ಮಾಟ ಮಾಡಿಸಿದವರಿಗೆ ಒಳ್ಳೇದಾಗಲ್ಲ : ದೇವೇಗೌಡ
ಬೆಂಗಳೂರು, ಮಾ. 7 : "ನನಗೆ ಮತ್ತು ನನ್ನ ಕುಟುಂಬಕ್ಕೆ ದೇವರಲ್ಲಿ ನಂಬಿಕೆಯಿದೆ. ವಾಮಾಚಾರದಂತಹ ನೀಚ ಕೆಲಸಕ್ಕೆ ಕೈ ಹಾಕುವುದಿಲ್ಲ. ಅಂತಹ ಕೀಳುಮಟ್ಟದ ರಾಜಕಾರಣ ನನ್ನದಲ್ಲ" ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ಸಿನ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.
ಪಕ್ಷದ ಕಚೇರಿ ಖಾಲಿ ಮಾಡಿಸುವಾಗ ಮಾಟ, ಮಂತ್ರ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ನವರು ಕೀಳುಮಟ್ಟದ ಪ್ರತಿಕ್ರಿಯೆ ನೀಡಿದ್ದಾರೆ. ಮಾಟಮಂತ್ರದಲ್ಲಿ ನಮಗೆ ನಂಬಿಕೆಯಿಲ್ಲ. ಮಾಟಮಂತ್ರ ಮಾಡಿಸಿದವರಿಗೂ ಇದರಿಂದ ಒಳ್ಳೆಯದಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಶನಿವಾರ ಮಾತಿನ ಚಾಟಿ ಬೀಸಿದ್ದಾರೆ.
ನಗರದ ಸರ್ವಜ್ಞ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ದೇವೇಗೌಡರು, "ಕಾಂಗ್ರೆಸ್ನವರು ಎಲ್ಲಿಂದ ಯಾರನ್ನು ಕರೆಸಿ ಏನೇನು ಪೂಜೆ ಮಾಡಿಸುತ್ತಾರೆ ಎಂದು ನನಗೆ ಗೊತ್ತಿದೆ. ಅದನ್ನು ನಾನೇಕೆ ಹೇಳಲಿ ಎಂದು ತಿರುಗೇಟು ನೀಡಿದರು. [ಪರಮೇಶ್ವರ, ಗೌಡ ನಡುವೆ ನಿಂಬೆಹಣ್ಣು ಜಗಳ!]
ಕಾವೇರಿ ನ್ಯಾಯಾಧೀಕರಣ ಬೆಂಗಳೂರಿನ ಜನಸಂಖ್ಯೆ 3/1 ಭಾಗಕ್ಕೆ ಮಾತ್ರ ನೀರು ಕೊಡಲು ಸಾಧ್ಯ ಎಂದು ಹೇಳಿದೆ. ನಾನು ಈ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದಾಗ ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರು ತುಟಿ ಬಿಚ್ಚಲಿಲ್ಲ ಎಂದು ಟೀಕಾಪ್ರಹಾರವನ್ನು ಮುಂದುವರಿಸಿದರು. ಬೆಂಗಳೂರಿನ ಕುಡಿಯುವ ನೀರಿನ ವಿಷಯದಲ್ಲಿ ಆಗಿರುವ ದೊಡ್ಡ ಅನ್ಯಾಯವನ್ನು ಸರಿಪಡಿಸಲಿ ಎಂದು ಒತ್ತಾಯಿಸಿದರು.
ಜೆಪಿ ಭವನ : ದೇಶದಕ್ಕೆ ಎರಡನೇ ಸ್ವಾತಂತ್ರ್ಯ ತಂದುಕೊಟ್ಟ ಜೈಪ್ರಕಾಶ್ ನಾರಾಯಣ್ ಅವರ ಹೆಸರನ್ನು ಪಕ್ಷದ ನೂತನ ಕಚೇರಿಗೆ ನಾಮಕರಣ ಮಾಡುವುದಾಗಿ ಇದೇ ವೇಳೆ ದೇವೇಗೌಡರು ಘೋಷಣೆ ಮಾಡಿದರು. ಪಕ್ಷದ ಕಚೇರಿ ನಿರ್ಮಾಣಕ್ಕೆ ದೇಣಿಗೆ ನೀಡುವವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಪಾಲಿಕೆ ಚುನಾವಣೆ ಮುಂದೂಡುವ ಹುನ್ನಾರ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡುವ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆ ಮುಂದೂಡಲು ಹುನ್ನಾರ ನಡೆಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ದೂರಿದರು. ಕರ್ನಾಟಕ ರಾಜ್ಯ ದೊಡ್ಡದು ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ 8-10 ರಾಜ್ಯವನ್ನು ಮಾಡುತ್ತಾರೆಯೇ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಕಳ್ಳನಿಗೆ ಕಳ್ಳ ಸರ್ಟಿಫಿಕೇಟ್ : ಶಾಂತಿನಗರ ಹೌಸಿಂಗ್ ಸೊಸೈಟಿ ಹಗರಣದ ವಿಷಯದಲ್ಲಿ ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರು ಮತ್ತೊಬ್ಬ ಪ್ರಭಾವಿ ಸಚಿವರಿಗೆ ಕ್ಲೀನ್ಚಿಟ್ ನೀಡಿದ್ದಾರೆ. ಇದು ಒಬ್ಬ ಕಳನಿಗೆ ಮತ್ತೊಬ್ಬ ಕಳ ಕ್ಲೀನ್ಚಿಟ್ ನೀಡಿದಂತೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಪಕ್ಷದ ಸಂಘಟನೆಗೆ ಯುವ ಕಾರ್ಯಕರ್ತರ ದೊಡ್ಡ ಪಡೆಯನ್ನು ಕಟ್ಟುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಪಕ್ಷದ ಕಚೇರಿ ನಿರ್ಮಾಣಕ್ಕೆ ಬಿಬಿಎಂಪಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ಗೌಡ, ಅಮರನಾಥ್, ಕೃಷ್ಣಮೂರ್ತಿ ಸೇರಿದಂತೆ ಪಕ್ಷದ ಕೆಲ ಪ್ರಮುಖರು 25 ಲಕ್ಷ ರೂ.ಗಳ ಚೆಕ್ಕನ್ನು ದೇವೇಗೌಡರಿಗೆ ಹಸ್ತಾಂತರ ಮಾಡಿದರು. ರಮೇಶಗೌಡ ಅವರು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಬೆಳ್ಳಿ ಕಿರೀಟ ಹಾಗೂ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಂಡೆಪ್ಪಕಾಶ್ಯಂಪೂರ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕ ರಾಜಣ್ಣ, ಪಾಲಿಕೆ ಸದಸ್ಯರಾದ ಗೋವಿಂದೇಗೌಡ, ಆರ್.ಪ್ರಕಾಶ್, ಬಿಬಿಎಂಪಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ಗೌಡ, ಮಹಿಳಾ ಘಟಕದ ಅಧ್ಯಕ ಶಿಲಾನಾಯಕ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.