Voter Data Theft: 4 ಕಂದಾಯ ಇಲಾಖೆ ಅಧಿಕಾರಿ ಅಮಾನತು
ಬೆಂಗಳೂರು, ಜನವರಿ 03: ಬೆಂಗಳೂರು ಮತದಾರರ ದತ್ತಾಂಶ ಕಳ್ಳತನ ಪ್ರಕರಣ ಸಂಬಂಧಿಸಿದಂತೆ ನಾಲ್ಕು ಕಂದಾಯ ಇಲಾಖೆ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಮತದಾರರ ಮಾಹಿತಿ ಕಳ್ಳತನ ಪ್ರಕರಣ ಕೆಲವು ತಿಂಗಳುಗಳ ಹಿಂದೆ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಪ್ರಕರಣ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಸಂಬಂಧಿತ ಕರ್ತವ್ಯಗಳ ಉಸ್ತುವಾರಿ ವಹಿಸಿದ್ದ ನಾಲ್ವರು ಕಂದಾಯ ಅಧಿಕಾರಿಗಳು ಅಮಾನತುಗೊಂಡಿದ್ದಾರೆ.
ಬಿಬಿಎಂಪಿ ಬರೆದ ಪತ್ರವನ್ನು ಆಧರಿಸಿ ನಗರಾಭಿವೃದ್ಧಿ ಇಲಾಖೆಯ ನಾಲ್ವರು ಚುನಾವಣಾ ನೋಂದಣಿ ಅಧಿಕಾರಿಗಳಾದ (ಇಆರ್ಒ) ಚಂದ್ರಶೇಖರ್ (ಮಹದೇವಪುರ), ವಿ.ಬಿ.ಭೀಮಾಶಂಕರ್ (ಚಿಕ್ಕಪೇಟೆ), ಸುಹೇಲ್ ಅಹಮದ್ ಮತ್ತು ಗುಲ್ತಾಜ್ ಫಾತಿಮಾ (ಶಿವಾಜಿನಗರ) ಅಮಾನತುಗೊಳಿಸಲಾಗಿದೆ.
ಈ ಅಧಿಕಾರಿಗಳು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗೆ ಚುನಾವಣಾ ಸಂಬಂಧಿತ ಚಟುವಟಿಕೆಗಳಿಗೆ ಗುರುತಿನ ಚೀಟಿ ನೀಡುವುದನ್ನು ನಿರ್ಬಂಧಿಸುವ ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಗುರುತಿನ ಚೀಟಿ ನೀಡಿ ಅಕ್ರಮಕ್ಕೆ ಕಾರಣರಾಗಿದ್ದಾರೆ ಎಂದು ತಿಳಿದು ಬಂದಿದೆ. ನಗರದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಮತದಾರರ ದತ್ತಾಂಶ ಸಂಗ್ರಹಿಸುವಲ್ಲಿ ಸರ್ಕಾರೇತರ ಸಂಸ್ಥೆ ಚಿಲುಮೆ ತೊಡಗಿಸಿಕೊಂಡಿತ್ತು. ಬಳಿಕ ಈ ಸಂಸ್ಥೆ ಸದಸ್ಯರು, ಮುಖ್ಯಸ್ಥರು ಬಿಬಿಎಂಪಿ ಹಾಕಿದ್ದ ಷರತ್ತು ಉಲ್ಲಂಘಿಸಿದ ಅಕ್ರಮ ಮಾಹಿತಿ ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡಿದ್ದರು.
ಮಾಹಿತಿ ನೀಡದಂತೆ ಬಿಬಿಎಂಪಿ ಸೂಚನೆ
ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ದೂರು ದಾಖಲಿಸಿತ್ತು. ಜೊತೆಗೆ ಚಿಲುಮೆ ಸಂಸ್ಥೆಗೆ ನೀಡಿದ್ದ ಮಾಹಿತಿ ಸಂಗ್ರಹದ ಅನುಮತಿ ಹಿಂಪಡೆದು ಬಿಬಿಎಂಪಿ ಆದೇಶಿಸಿತ್ತು. ಜೊತೆಗೆ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಮಾಹಿತಿ ಪಡೆಯಲು ಬಂದರೂ ನೀಡದಂತೆ ಸೂಚಿಸಿತು. ಬಳಿಕ ಪ್ರಕರಣದ ತನಿಖೆ ಆಧಾರದಲ್ಲಿ ಕೆಲವು ಅಧಿಕಾರಿಗಳನ್ನು ಈಗಾಗಲೇ ಅಮಾನತು ಮಾಡಲಾಗಿತ್ತು. ಇದೀಗ ಮತ್ತೆ ನಾಲ್ವರು ಅಮಾನತುಗೊಂಡಿದ್ದಾರೆ.
ಪ್ರಕರಣ ನಡೆದಾಗಿನಿಂದ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣದಲ್ಲಿ ಬಿಜೆಪಿ ಆಡಳಿತದ ರಾಜ್ಯ ಸರ್ಕಾರದ ಸಂಪುಟ ಸಚಿವರ ಪಾತ್ರವಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಇತ್ತೀಚೆಗಷ್ಟೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಹೆಚ್ಚು ಆಗುತ್ತದೇ ಎಂದು ನಿರೀಕ್ಷಿಸಲಾಗಿತ್ತು.
ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್, ಲೋಕೇಶ್ ಸೇರಿದಂತೆ ಹಲವರನ್ನು ಬಂಧಿಸಲಾಯಿತು. ಬಾಕಿ ಆರೋಪಿಗಳ ಬಂಧನಕ್ಕೆ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಆಗಲೂ ಮೂರು ಕಂದಾಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.