ಮತದಾರರಿಗಾಗಿ 'ವೋಟರ್ ಹೆಲ್ಲೈನ್ ಆಪ್' ಕಾರ್ಯಾಗಾರ
ಬೆಂಗಳೂರು ಆಗಸ್ಟ್ 13: ಪ್ರಜಾಪ್ರಭುತ್ವ ಮತ್ತು ಚುನಾವಣೆಗಳನ್ನು ಸಮರ್ಪಕವಾಗಿ ನಡೆಸುವುದು, ಯುವಕರ ಆಕಾಂಕ್ಷೆಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯ ಆಗಿದೆ ಎಂದು ಕರ್ನಾಟಕ ಸರ್ಕಾರದ ಜಂಟಿ ಮುಖ್ಯ ಚುನಾವಣಾಧಿಕಾರಿ (ಚುನಾವಣಾ ಪಟ್ಟಿ) ಡಿ.ಶಂಭು ಭಟ್ ಹೇಳಿದರು.
ಶನಿವಾರ ಭಾರತೀಯ ವಿದ್ಯಾಭವನದಲ್ಲಿ ಬೆಂಗಳೂರಿನ ಬಿ. ಪ್ಯಾಕ್ ಸಂಸ್ಥೆ ಹಾಗೂ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಸಹಯೋಗದಲ್ಲಿ ಆಯೋಜಿಸಿದ್ದ 'ವೋಟರ್ ಹೆಲ್ಪ್ ಲೈನ್ ಮೊಬೈಲ್ ಆಪ್' ಬಗ್ಗೆ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಚುನಾವಣೆಗಳನ್ನು ಸಮರ್ಪಕವಾಗಿ ನಡೆಸುವುದರ ಜತೆಗೆ ಅನರ್ಹ ಮತದಾರರನ್ನು ತೆಗೆದುಹಾಕುವುದು ಮತ್ತು ಯಾವುದೇ ಅರ್ಹ ಮತದಾರರು ಹೊರಗುಳಿಯದಂತೆ ನೋಡಿಕೊಳ್ಳುವದು ನಮ್ಮ ಆದ್ಯ ಕೆಲಸವಾಗಿದೆ ಎಂದರು. ಇದೇ ವೇಳೆ ಕಾನೂನು ನಿಬಂಧನೆಗಳು ಮತ್ತು ಇತ್ತೀಚಿನ ತಿದ್ದುಪಡಿಗಳ ಕುರಿತು ಅವರು ಸಭಿಕರಿಗೆ ಅವರು ತಿಳಿಸಿಕೊಟ್ಟರು.
ಮತದಾರರಲ್ಲಿ ಜಾಗೃತಿ ಅಗತ್ಯ
ಬಿ.ಪ್ಯಾಕ್ ಸದಸ್ಯ ಆನಂದ್ ತೀರ್ಥ ಅವರು, ಕರ್ನಾಟಕ ಸರ್ಕಾರದ ಜಂಟಿ ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿಕೊಟ್ಟ ಹೊಸ ತಿದ್ದುಪಡಿಗಳು ಮತ್ತು ಉಪಕ್ರಮಗಳ ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಸಹಕಾರಿಯಾಗಲಿವೆ. ಮತದಾರರಿಗೆ ಅವುಗಳ ಮಹತ್ವವನ್ನು, ಚುನಾವಣೆ ಕುರಿತು ಜಾಗೃತಿ ಮೂಡಿಸಲು ಅಮೃತ ಮಹೋತ್ಸವದ ಗಳಿಗೆಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.
ಕಾರ್ಯಾಗಾರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಪಾರದರ್ಶಕತೆ, ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ, ಮತದಾನ ಗುರುತಿನ ಚೀಟಿ ನೋಂದಣಿ, ಕೆಂದ್ರ ಚುನಾವಣಾ ಆಯೋಗದ 'ವೋಟರ್ ಹೆಲ್ಪ್ಲೈನ್ ಆಪ್' ನೋಂದಣಿ, ಆಧಾರ್ ಮತ್ತು ಮತದಾನ ಗುರುತಿನ ಚೀಟಿಗೆ ಜೋಡಣೆ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಹಂತದ ಚುನಾವಣಾ ಅಧಿಕಾರಿಗಳಾದ ಡಾ. ವಸ್ತ್ರದ್ ಮತ್ತು ಪೂರ್ಣಿಮಾ ಜೋಗಿ, ಬಿ.ಪ್ಯಾಕ್ ಸಂಯೋಜಕ ಎಚ್.ಎಸ್. ರಾಘವೇಂದ್ರ, ನಗರದ ಅಪಾರ್ಟ್ಮೆಂಟ್ ಫೆಡರೇಷನ್ ಪ್ರತಿನಿಧಿಗಳ ಮತ್ತಿತರರು ಪಾಲ್ಗೊಂಡಿದ್ದರು.