ಇಂಥ ಅಪ್ರಬುದ್ಧ ಮಾತು ಆಡುವ ಅಗತ್ಯವಿತ್ತೆ ಯಡಿಯೂರಪ್ಪನವರೆ?
Recommended Video

ಬೆಂಗಳೂರು, ಫೆಬ್ರವರಿ 28 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭೀಕರ ಆತ್ಮಾಹುತಿ ದಾಳಿ, ಹನ್ನೆರಡು ದಿನಗಳ ನಂತರ ಭಾರತ ನಡೆಸಿದ ಏರ್ ಸ್ಟ್ರೈಕ್, ಅದರ ಮರುದಿನ ಪಾಕ್ ನಡೆಸಿದ ಪ್ರತಿದಾಳಿ, ತದನಂತರ ನಡೆಯುತ್ತಿರುವ ಬೆಳವಣಿಗೆಗಳು ಲೋಕಸಭೆ ಚುನಾವಣೆಯ ಹವಾವನ್ನೇ ತೆಗೆದುಹಾಕಿವೆ.
ಇಡೀ ರಾಷ್ಟ್ರವೇ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ತಿರುಗಿಬೀಳುವ ಸಂದರ್ಭದಲ್ಲಿ, ಲೋಕಸಭೆ ಚುನಾವಣೆಯ ಕುರಿತು, ನಾವು ಗೆಲ್ಲಬೇಕಾಗಿರುವ ಸ್ಥಾನಗಳ ಕುರಿತು ಮಾತಾಡುವ ಸಮಯ ಅಲ್ಲವೇ ಅಲ್ಲ ಇದು. ಎಲ್ಲ ರಾಜಕೀಯ ವೈಷಮ್ಯ ಮರೆತು, ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ರಾಷ್ಟ್ರದ ವಿರುದ್ಧ ಇಡೀ ದೇಶವೇ ತಿರುಗಿಬೀಳಬೇಕಿದೆ.
ಇಂಥ ಸಮಯದಲ್ಲಿ ಯಡಿಯೂರಪ್ಪನವರು, ಪುಲ್ವಾಮಾ ದಾಳಿಯನ್ನು, ಭಾರತದ ಸರಕಾರ ಉಗ್ರರ ಮೇಲೆ ಮಾಡಿರುವ ಏರ್ ಸ್ಟ್ರೈಕ್ ಅನ್ನು ಪ್ರಸ್ತಾಪಿಸುತ್ತ, ಇದೆಲ್ಲದರ ಪರಿಣಾಮ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ 22 ಸೀಟುಗಳನ್ನು ಖಂಡಿತ ಗೆಲ್ಲುತ್ತದೆ ಎಂದು ಹೇಳಿರುವುದು, ಅವರ ಅಭಿಮಾನಿಗಳಿಗೇ ಮುಜುಗರ ಉಂಟು ಮಾಡುವಂಥದ್ದು.

ಅಭಿನಂದನ್ ಪಾಕ್ ವಶದಲ್ಲಿ
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ, ಉಗ್ರರನ್ನು ದಮನ ಮಾಡಬೇಕೆಂಬ ಭಾರತದ ಸಂಕಲ್ಪಕ್ಕೆ ಇಡೀ ವಿಶ್ವವೇ ಭಾರತದ ಪರ ಬೆಂಬಲವಾಗಿ ನಿಂತಿದೆ, ಭಾರತದ ವಾಯು ಸೇನೆಯ ಅಧಿಕಾರಿ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕ್ ವಶದಲ್ಲಿ ಸಿಲುಕಿಬಿದ್ದಿದ್ದಾರೆ, ಅವರನ್ನು ಕೂಡಲೆ ಮಾತುಕತೆ ನಡೆಸಿ ಪಾರು ಮಾಡಬೇಕಿದೆ. ಈ ಸಂದರ್ಭದಲ್ಲಿ ಇಂಥ ಅಪ್ರಬುದ್ಧ ಮಾತು ಬೇಕಿತ್ತೆ ಯಡಿಯೂರಪ್ಪನವರೆ?

ಮತ್ತೆ ಆ ಮಾತಾಡುವ ಅಗತ್ಯವೇನಿತ್ತು?
ತಾವು ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಯಡಿಯೂರಪ್ಪನವರು ಹಾವೇರಿಯಲ್ಲಿ, ಫೆಬ್ರವರಿ 25ರಂದು ನಡೆಸಿದ ಸಮಾವೇಶದಲ್ಲಿಯೇ ಶಪಥ ಮಾಡಿದ್ದರು. ಇದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ಏರ್ ಸ್ಟ್ರೈಕ್ ಗಿಂತಲೂ ಒಂದು ದಿನ ಮುಂಚೆ. ಅಷ್ಟು ಸಾಕಿತ್ತು. ಆದರೆ, ಏರ್ ಸ್ಟ್ರೈಕ್ ನಡೆದ ನಂತರವೂ, ಈ ಕದನದಲ್ಲಿ ರಾಜಕೀಯ ಬೆರೆಸುವ ಅವಶ್ಯಕತೆ ಇಲ್ಲದಿರುವ ಸಂದರ್ಭದಲ್ಲಿಯೂ, ಏರ್ ಸ್ಟ್ರೈಕ್ ತಮಗೆ 22 ಸ್ಥಾನ ಗೆಲ್ಲಲು ಸಹಾಯ ಮಾಡಲಿದೆ ಎನ್ನುವ ಮಾತು ಬೇಕಿತ್ತೆ ಯಡಿಯೂರಪ್ಪನವರೆ?

