ ಭಾಸ್ಕರ್. ಈ ಕುರಿತು ವರ್ತೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರತಿಷ್ಠಿತ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಭಾಸ್ಕರ್ ಹದಿನೈದು ವರ್ಷಗಳ ಹಿಂದೆ ಪದ್ಮಾವತಿಯವರನ್ನು ಮದುವೆಯಾಗಿದ್ದರು. ಇಬ್ಬರಿಗೆ ಹನ್ನೊಂದು ವರ್ಷದ ಮಗನಿದ್ದಾನೆ. ವಾರದ ರಜೆ ಬಂದರೆ ಸಾಕು ಪತ್ನಿಯನ್ನು ಚಿಯರ್ಸ್ ಗರ್ಲ್ ನಂತೆ ಕುಣಿಯಲು ಪೀಡಿಸುತ್ತಿದ್ದ. ಕುಣಿಯದಿದ್ದರೆ ಟಾರ್ಚರ್ ಕೊಡುತ್ತಿದ್ದ. ನಲವತ್ತು ವರ್ಷದ ಪದ್ಮಾವತಿಗೆ ಇದು ಇರುಸು ಮುರುಸು ಉಂಟು ಮಾಡುತ್ತಿತ್ತು. ಸ್ನೇಹಿತರ ಜತೆ ಕುಣಿಯಲು ಪೀಡಿಸುತ್ತಿದ್ದ. ನಿರಾಕರಿಸಿದರೆ ಮನೆಗೆ ಬಂದು ರಾಕ್ಷಸನಂತೆ ನಡೆದುಕೊಳ್ಳುತ್ತಿದ್ದ. ಇದರಿಂದ ಬೇಸತ್ತ ಪದ್ಮಾವತಿ ಮೂರು ಬಾರಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಇದು ಪೋಷಕರಿಗೆ ಗೊತ್ತಾಗಿ ಭಾಸ್ಕರ್ ಗೆ ಬುದ್ಧಿವಾದ ಹೇಳಿದ್ದರು.
Recommended Video
ಅತಿಯಾದ ಮೋಜು ಮಸ್ತಿ ಮೈಗೂಡಿಸಿಕೊಂಡಿದ್ದ ಭಾಸ್ಕರ್ ಇತ್ತೀಚೆಗೆ ಕುಣಿಯುವ ವಿಚಾರವಾಗಿಯೇ ಜಗಳ ತೆಗೆದಿದ್ದಾನೆ. ಇದರಿಂದ ನೊಂದ ಪದ್ಮಾವತಿ ಜ. 28 ರಂದು ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ದಿನ ತನ್ನ ಸಂಬಂಧಿಕರ ಜತೆ ಗಂಡ ನೀಡುತ್ತಿರುವ ಕಿರುಕುಳದ ಬಗ್ಗೆ ವಿವರಿಸಿದ್ದಾರೆ. ಈ ವಿಷಯ ತಾಯಿ ಲೀಲಾವತಿ ಗಮನಕ್ಕೂ ತರಲಾಗಿದೆ. ಬೇರೆ ಮಹಿಳೆಯರ ಜತೆ ಸಂಪರ್ಕ ಇಟ್ಟುಕೊಂಡಿರುವ ಬಗ್ಗೆ ಪತಿಯೇ ಪದ್ಮಾವತಿಗೆ ಹೇಳಿ ನಾನಾ ರೀತಿಯಲ್ಲಿ ಹಿಂಸೆ ನೀಡಿದ್ದಾರೆ. ಇದರಿಂದ ಬೇಸತ್ತ ಪದ್ಮಾವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪದ್ಮಾವತಿ ತಾಯಿ ಲೀಲಾವತಿ ಅವರು ನೀಡಿದ ದೂರಿನ ಮೇರೆಗೆ ಭಾಸ್ಕರ್ ನನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ.