ಸೆ.26ರಂದು ಬೀದರ್ನಿಂದ ಚಾಮರಾಜನಗರದ ತನಕ ಬಂದ್
ಬೆಂಗಳೂರು, ಸೆಪ್ಟೆಂಬರ್ 21 : 'ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕನ್ನಡ ಒಕ್ಕೂಟ ಸೆ.26ರಂದು ಕರೆ ನೀಡಿರುವ ಕರ್ನಾಟಕ ಬಂದ್ಗೆ ಸಾವಿರಕ್ಕೂ ಅಧಿಕ ಸಂಘಟನೆಗಳು ಬೆಂಬಲ ನೀಡಿವೆ. ಕರ್ನಾಟಕದ ಜನರು ಬಂದ್ಗೆ ಬೆಂಬಲ ನೀಡಬೇಕು' ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.
ಸೋಮವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೆ.26ರ ಕರ್ನಾಟಕ ಬಂದ್ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಿದ್ದ ಜಾಥಾದಲ್ಲಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, 'ಸೆ.26ರ ಶನಿವಾರ ಬೀದರ್ನಿಂದ ಚಾಮರಾಜನಗರದ ತನಕ ಕರ್ನಾಟಕ ಬಂದ್ ನಡೆಯಲಿದೆ' ಎಂದು ಘೋಷಿಸಿದರು. [ಏನಿದು ಕಳಸಾ-ಬಂಡೂರಿ ಯೋಜನೆ?]

ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಆರಂಭವಾದ ಜಾಥಾ ಕೆ.ಆರ್.ಮಾರುಕಟ್ಟೆ, ಆಶ್ರಮ, ಗಾಂಧಿ ಬಜಾರ್, ಜಯನಗರ 4ನೇ ಹಂತ ಮತ್ತು ಜೆ.ಪಿ.ನಗರದಲ್ಲಿ ಸಂಚಾರ ನಡೆಸಲಿದ್ದು, ಸೆ.26ರ ಶನಿವಾರದ ಕರ್ನಾಟಕ ಬಂದ್ಗೆ ಬೆಂಬಲ ನೀಡುವಂತೆ ಜನರಿಗೆ ಮನವಿ ಮಾಡಲಿದೆ. [ಸೆ.26ರಂದು ಸಂಪೂರ್ಣ ಕರ್ನಾಟಕ ಬಂದ್]
1000ಕ್ಕೂ ಅಧಿಕ ಸಂಘಟನೆಗಳ ಬೆಂಬಲ : ಕರ್ನಾಟಕ ಬಂದ್ ಬಗ್ಗೆ ಮಾಹಿತಿ ನೀಡಿದ ವಾಟಾಳ್ ನಾಗರಾಜ್ 'ಸೆ.26ರ ಬಂದ್ಗೆ ಸಾವಿರಕ್ಕೂ ಅಧಿಕ ಸಂಘಟನೆಗಳು ಬೆಂಬಲ ನೀಡಿವೆ. ಶನಿವಾರ ಖಾಸಗಿ ಮತ್ತು ಸರ್ಕಾರಿ ಬಸ್, ಆಟೋ, ಲಾರಿಗಳು ಸಂಚಾರ ನಡೆಸುವುದಿಲ್ಲ' ಎಂದು ಹೇಳಿದರು.

'ಹೋಟೆಲ್, ಚಿತ್ರಮಂದಿರ, ಅಂಗಡಿಗಳು ಮುಚ್ಚಿರುತ್ತವೆ. ಜನರು ಸ್ವಯಂಪ್ರೇರಿತವಾಗಿ ಬಂದ್ಗೆ ಬೆಂಬಲ ನೀಡಬೇಕು. ಬೀದರ್ನಿಂದ ಚಾಮರಾಜನಗರದ ತನಕ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಒಕ್ಕೂಟ ಪ್ರತಿಭಟನೆ ನಡೆಸಲಿದೆ. ಶನಿವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ಬಂದ್ ಮಾಡಲಾಗುತ್ತದೆ' ಎಂದರು.
ಚಿತ್ರರಂಗದ ಬೆಂಬಲ : ಜಾಗೃತಿ ಜಾಥಾದಲ್ಲಿ ಮಾತನಾಡಿದ ನಿರ್ಮಾಪಕ ಮತ್ತು ಡಾ. ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಅವರು, 'ಸೆ.26ರ ಕರ್ನಾಟಕ ಬಂದ್ಗೆ ಚಿತ್ರರಂಗವೂ ಬೆಂಬಲ ನೀಡಲಿದೆ. ನಮ್ಮ ಹೋರಾಟ ಗೋವಾ ಮತ್ತು ಕೇಂದ್ರ ಸರ್ಕಾರದ ವಿರುದ್ಧ' ಎಂದು ಸ್ಪಷ್ಟಪಡಿಸಿದರು.













Click it and Unblock the Notifications