ಆರ್. ಆರ್. ನಗರ ಉಪ ಚುನಾವಣೆ; ಬಿಜೆಪಿಯಿಂದ ಬ್ರೇಕಿಂಗ್ ನ್ಯೂಸ್!
ಬೆಂಗಳೂರು, ಆಗಸ್ಟ್ 31: ಬೆಂಗಳೂರಿನ ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣೆ ಯಾವಾಗ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದರೆ, ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಯಾರಿಗೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
Recommended Video
ಮಾಜಿ ಶಾಸಕರ ಮುನಿರತ್ನ ಮತ್ತು ಕಳೆದ ಬಾರಿಯ ಚುನಾವಣೆಯಲ್ಲಿ ಸೋತಿದ್ದ ತುಳಸಿ ಮುನಿರಾಜು ಗೌಡ ಟಿಕೆಟ್ ಆಕಾಂಕ್ಷಿಗಳು. ಈಗಾಗಲೇ ಕ್ಷೇತ್ರಕ್ಕೆ ಶಾಸಕರು ಇಲ್ಲದೇ ವರ್ಷಗಳು ಕಳೆದಿವೆ. ಉಪ ಚುನಾವಣೆ ಯಾವಾಗ ಎಂಬುದು ಖಚಿತವಾಗಿಲ್ಲ.
ಕೆಲವು ದಿನಗಳ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಮುನಿರತ್ನ, "ರಾಜಕೀಯ ದ್ವೇಷಕ್ಕೆ ಒಂದು ವಿಧಾನಸಭಾ ಕ್ಷೇತ್ರವನ್ನು ಬಲಿ ತೆಗೆದುಕೊಳ್ಳಬಾರದು. ರಾಜಕೀಯ, ವೈಯಕ್ತಿಕ ದ್ವೇಷಕ್ಕೆ ಒಂದು ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗಬಾರದು" ಎಂದು ಹೇಳಿದ್ದರು.
ಕಾಂಗ್ರೆಸ್ನಿಂದ ಆರ್. ಆರ್. ನಗರದಲ್ಲಿ ಯಾರಿಗೆ ಟಿಕೆಟ್ ನೀಡಲಾಗುತ್ತದೆ? ಎಂಬ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಹನುಮಂತರಾಯಪ್ಪ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಇದು ಸುಳ್ಳು ಎಂದು ಜೆಡಿಎಸ್ ಸ್ಪಷ್ಟನೆಯನ್ನು ಕೊಟ್ಟಿತ್ತು.

ಮುನಿರಾಜು ಗೌಡ ಹೇಳಿಕೆ
ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜು ಗೌಡ ಹೇಳಿಕೆ ನೀಡಿದ್ದಾರೆ. "ಉಪ ಚುನಾವಣೆಗೆ ಟಿಕೆಟ್ ಕೊಡುವ ವಿಚಾರದಲ್ಲಿ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ವಿರುದ್ಧ ಹೆಜ್ಜೆ ಇಡುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಕೊನೆಯ ತನಕ ಪ್ರಯತ್ನ ನಡೆಸುವೆ
"ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ಅವರ ಪರವಾಗಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ಕಳೆದ ಬಾರಿ ಆ ಕ್ಷೇತ್ರದಲ್ಲಿ ಸೋತ ಕಾರಣ ಟಿಕೆಟ್ಗಾಗಿ ಕೊನೆಯ ತನಕ ಪ್ರಯತ್ನ ನಡೆಸುತ್ತೇನೆ" ಎಂದು ಮುನಿರಾಜು ಗೌಡ ಹೇಳಿದ್ದಾರೆ.

2018ರ ಫಲಿತಾಂಶ
2018ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಮುನಿರತ್ನ ಆರ್. ಆರ್. ನಗರದಲ್ಲಿ ಕಣಕ್ಕಿಳಿದು 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು. ಈಗ ರಾಜಕೀಯ ಚಿತ್ರಣ ಬದಲಾಗಿದ್ದು, ಮುನಿರತ್ನ ಕಾಂಗ್ರೆಸ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಈಗ ಬಿಜೆಪಿಯಲ್ಲಿದ್ದಾರೆ. ಆದ್ದರಿಂದ, ಟಿಕೆಟ್ ಯಾರಿಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮುನಿರಾಜು ಗೌಡ ಸೋಲು
ಕಳೆದ ಬಾರಿ ಮುನಿರಾಜು ಗೌಡ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 82,573 ಮತಗಳನ್ನು ಪಡೆದು ಸೋಲು ಕಂಡಿದ್ದರು. ಚುನಾವಣಾ ಫಲಿತಾಂಶದ ಕುರಿತು ಅವರು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ತರಕಾರು ಅರ್ಜಿಯ ವಿಚಾರಣೆಯ ಕಾರಣ ಆರ್. ಆರ್. ನಗರ ಕ್ಷೇತ್ರಕ್ಕೆ ಇನ್ನೂ ಉಪ ಚುನಾವಣೆ ನಡೆದಿಲ್ಲ.

ಜೆಡಿಎಸ್ ಅಭ್ಯರ್ಥಿ ಯಾರು?
2018ರ ಚುನಾವಣೆಯಲ್ಲಿ ನಟಿ ಅಮೂಲ್ಯ ಮಾವ ಜಿ. ಎಚ್. ರಾಮಚಂದ್ರ ಜೆಡಿಎಸ್ನಿಂದ ಕಣಕ್ಕಿಳಿದಿದ್ದರು. 60,360 ಮತಗಳನ್ನು ಪಡೆದಿದ್ದರು. ಆದರೆ, ಈಗ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಅಂತಿಮವಾಗಿಲ್ಲ.












Click it and Unblock the Notifications