ಅವೈಜ್ಞಾನಿಕ ಕಾಮಗಾರಿಗಳೇ ಮರಗಳು ಧರೆಗುರುಳಲು ಕಾರಣ : ಅರಣ್ಯ ಇಲಾಖೆ ಎಚ್ಚರಿಕೆ
ಬೆಂಗಳೂರು, ಏಪ್ರಿಲ್ 26 : ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ವಿಪರೀತ ಕಾಮಗಾರಿಗಳಿಂದಾಗಿ ನಗರದಲ್ಲಿರುವ ಬಹುತೇಕ ಮರಗಳು ದುರ್ಬಲಗೊಂಡಿದೆ. ನಿನ್ನೆಯಷ್ಟೇ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದು, ಎರಡು ವರ್ಷದ ಮಗು ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದರು. ಇದಕ್ಕೆ ಕಾರಣ ನಗರ ಹಾಗೂ ಹೊರವಲಯದ ರಸ್ತೆಗಳಲ್ಲಿ ನಡೆಯುವ ಸಿವಿಲ್ ಕಾಮಗಾರಿ. ಹೀಗಾಗಿ ಇನ್ನು ಮುಂದೆ ಆದರೂ ನಿರ್ಲಕ್ಷ್ಯ ವಹಿಸದೇ ಎಚ್ಚರಿಕೆಯಿಂದ ಕಾಮಗಾರಿ ನಡೆಸಬೇಕಿದೆ. ಇಲ್ಲದಿದ್ದರೆ ಇಂತಹ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ನಗರದಲ್ಲಿ ಹೆಚ್ಚಾಗಿ ಮೈಸೂರು ರಸ್ತೆ, ಮಾಗಡಿ ರಸ್ತೆ, ಮಲ್ಲೇಶ್ವರಂ, ಪಾಸ್ ಏಸ್ ರಸ್ತೆ, ರಾಜಭವನ ರಸ್ತೆ, ಆರ್ಆರ್ ನಗರ, ಮಹದೇವಪುರ, ಬೆಳ್ಳಂದೂರು, ರಿಂಗ್ ರೋಡ್ ಸೇರಿದಂತೆ ಇನ್ನು ಕೆಲ ರಸ್ತೆಗಳಲ್ಲಿರುವ ಮರಗಳು ದುರ್ಬಲಗೊಂಡಿವೆ. ಇಲ್ಲಿ ಹೆಚ್ಚಾಗಿ ರಸ್ತೆ ಕಾಮಗಾರಿಗಳು ನಡೆಯುವುದರಿಂದ ಮರಗಳು ಬೀಳುವ ಹಂತದಲ್ಲಿದೆ ಎಂದು ಅಧಿಕಾರಿಗಳು ರಾಜ್ಯ ಸರ್ಕಾರವನ್ನ ಎಚ್ಚರಿಸಿದ್ದಾರೆ.
ಅರಣ್ಯ ಇಲಾಖೆ ಬೆಂಗಳೂರಿನಲ್ಲಿರುವ ಒಟ್ಟು ಮರಗಳ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಕುರಿತು ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ನಗರದಲ್ಲಿರುವ ಹಲವು ಮರಗಳು ದುರ್ಬಲಗೊಂಡಿದ್ದು, ಬೀಳುವ ಹಂತಕ್ಕೆ ತಲುಪಿದೆ ಎಂಬುದು ಗೊತ್ತಾಗಿದೆ. ಅಲ್ಲದೆ ಮರಗಳು ಈ ರೀತಿ ದುರ್ಬಲಗೊಳ್ಳಲು ಅವೈಜ್ಞಾನಿಕ ಕಾಮಗಾರಿಗಳನ್ನ ಹೆಚ್ಚಿಸಿರುವುದೇ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.
ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಇಂಧನ ಇಲಾಖೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಂತಹ ವಿವಿಧ ಸರ್ಕಾರಿ ಸಂಸ್ಥೆಗಳ ಎಂಜಿನಿಯರ್ಗಳ ಯೋಜಿತವಲ್ಲದ ಮತ್ತು ಅವೈಜ್ಞಾನಿಕ ಕಾಮಗಾರಿಗಳಿಂದ ಮರಗಳು ದುರ್ಬಲಗೊಳ್ಳುತ್ತಿವೆ ಎಂದು ಅಧಿಕಾರಿಗಳು ದೂರಿದ್ದಾರೆ.
