ಅಧಿಕಾರಿಗಳ ಸಭೆಯಲ್ಲಿ ಪರಮೇಶ್ವರ್-ರೇವಣ್ಣ ಡಿಶುಂ ಡಿಶುಂ
ಬೆಂಗಳೂರು, ಜೂನ್ 11: ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮತ್ತು ಸಚಿವ ಎಚ್ ಡಿ ರೇವಣ್ಣ ಅವರ ನಡುವೆ ಮಾತಿನ ಚಕಮಕಿ ಉಂಟಾಯಿತು.
ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಈ ಸಂದರ್ಭದಲ್ಲಿ ಪರಮೇಶ್ವರ್ ಅವರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದರು. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಕೆಲಸ ಸಮರ್ಪಕವಾಗಿ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ರೇವಣ್ಣ, ತಮ್ಮ ಇಲಾಖೆಯ ಕೆಲಸ ಬಗ್ಗೆ ವಿವರಣೆ ನೀಡಲು ಮುಂದಾದರು. ಇದು ಪರಮೇಶ್ವರ್ ಅವರನ್ನು ಕೆರಳಿಸಿತು.
ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಗುತ್ತಿಗೆದಾರರಿಗೆ ಹೆಚ್ಚು ಹೆಚ್ಚು ಸಮಯ ಕೊಟ್ಟಷ್ಟೂ ಕಾಮಗಾರಿ ವೆಚ್ಚವೂ ಜಾಸ್ತಿಯಾಗುತ್ತದೆ. ಹೀಗೆ ವಿಳಂಬವಾಗಲು ಕಾರಣವೇನು? ಕಾಮಗಾರಿ ವೆಚ್ಚ ಹೆಚ್ಚಾಗುತ್ತಿರುವುದು ಏಕೆ? ಕೋಟಿಗಟ್ಟಲೆ ವೆಚ್ಚವಾಗುತ್ತಿರುವುದಕ್ಕೆ ಯಾರು ಹೊಣೆ? ಎಂದು ಅಧಿಕಾರಿಗಳನ್ನು ಪರಮೇಶ್ವರ್ ತರಾಟೆಗೆ ತೆಗೆದುಕೊಂಡರು.
ಲೋಕೋಪಯೋಗಿ ಇಲಾಖೆಯಲ್ಲಿ ಹೆಚ್ಚಾಗಿ ಹೊರಗುತ್ತಿಗೆ ನೀಡುತ್ತಿದ್ದೀರ. ಯಾಕೆ ಅಷ್ಟೊಂದು ಹೊರಗುತ್ತಿಗೆ ನೀಡುತ್ತಿದ್ದೀರಿ? ಇದರಿಂದ ಲಾಭ ಯಾರಿಗಾಗುತ್ತಿದೆ? ಎಂದು ಕೋಪದಿಂದ ಪ್ರಶ್ನಿಸಿದರು.

ಮುಖ್ಯಮಂತ್ರಿಯೇ ಹೇಳಬೇಕೇ?
ಮೊದಲೇ ನಿಗದಿಪಡಿಸಿರುವ ಸಮಯದೊಳಗೆ ಏಕೆ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ? ನೀಡಿರುವ ಸಮಯದಲ್ಲಿ ಕೆಲಸ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸರ್ಕಾರದ ಹಣ ಪೋಲಾಗುತ್ತದೆ. ಸೇತುವೆ ನಿರ್ಮಾಣದ ಅಗತ್ಯ ಇದ್ದರೆ ಮೊದಲೇ ಅದನ್ನು ಮುಗಿಸುವುದಕ್ಕೆ ಏನು ಕಷ್ಟ? ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ ಬಳಿಕವೇ ಅದನ್ನು ಮಾಡುತ್ತೀರಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರತಿ ವಾರ ವರದಿ ನೀಡಬೇಕು
ಈ ವೇಳೆ ಎಚ್ ರೇವಣ್ಣ ಅವರು ಮಧ್ಯಪ್ರವೇಶ ಮಾಡಿದರು. ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ವಲಯವಾರು ಎಂಜಿನಿಯರ್ ಮತ್ತು ಚಾಲಕ ಮಾತ್ರ ಇದ್ದಾರೆ. ನಾವು ಯಾರಿಗೂ ಹೊರಗುತ್ತಿಗೆ ನೀಡಿಲ್ಲ. ಕಾಮಗಾರಿ ಕುರಿತು ಪ್ರತಿ ಗುತ್ತಿಗೆದಾರರೂ ಪ್ರತಿ ವಾರ ವರದಿ ನೀಡಲೇಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಸಾಕಷ್ಟು ಸುಧಾರಣೆಯಾಗಿದೆ
ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಲ್ಲ. ನಿಗದಿತ ಸಮಯದೊಳಗೆ ಕೆಲಸ ಪೂರ್ಣಗೊಳಿಸದೆ ವಿಳಂಬ ಮಾಡುವ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಅಧಿಕಾರಿಗಳೊಂದಿಗೆ ಸತತವಾಗಿ ಸಭೆಗಳನ್ನು ನಡೆಸುತ್ತಿದ್ದೇನೆ. ಸಮ್ಮಿಶ್ರ ಸರ್ಕಾರ ಬಂದ ಬಳಿಕ ಲೋಕೋಪಯೋಗಿ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಮುಂದಿನ ಸಭೆಯಲ್ಲಿ ಕಾಮಗಾರಿಗಳ ಕುರಿತು ಎಲ್ಲ ವಿವರಣೆ ನೀಡುತ್ತೇನೆ ಎಂದರು.

ನಿಮ್ಮ ಸಲಹೆ ಪಡೆಯುತ್ತೇನೆ
ಅದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ನಾನು ನಿಮ್ಮ ಇಲಾಖೆ ಮೇಲೆ ಆರೋಪ ಮಾಡುತ್ತಿಲ್ಲ. ಎಲ್ಲಿ ತಪ್ಪಾಗಿದೆಯೋ ಅಲ್ಲಿ ಮೊದಲು ಸರಿಪಡಿಸಿಕೊಳ್ಳಿ ಎಂದು ಸೂಚಿಸುತ್ತಿದ್ದೇನೆ ಎಂದರು. ಆಗ ರೇವಣ್ಣ, 'ನೀವು ಹಿರಿಯರು. ನಿಮ್ಮ ಸಲಹೆ ಪಡೆದುಕೊಳ್ಳುತ್ತೇನೆ' ಎಂದು ಹೇಳಿದರು.












Click it and Unblock the Notifications