ರಾಘವೇಶ್ವರ ಶ್ರೀಗಳಿಗೆ ನಿಷ್ಠ : ಹವ್ಯಕ ಮಹಾಮಂಡಲ
ಬೆಂಗಳೂರು, ಡಿ. 20: ಸಾಗರದ ಬ್ರಾಸಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾನ ಮನಸ್ಕ ಹವ್ಯಕರ ಸಭೆಯು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮಿಗಳು ಪೀಠ ಬಿಟ್ಟಿಳಿಯಬೇಕೆಂದು ಆಗ್ರಹಿಸಿದೆ. ಆದರೆ, ಈ ಸಭೆಗೂ ಹವ್ಯಕ ಮಹಾಮಂಡಲಕ್ಕೂ ಸಂಬಂಧವಿಲ್ಲ ಎಂದು ಮಹಾಮಂಡಲವು ಸ್ಪಷ್ಟಪಡಿಸಿದೆ.
ಈ ಕುರಿತು ಹವ್ಯಕ ಮಹಾಮಂಡಲದ ಡಾ. ವೈ.ವಿ. ಕೃಷ್ಣಮೂರ್ತಿ ಹಾಗೂ ಪ್ರಮೋದ ಪಂಡಿತ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. [ರಾಘವೇಶ್ವರ ಶ್ರೀಗಳ ಡಿಎನ್ಎ ವರದಿ ಪಾಸಿಟಿವ್]
ಸಾಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಅವರ ವ್ಯಕ್ತಿಗತವಾಗಿದೆ. ಇದಕ್ಕೂ ಹವ್ಯಕ ಸಮಾಜಕ್ಕೂ ಸಂಬಂಧವಿಲ್ಲ. ಹವ್ಯಕ ಮಹಾಮಂಡಲಕ್ಕೆ ರಾಘವೇಶ್ವರ ಸ್ವಾಮೀಜಿ ಮೇಲೆ ದೃಢ ನಂಬಿಕೆ ಇದೆ. ಆದ್ದರಿಂದ ರಾಮಚಂದ್ರಾಪುರ ಮಠದ ಪೀಠಾಧಿಪತಿಯಾಗಿ ಶ್ರೀ ರಾಘವೇಶ್ವರ ಸ್ವಾಮಿಗಳೇ ಮುಂದುವರಿಯಬೇಕು ಎಂದು ಹೇಳಿಕೆ ನೀಡಿದ್ದಾರೆ. [ಆರೋಪ ಎದುರಿಸಲು ಸಿದ್ಧ : ರಾಘವೇಶ್ವರ ಶ್ರೀ]
ರಾಘವೇಶ್ವರ ಭಾರತೀ ಸ್ವಾಮಿಗಳ ವಿರುದ್ಧ ಈ ಮೊದಲು ಕೂಡ ಷಡ್ಯಂತ್ರ ನಡೆದಿತ್ತು. ಈ ನಡೆಯುತ್ತಿರುವುದು ಷಡ್ಯಂತ್ರದ ಮತ್ತೊಂದು ಭಾಗ. ಹವ್ಯಕ ಸಮಾಜದಲ್ಲಿ ಗೊಂದಲ ಉಂಟುಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದು ಸಫಲಗೊಳ್ಳುವುದಿಲ್ಲ. ಇದನ್ನು ಹವ್ಯಕ ಮಹಾಮಂಡಲ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ರಾಘವೇಶ್ವರ ಶ್ರೀಗಳಿಗೆ 13 ಪರೀಕ್ಷೆ]