ಕಪ್ಪು ಕೋಟು ಧರಿಸಿದ ವೀರಪ್ಪ ಮೊಯ್ಲಿ: ರಾಜಕೀಯದಿಂದ ನಿವೃತ್ತಿ?
ಬೆಂಗಳೂರು, ಜೂನ್ 24: ಚುನಾವಣೆ ಸೋಲಿನಿಂದ ಬೇಸರಗೊಂಡಿರುವ ಕಾಂಗ್ರೆಸ್ನ ವೀರಪ್ಪ ಮೊಯ್ಲಿ ಅವರು, ಇತ್ತೀಚೆಗಷ್ಟೆ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಮೈತ್ರಿಯಿಂದಲೇ ಕಾಂಗ್ರೆಸ್ಗೆ ಸೋಲಾಯ್ತು ಎಂದು ಸ್ವಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಸೋಲಿನಿಂದ ಬೇಸರಗೊಂಡಿರುವ ಅವರು, ರಾಜಕೀಯವನ್ನು ತ್ಯಜಿಸಿದರೇ ಎಂಬ ಅನುಮಾನ ಮೂಡುತ್ತಿದೆ, ಕಾರಣ ವೀರಪ್ಪ ಮೊಯ್ಲಿ ಅವರು ತಮ್ಮ ಹಳೆಯ ವೃತ್ತಿ ವಕೀಲಿಕೆಗೆ ಮರಳಿದ್ದಾರೆ.
ವೀರಪ್ಪ ಮೊಯ್ಲಿ ಅವರು ಬಿ.ಎ ಅನ್ನು ಮಂಗಳೂರಿನ ಯುನಿವರ್ಸಿಟಿ ಕಾಲೇಜಿನಲ್ಲಿ ಮತ್ತು ಕಾನೂನು ಪದವಿಯನ್ನು ಬೆಂಗಳೂರಿನ ಕಾನೂನು ವಿವಿಯಲ್ಲಿ ಮುಗಿಸಿದ್ದಾರೆ.
ವೀರಪ್ಪ ಮೊಯ್ಲಿ ಅವರು ದಶಕದ ನಂತರ ಮತ್ತೆ ಕರೀ ಕೋಟು ಧರಿಸಿದ್ದಾರೆ. ಇಂದು ಹೈಕೋರ್ಟ್ಗೆ ಆಗಮಿಸಿದ ವೀರಪ್ಪ ಮೊಯ್ಲಿ ಅವರು ಪ್ರಕರಣವೊಂದರ ಪರ ವಾದ ಮಂಡಸಿದ್ದಾರೆ.

ರಾಜಕೀಯ ನಿವೃತ್ತಿ ಪಡೆದಿಲ್ಲ
ಆದರೆ ಇಷ್ಟಕ್ಕೆ ಅವರು ರಾಜಕೀಯ ನಿವೃತ್ತಿ ಪಡೆದಿದ್ದಾರೆ ಎನ್ನುವಂತಿಲ್ಲ. ರಾಜಕೀಯದಲ್ಲಿ ಇನ್ನೂ ಅವರು ಸಕ್ರಿಯರಾಗಿದ್ದಾರೆ. ಮುಂದೆಯೂ ಸಕ್ರಿಯರಾಗಿ ಇರಲಿದ್ದಾರೆ. ಆದರೆ ಪ್ರಸ್ತುತ ಚುನಾವಣೆಯಲ್ಲಿ ಸೋತಿರುವ ಕಾರಣ ಮರಳಿ ತಮ್ಮ ವಕೀಲಿಕಿ ವೃತ್ತಿಯನ್ನು ಆರಂಭಿಸಿದ್ದಾರೆ ಅಷ್ಟೆ.

2014 ರಲ್ಲಿ ಮೊಯ್ಲಿ ಅವರು ವಕೀಲಿಕೆ ಬಿಟ್ಟಿದ್ದರು
2014 ರಲ್ಲಿ ಮೊಯ್ಲಿ ಅವರು ಮೊಯ್ಲಿ ಲಾ ಅಸೋಸಿಯೇಟ್ಸ್ ಹೆಸರಿನ ಸಂಸ್ಥೆಯೊಂದನ್ನು ಸ್ಥಾಪಿಸಿ ಕಾನೂನು ನೆರವು ನೀಡುತ್ತಿದ್ದರು. 2014 ರಲ್ಲಿ ಅವರು ಕೊನೆಯ ಬಾರಿಗೆ ವಕೀಲ ವೃತ್ತಿ ಮಾಡಿದ್ದರು. ಈಗ ಮತ್ತೆ ವೃತ್ತಿಗೆ ಮರಳಿದ್ದಾರೆ.

ಕಿಮ್ಮನೆ ರತ್ನಾಕರ್ ಅವರೂ ಸಹ ವಕೀಲಿಕೆ ಆರಂಭಿಸಿದ್ದರು
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಕಿಮ್ಮನೆ ರತ್ನಾಕರ್ ಅವರು ಸಹ ವಕೀಲಿ ವೃತ್ತಿಯನ್ನು ಪುನರ್ ಆರಂಭಿಸಿದ್ದರು. ಕಾಂಗ್ರೆಸ್ನ ಹಿರಿಯ ರಾಜಕಾರಿಣಿ ಚಿದಂಬರಂ ಅವರು ಸಹ ವಕೀಲಿ ವೃತ್ತಿಯನ್ನು ಪುನರ್ ಆರಂಭಿಸಿ ಕೆಲವು ಪ್ರಕರಣಗಳ ಪರ ವಾದಿಸಿದ್ದರು.

ಚಿಕ್ಕಬಳ್ಳಾಪುರದಲ್ಲಿ ಸೋತಿರುವ ಮೊಯ್ಲಿ
ಮಾಜಿ ಸಿಎಂ, ಮಾಜಿ ಕೇಂದ್ರ ಮಂತ್ರಿ ವೀರಪ್ಪ ಮೊಯ್ಲಿ ಅವರು, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆ ಆಗಿದ್ದರು. ಆದರೆ ಈ ಬಾರಿ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಅವರ ಎದುರು ಒಂದು ಲಕ್ಷಕ್ಕೂ ಹೆಚ್ಚು ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.












Click it and Unblock the Notifications