ಬುಧವಾರದಿಂದ ವಿಬ್ ಗಯಾರ್ ಶಾಲೆ ಆರಂಭ
ಬೆಂಗಳೂರು, ಜು. 22 : ಬೆಂಗಳೂರಿನ ಹೊರವಲಯದ ಮಾರತ್ ಹಳ್ಳಿಯ ವಿಬ್ ಗಯಾರ್ ಶಾಲೆಯನ್ನು ಬುಧವಾರದಿಂದ ತೆರೆಯಲಾಗುವುದು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಶಾಲೆಯ ಮುಂದೆ ಪ್ರತಿಭಟನೆ ನಡೆಸದಂತೆ ಅವರು ಪೋಷಕರು ಮತ್ತು ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಶಾಲೆಯ ಆಡಳಿತ ಮಂಡಳಿ ಮತ್ತು ಪೋಷಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಮಕ್ಕಳ ಶಿಕ್ಷಣದ ಹಿತದೃಷ್ಠಿಯಿಂದ ಬುಧವಾರದಿಂದ ಶಾಲೆಯನ್ನು ತೆರೆಯುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಕಿಮ್ಮನೆ ರತ್ನಾಕರ್, ಬುಧವಾರದಿಂದ ಶಾಲೆಯನ್ನು ತೆರೆಯಲು ಪೋಷಕರು ಮತ್ತು ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸಲಾಗಿದೆ. ನಾಳೆ ಪೋಷಕರು ಎಂದಿನಂತೆ ಮಕ್ಕಳನ್ನು ಶಾಲೆಗೆ ಕಳುಹಿಸಲಿದ್ದಾರೆ ಎಂದು ಹೇಳಿದರು. [ಮುಂದುವರೆದ ಪ್ರತಿಭಟನೆ, ಲಾಠಿ ಪ್ರಹಾರ]
ಪೋಷಕರು ಮತ್ತು ವಿವಿಧ ಸಂಘಟನೆಗಳು ಬುಧವಾರದಿಂದ ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಬಾರದು ಎಂದು ಹೇಳಿದ ಶಿಕ್ಷಣ ಸಚಿವರು, ಶಾಲೆಯ ಮಾನ್ಯತೆ ರದ್ದು ಮಾಡುವ ವಿಷಯದ ಕುರಿತು ಕೇಂದ್ರ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ ಮತ್ತು ಪೋಷಕರು ಶಾಲೆಯ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಶಿಕ್ಷಣ ಸಚಿವರು ಮಕ್ಕಳ ಶಿಕ್ಷಣದ ಹಿತದೃಷ್ಠಿಯಿಂದ ಶಾಲೆಯನ್ನು ಆರಂಭಮಾಡಲಾಗುತ್ತಿದೆ ಎಂದರು. ಜು.17ರಂದು ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದ ನಂತರ ವಿಬ್ ಗಯಾರ್ ಶಾಲೆಯನ್ನು ಮುಚ್ಚಲಾಗಿತ್ತು.
ಶಾಲೆಗೆ ಪೊಲೀಸ್ ಆಯುಕ್ತರ ಭೇಟಿ : ಬೆಂಗಳೂರು ನೂತನ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಮಂಗಳವಾರ ವಿಬ್ ಗಯಾರ್ ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿ ಜೊತೆಗೆ ಮಾತುಕತೆ ನಡೆಸಿದರು. ಆಯುಕ್ತರ ಜೊತೆಗೆ ಕೆಲವು ಪೋಷಕರು ಶಾಲೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಮಕ್ಕಳ ಸುರಕ್ಷತೆಗೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯುಕ್ತರು ಆಡಳಿತ ಮಂಡಳಿಗೆ ಕೆಲವು ಸಲಹೆಗಳನ್ನು ನೀಡಿದರು.











Click it and Unblock the Notifications