ರಾಹುಲ್ ವಿರುದ್ಧವೇ ತಿರುಗುಬಾಣವಾದ ಮಾತು
ಅಲ್ಲಿ ಅಭಿನಂದನ್ ಅವರು ಪಾಕ್ ವಶದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ, ಇಲ್ಲಿ ನರೇಂದ್ರ ಮೋದಿಯವರು ಆಪ್ ಬಿಡುಗಡೆ ಮಾಡುತ್ತಿದ್ದಾರೆ ಎಂದು ಟೀಕಿಸಿದ ರಾಹುಲ್ ಗಾಂಧಿ ಅವರ ಮಾತುಗಳೇ ಅಪಾರ ಅವರಿಗೆ ತಿರುಗುಬಾಣವಾಗಿವೆ. ಇಂಥ ಸಮಯದಲ್ಲಿ, ಸರ್ವ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು, ಸಭೆ ಕರೆದು ಎಲ್ಲ ವಿವರಗಳನ್ನು ವಿರೋಧ ಪಕ್ಷದ ನಾಯಕರೊಂದಿಗೆ ಹಂಚಿಕೊಳ್ಳಬೇಕಿತ್ತು. ಆದರೆ, ಮೋದಿಯವರು ಈ ಸಂದರ್ಭವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ರಾಹುಲ್ ಅವರ ಮಾತುಗಳು ಅಲ್ಲೋಲಕಲ್ಲೋಲ ಸೃಷ್ಟಿಸಿವೆ. ಸಾಲದೆಂಬಂತೆ, ಪಾಕಿಸ್ತಾನದ ಸೇನಾಧಿಕಾರಿಗಳೇ ರಾಹುಲ್ ಮಾತನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು, ಭಾರತವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಇಂಥ ಸಮಯದಲ್ಲಿ 22 ಸ್ಥಾನ ಗೆಲ್ಲಲು ಏರ್ ಸ್ಟ್ರೈಕ್ ಸಹಾಯ ಮಾಡಲಿದೆ ಎಂದು ಹೇಳುವ ಅವಶ್ಯಕತೆಯಿತ್ತೆ ಯಡಿಯೂರಪ್ಪನವರೆ?

ಬಿಜೆಪಿ ಹೈಕಮಾಂಡ್ ಇಕ್ಕಟ್ಟಿಗೆ
ಇಂಥ ಮಾತುಗಳಿಂದ ಯಡಿಯೂರಪ್ಪನವರು ಬಿಜೆಪಿ ಹೈಕಮಾಂಡನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಯಡಿಯೂರಪ್ಪ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಮತ್ತು ಪುಲ್ವಾಮಾದಲ್ಲಿ ಹತ್ಯೆಯಾದ 40 ಸಿಆರ್ ಪಿಎಫ್ ಜವಾನರಿಗೆ ಹೀಗೆ ಹೇಳಿ ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಬೆಂಬಲಿಗರು ಝಾಡಿಸಿದ್ದಾರೆ. ಯಡಿಯೂರಪ್ಪನವರನ್ನು ಪಕ್ಷದಿಂದಲೇ ವಜಾಗೊಳಿಸಿ ಎಂದು ಕಾಂಗ್ರೆಸ್ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮುಂತಾದವರು ತಪರಾಕಿ ಕೊಟ್ಟಿದ್ದಾರೆ. 75 ವರ್ಷದ ಯಡಿಯೂರಪ್ಪನವರು ಕೂಡಲೆ ರಾಜಕೀಯದಿಂದಲೇ ನಿವೃತ್ತರಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಎಲ್ಲರೂ ಮಾಡುವುದು ರಾಜಕೀಯಕ್ಕಾಗಿಯೇ, ಚುನಾವಣೆ ಗೆಲ್ಲಲಿಕ್ಕಾಗಿಯೇ ಎಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ, ಆ ಮಾತುಗಳನ್ನು ಈ ಸಂದರ್ಭದಲ್ಲಿ ನುಡಿಯುವ ಅಗತ್ಯವಿತ್ತೆ ಯಡಿಯೂರಪ್ಪನವರೆ?












Click it and Unblock the Notifications