ಜಲಮಂಡಳಿ ಟ್ಯಾಂಕರ್ ಗೆ ಕುಸಿದ ಬೇಡಿಕೆ
ಬೆಂಗಳೂರು, ಏಪ್ರಿಲ್ 14: ನಗರದಲ್ಲಿ ಬಿಸಿಲ ಝಳ ಏರುತ್ತಿದ್ದಂತೆ ನೀರಿನ ಬೇಡಿಕೆಯಲ್ಲೂ ಏರಿಕೆಯಾಗುತ್ತಿದೆ. ರಾಜಕೀಯ ಪಕ್ಷಗಳ ಮುಖಂಡರು ಕೆಲವು ಕಡೆ ಉಚಿತವಾಗಿ ಟ್ಯಾಂಕರ್ ನೀರು ಪೂರೈಸುತ್ತಿರುವದರಿಂದ ಜಲಮಂಡಳಿಯ ನೀರಿನ ಟ್ಯಾಂಕರ್ ಗಳಿಗೆ ಬೇಡಿಕೆ ಇಲ್ಲದಂತಾಗಿದೆ.
ಮತದಾರರ ವಿಶ್ವಾಸ ಗಳಿಸುವ ಪ್ರಯತ್ನವಾಗಿ ಟಿಕೆಟ್ ಆಕಾಂಕ್ಷಿಗಳು, ಶಾಸಕರು ಬೆಂಬಲಿಗರು ನೀರಿನ ಸಮಸ್ಯೆ ಇರುವ ಕಡೆ ಹಾಗು ಬಡ ಹಾಗೂ ಮಧ್ಯಮ ವರ್ಗದವರು ನೆಲೆಸಿರುವ ಪ್ರದೇಶಗಳನ್ನು ಗುರುತಿಸಿ ಪ್ರತಿದಿನ ಉಚಿತವಾಗಿ ಒಂದರಿಂದ ಎರಡು ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ.
ನಗರದ ಹೊರಭಾಗದಲ್ಲಿ ಹೊಸ ಪ್ರದೇಶಗಳಲ್ಲಿ ಹಾಗೂ ಕಾವೇರಿ ನೀರು ಪೂರೈಕೆ ಇಲ್ಲದ ಕಡೆಗಳಲ್ಲಿ ಹಾಗೂ ಕಾವೇರಿ ನೀರು ಸಮರ್ಪಕವಾಗಿ ಬಾರದ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಹರಿಸಲಾಗುತ್ತದೆ. ಹಿಂದಿನ ವರ್ಷಗಳ ಇದೇ ಅವಧಿಯಲ್ಲಿ ಜಲಮಂಡಳಿಯ ಟ್ಯಾಂಕರ್ ಗೆ ಭಾರಿ ಬೇಡಿಕೆ ಬಂದಿತ್ತು.

ಜಲಮಂಡಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಸರಾಸರಿ 2,800 ದೂರುಗಳು ಬರುತ್ತಿವೆ. ವಾರದಲ್ಲಿ ನಿಗದಿಪಡಿಸಿದ ದಿನದಂದು ನೀರು ಪೂರೈಕೆಯಾಗದಿದ್ದರೆ, ಆ ಕೊರತೆ ನೀಗಿಸಲು ಟ್ಯಾಂಕರ್ ನೀರು ಪೂರೈಸಲಾಗುತ್ತದೆ.
ಕೆಲ ಬಡಾವಣೆಗಳಲ್ಲಿ, ಕೊಳಗೇರಿಗಳಲ್ಲಿ ಪಕ್ಷಗಳ ಮುಖಂಡರು ತಮ್ಮ ಭಾವಚಿತ್ರವಿರುವ, ಪಕ್ಷದ ಚಿಹ್ನೆ ಇರುವ ಟ್ಯಾಂಕರ್ ಗಳಿಂದ ಉಚಿತವಾಗಿ ನೀರು ನೀಡುತ್ತಿದ್ದಾರೆ. ಹೀಗಾಗಿ ಜಲಮಂಡಳಿಯ ಟ್ಯಾಂಕರ್ ಅವಲಂಬನೆ ಕಡಿಮೆಯಾಗಿದೆ. ಜಲಮಂಡಳಿಯಿಂದ 65 ಟ್ಯಾಂಕರ್ ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. 6 ಸಾವಿರ ಲೀಟರ್ ಟ್ಯಾಂಕರ್ ಗೆ 600 ರೂ ದರವಿದೆ. ಕಾವೇರಿ ನೀರು ಪೂರೈಕೆಯಾಗದಿದ್ದಾಗ ಮಾತ್ರ ಉಚಿತವಾಗಿ ಟ್ಯಾಂಕರ್ ನೀರು ನೀಡಲಾಗುತ್ತದೆ. ಸಿ.ವಿ. ರಾಮನ್ ನಗರ, ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಹಲವೆಡೆ ನೀರಿನ ಟ್ಯಾಂಕರ್ ಗಳ ಸಂಚಾರ ಹೆಚ್ಚಿದೆ.












Click it and Unblock the Notifications