ರಸ್ತೆ ಅಗಲೀಕರಣ, ಟಾರಿಂಗ್, ಕಾಂಕ್ರಿಟೀಕರಣ ಮತ್ತು ಯುಟಿಲಿಟಿ ಕೇಬಲ್ಗಳು ಮತ್ತು ಭೂಮಿ ಅಗೆದು ನೀರಿನ ಪೈಪ್ಗಳನ್ನ ಅಳವಡಿಸಲು ರಸ್ತೆ ಬದಿಯಲ್ಲಿರುವ ಮರಗಳ ಬೇರುಗಳನ್ನ ಕತ್ತರಿಸುವುದು ಸಹ ಮರಗಳ ಹಾನಿಗೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಮರದ ಸುತ್ತ ಕಾಂಕ್ರೀಟ್ ಮಾಡುವುದು. ಇದರಿಂದ ಜೋರಾದ ಗಾಳಿ, ಹಾಗೂ ಮಳೆ ಬಂದರೆ ಮರಗಳು ನೆಲಕ್ಕುರುಳುವ ಸಾಧ್ಯತೆ ಇದೆ. ಕೊಂಬೆಗಳ ಉದುರುವಿಕೆ, ಬೇಗನೆ ಒಣಗುವುದು, ತಡವಾಗಿ ಚಿಗುರೊಡೆಯವುದು ಅಥವಾ ಹೂ ಬಿಡುವುದು ಕೇವಲ ಹವಾಮಾನ ಬದಲಾವಣೆಯ ಲಕ್ಷಣಗಳಲ್ಲ. ಬದಲಾಗಿ ಕಾಂಕ್ರೀಟ್ ಅಥವಾ ಬೇರುಗಳನ್ನ ಕತ್ತರಿಸುವುದರಿಂದಲೂ ಮರಗಳು ದುರ್ಬಲಗೊಂಡು ಧರೆಗುರುಳುತ್ತವೆ. ಹೀಗಾಗಿ ಮುಂಬರುವ ಮಳೆಗಾಲದ ಸಂದರ್ಭದಲ್ಲಿ ನಾಗರಿಕರು ರಸ್ತೆಯಲ್ಲಿ ಚಲಿಸಬೇಕಾದರೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರ್ಕಾರಿ ಸಂಸ್ಥೆಗಳ ಅವೈಜ್ಞಾನಿಕ ಕಾಮಗಾರಿಯಿಂದ ಸ್ವಲ್ಪ ಹೊತ್ತು ನಗರದಲ್ಲಿ ಜೋರಾದ ಮಳೆ ಗಾಳಿ ಬಂದರೂ ಮರಗಳು ಧರೆಗುರುಳುವ ಸ್ಥಿತಿ ಇದೆ. ಇದಕ್ಕೆ ಪ್ರಮುಖ ಕಾರಣ ಯೋಜಿತವಲ್ಲದ ಕಾಮಗಾರಿ. ಇದರಿಂದಾಗಿ ಮಳೆ ಬಂದಾಗ ಎಷ್ಟೋ ಅಮಾಯಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನಾದರೂ ಸರ್ಕಾರ ಹಾಗೂ ಬಿಬಿಎಂಪಿ ಸೂಕ್ತ ಕ್ರಮ ಕೈಗೊಂಡು ಕಾಮಗಾರಿ ನಡೆಸುವ ವೇಳೆ ಮರಗಳಿಗೆ ಹಾನಿಯಾಗದಂತೆ ಕೆಲಸ ನಿರ್ವಹಿಸಲು ಸೂಚಿಸಬೇಕಿದೆ. ಇಲ್ಲದಿದ್ದರೆ ಮರಗಳು ನಾಶವಾಗುತ್ತವೆ, ಜೊತೆಗೆ ಮಳೆಗಾಲದ ಸಂದರ್ಭದಲ್ಲಿ ಮತ್ತಷ್ಟು ಜೀವಗಳು ಬಲಿಯಾಗಲು ಕಾರಣವಾಗುವ ಸಾಧ್ಯತೆ ಇದೆ. ಹೀಗಾಗಿ ಈಗಿನಿಂದಲೇ ಸೂಕ್ತ ಕ್ರಮ ಕೈಗೊಂಡು ದುರ್ಬಲಗೊಂಡ ಮರಗಳ ತೆರವು ಮಾಡುವುದು ಹಾಗೂ ಮರಗಳಿಗೆ ಹಾನಿಯಾಗದಂತೆ ಕಾಮಗಾರಿ ನಡೆಸಬೇಕಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ,