ಎಂಇಎಸ್ ನಿಷೇಧಕ್ಕೆ ಡೆಡ್ಲೈನ್ ಕೊಟ್ಟ ವಾಟಾಳ್; ಮುಂದಿನ ಬಂದ್ ಯಾವಾಗ?
ಬೆಂಗಳೂರು, ಡಿಸೆಂಬರ್ 31: ಎಂಇಎಸ್ ರಾಜಕೀಯ ಪಕ್ಷ ಕನ್ನಡ ದ್ರೋಹಿಯಾಗಿದ್ದು, ಅದನ್ನು ನಿಷೇಧಿಸಬೇಕೆಂಬ ಒಂದೇ ಅಂಶದ ಬೇಡಿಕೆ ಮುಂದಿಟ್ಟುಕೊಂಡು ವರ್ಷಾಂತ್ಯ ಇಂದು (ಡಿ.31) ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಬಂದ್ಗೆ ಕರೆ ನೀಡಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಸರ್ವರೂ ಒಕ್ಕೊರಲಿಂದ ತಮ್ಮ ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಬಂದ್ ಬೇಡ ಎಂದು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸ್ಪಂದಿಸಿರುವ ವಾಟಾಳ್ ಇಂದಿನ ಬಂದ್ ಅನ್ನು ವಾಪಸ್ ಪಡೆದಿದ್ದಾರೆ. ಬದಲಿಗೆ ಇಂದಿನ ಕರ್ನಾಟಕ ಬಂದ್ ಮುಂದೂಡಿಕೆ ಹಿನ್ನೆಲೆ ವಾಟಾಳ್ ಮತ್ತು ಅವರ ಟೀಂ ಬೃಹತ್ ಪ್ರತಿಭಟನೆಗೆ ಮುಂದಾಗಿದೆ.
ವಿವಿಧ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ಎಂಇಎಸ್ ನಿಷೇಧಗೊಳಿಸುವಂತೆ ಒತ್ತಾಯಿಸಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಆರಂಭವಾಗಲಿದೆ.

ಗುರುವಾರ ಸಿಎಂ ಜೊತೆಗಿನ ಸಂಧಾನ ಸಭೆ ಸಕ್ಸಸ್ ಆದ ಬಳಿಕ ಬಂದ್ ದಿನಾಂಕ ಮುಂದೂಡಿಕೆಗೆ ವಾಟಾಳ್ ಒಪ್ಪಿದ್ದರು. ಅದರಂತೆ ಈಗ ಎಂಇಎಸ್ ಬ್ಯಾನ್ಗೆ ಜನವರಿ 20ರವರೆಗೆ ಸರ್ಕಾರಕ್ಕೆ ಡೆಡ್ಲೈನ್ ನೀಡಿದ್ದಾರೆ. ಒಂದು ವೇಳೆ ಬ್ಯಾನ್ ಮಾಡದಿದ್ದರೆ ಮತ್ತೆ ಜನವರಿ 22ರಂದು ಬಂದ್ಗೆ ಕರೆ ನೀಡುವುದಾಗಿ ವಾಟಾಳ್ ನಾಗರಾಜ್ ರಾಜ್ಯ ಸರ್ಕಾಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಾಟಾಳ್ ನಾಗರಾಜ್ ಮಾತಿಗೆ ದನಿಗೂಡಿಸಿದ ಸಾರಾ ಗೋವಿಂದು
ಎಂಇಎಸ್ ಬ್ಯಾನ್ ಮಾಡಲು ಇಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದೆವು. ಆದರೆ ಮುಖ್ಯಮಂತ್ರಿಗಳು ನೀಡಿರುವ ಭರವಸೆ ಮೇಲೆ ಬಂದ್ ಕೈ ಬಿಟ್ಟು ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಸಾರಾ ಗೋವಿಂದು ಹೇಳಿದರು.

ಎಂಇಎಸ್ ಬ್ಯಾನ್ ಮಾಡುವುದರಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಮಾಡುತ್ತಿದ್ದೇವೆ. ಎಂಇಎಸ್ ಬ್ಯಾನ್ ಮಾಡುವವರೆಗೂ ನಮ್ಮ ಹೋರಾಟ ನಿರಂತರ ಎಂದರು.
ಮುಖ್ಯಮಂತ್ರಿಗಳು ಕೊಟ್ಟಮಾತಿಗೆ ತಪ್ಪಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ನಾಡು-ನುಡಿ ವಿಚಾರದಲ್ಲಿ ಎಲ್ಲರೂ ಕೈಜೋಡಿಸಬೇಕು. ಸಿನಿಮಾ ರಂಗದವರು ಸೇರಿ ಎಲ್ಲರಿಗೂ ಮನವಿ ಮಾಡಿದ್ದೇವೆ ಎಂದು ಸಾರಾ ಗೋವಿಂದು ತಿಳಿಸಿದ್ದಾರೆ.
ಸಿಎಂ ಅಭಿನಂದನೆ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿ ಮೇರೆಗೆ ಡಿ. 31ರಂದು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ನ್ನು ಕನ್ನಡ ಪರ ಸಂಘಟನೆಗಳು ಹಿಂಪಡೆದಿದ್ದು, ತನ್ನ ಮನವಿಗೆ ಸ್ಪಂದಿಸಿ ಬಂದ್ ಹಿಂಪಡೆದ ಕನ್ನಡ ಪರ ಹೋರಾಟಗಾರರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದಿಸಿದ್ದಾರೆ.

ಕನ್ನಡ ಭಾಷೆ ರಕ್ಷಣೆಗೆ ಸರ್ಕಾರ ಬದ್ಧ, ಎಂಇಎಸ್ ನಿಷೇಧ ಮಾಡುವ ಕಾನೂನಾತ್ಮಕ ವಿಚಾರಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಹೀಗಾಗಿ ಸರ್ಕಾರದ ಮನವಿಗೆ ಸ್ಪಂದಿಸಿದ್ದು, ಬಂದ್ ವಾಪಸು ಪಡೆದಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೊಂದಲದ ಗೂಡಾಗಿದ್ದ ಬಂದ್
ಡಿ.31ಕ್ಕೆ ಕರೆ ಕೊಟ್ಟಿದ್ದ ಕರ್ನಾಟಕ ಬಂದ್ಗೆ ಅಪಸ್ವರ ಕೇಳಿ ಬಂದಿತ್ತು. ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದವು. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿರಲಿಲ್ಲ. ಇದು ಜನ ಪ್ರತಿನಿಧಿಗಳಲ್ಲಿ ಕೂಡ ಬಂದ್ ವಿಚಾರ ಭಿನ್ನಾಭಿಪ್ರಾಯ ಹುಟ್ಟು ಹಾಕಿತ್ತು. ಎಂಇಎಸ್ ನಿಷೇಧ ಸಂಬಂಧ ಕರ್ನಾಟಕದಲ್ಲಿ ಹೋರಾಟ ಮಾಡಿ ಕನ್ನಡಿಗರೆ ಯಾಕೆ ತೊಂದರೆ ಕೊಡಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು.












Click it and Unblock the Notifications