ವಾಸುದೇವ ಅಡಿಗಾಸ್ ನಲ್ಲಿ 1 ರೂ. ದರ ಹೆಚ್ಚಳ
ಬೆಂಗಳೂರು, ನ. 14 : ಪ್ರಸಿದ್ಧ ವಾಸುದೇವ ಅಡಿಗಾಸ್ ತನ್ನೆಲ್ಲಾ ಹೋಟೆಲ್ ಗಳಲ್ಲಿ ಆಹಾರ ಪದಾರ್ಥಗಳ ದರವನ್ನು ಗುರುವಾರದಿಂದ 1ರೂ.ಹೆಚ್ಚಳ ಮಾಡುತ್ತಿದೆ. ಹೆಚ್ಚಿನ ದರವನ್ನು ಇಸ್ಕಾನ್ ಅಕ್ಷಯ ಪಾತ್ರಾ ಯೋಜನೆಗೆ ನೀಡಲು ಅಡಿಗಾಸ್ ನಿರ್ಧರಿಸಿದೆ. ಈ ದರ ಗುರುವಾರದಿಂದಲೇ ಜಾರಿಗೆ ಬರುತ್ತಿದೆ.
ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಾಸುದೇವ ಅಡಿಗಾಸ್ ಹೋಟೆಲ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಜೇಕಬ್ ಕುರಿಯನ್ ಈ ಕುರಿತು ಮಾಹಿತಿ ನೀಡಿದರು. 'ಇಸ್ಕಾನ್ ಅಕ್ಷಯ ಪಾತ್ರಾ' ಯೋಜನೆಗೆ ಕೈಜೋಡಿಸಿರುವ 'ವಾಸುದೇವ ಅಡಿಗಾಸ್' ಗುರುವಾರದಿಂದ ತನ್ನೆಲ್ಲಾ ಹೋಟೆಲ್ಗಳಲ್ಲಿ ಆಹಾರ ಪದಾರ್ಥಗಳ ದರವನ್ನು 1 ರೂ. ಹೆಚ್ಚಿಸಲು ಪ್ಲಸ್ಒನ್ ಅಭಿಯಾನ ನಡೆಸಲಿದೆ ಎಂದರು.

ಶಾಲಾ ಮಕ್ಕಳಿಗೆ ಬಿಸಿಯೂಟ ಒದಗಿಸುವ ಇಸ್ಕಾನ್ ಸಂಸ್ಥೆಯ ಇಸ್ಕಾನ್ ಅಕ್ಷಯ ಪಾತ್ರಾ' ಯೋಜನೆಗೆ ನಾವು ಕೈಜೋಡಿಸುತ್ತಿದ್ದೇವೆ. ಆದ್ದರಿಂದ ಪ್ಲಸ್ ಒನ್ ಅಭಿಯಾನ ಆರಂಭಿಸಿದ್ದು, ಪ್ರತಿ ಆಹಾರ ಪದಾರ್ಥಗಳ ಮೇಲೆ ಹೆಚ್ಚುವರಿಯಾಗಿ ಪಡೆಯಲಾಗುವ 1 ರೂಪಾಯಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಅಕ್ಷಯ ಪಾತ್ರಾ ಯೋಜನೆಗೆ ದೇಣಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಅಡಿಗಾಸ್ ಸಮೂಹ ಸಂಸ್ಥೆಯ ಒಟ್ಟು 20 ಶಾಖೆಗಳಿವೆ. ಗ್ರಾಹಕರು, ಪಾಲುದಾರರು ಹಾಗೂ ಉದ್ಯೋಗಿಗಳ ಸಹಭಾಗಿತ್ವದಲ್ಲಿ ಅಕ್ಷಯ ಪಾತ್ರಾ ಯೋಜನೆಗೆ 10 ಲಕ್ಷ ಊಟದ ಆರ್ಥಿಕ ನೆರವು ನೀಡಲು ಪ್ಲಸ್ಒನ್ ಎಂಬ ಅಭಿಯಾನ ಆರಂಭಿಸಲಾಗಿದೆ ಎಂದರು. ಗುರುವಾರ ನ.14ರ ಮಕ್ಕಳ ದಿನಾಚರಣೆಯಾದ ಕಾರಣ ಅಂದಿನಿಂದಲೇ ಹೋಟೆಲ್ ಗಳಲ್ಲಿ ಆಹಾರ ಪದಾರ್ಥಗಳ ಬೆಲೆ 1 ರೂ. ಏರಿಕೆಯಾಗಲಿದೆ ಎಂದು ತಿಳಿಸಿದರು.
ಎಷ್ಟು ಸಂಗ್ರಹವಾಗುತ್ತದೆ : ಅಡಿಗಾಸ್ ಸಂಸ್ಥೆಯು 10 ಲಕ್ಷ ಊಟದ ಆರ್ಥಿಕ ನೆರವು ಭರಿಸಲು ಕನಿಷ್ಠ 36.50 ಲಕ್ಷ ರೂ. ಅಗತ್ಯವಿದೆ ಎಂದು ಅಂದಾಜಿಸಿದೆ. ಎಲ್ಲಾ ಅಡಿಗಾಸ್ ಶಾಖೆಗಳಲ್ಲಿ ಪ್ರತಿ ತಿಂಗಳು 7 ರಿಂದ 8 ಲಕ್ಷ ಗ್ರಾಹಕರು ಆಹಾರ ಸೇವಿಸಲಿದ್ದಾರೆ. ಪ್ರತೀ ಗ್ರಾಹಕ ಕನಿಷ್ಠ 2 ಪದಾರ್ಥ ಕೊಂಡರೂ 1 ರೂ. ಹೆಚ್ಚಳದಿಂದ ತಿಂಗಳಿಗೆ 14 ರಿಂದ 16 ಲಕ್ಷ ರೂ. ಸಂಗ್ರಹವಾಗುತ್ತದೆ ಎಂದು ಕುರಿಯನ್ ಹೇಳಿದರು.
2 ತಿಂಗಳಲ್ಲಿ 32 ಲಕ್ಷ ರೂ. ಸಂಗ್ರಹವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಉಳಿದ ಹಣವನ್ನು ಪಾಲುದಾರರು, ಉದ್ಯೋಗಿಗಳ ಸಹಭಾಗಿತ್ವದಲ್ಲಿ ಕ್ರೋಡಿಕರಿಸಿ ಅಕ್ಷಯ ಪಾತ್ರಾ ಯೋಜನೆಗೆ ನೀಡಲಾಗುವುದು ಎಂದು ತಿಳಿಸಿದರು. ಅಕ್ಷಯ ಪಾತ್ರಾ ಪ್ರತಿಷ್ಠಾನದ ಪ್ರಧಾನ ವ್ಯವಸ್ಥಾಪಕ (ನಿರ್ವಹಣೆ) ವಿನಯ್ ಕುಮಾರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications