ಅನಂತಮೂರ್ತಿ ಕಾಂಗ್ರೆಸ್ ಪರ ಪ್ರಚಾರ: ನೇರ ದೂರು
ಬೆಂಗಳೂರು, ಏಪ್ರಿಲ್ 7- ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಯುಆರ್ ಅನಂತಮೂರ್ತಿ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದುಕೊಂಡು ಯಾವುದೇ ಒಂದು ಪಕ್ಷದ ಪರ ಅನಂತಮೂರ್ತಿ ಪ್ರಚಾರದಲ್ಲಿ ತೊಡಗುವುದು ಅಕ್ಷಮ್ಯ. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಹಾಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಅಲವತ್ತುಕೊಂಡಿದೆ.
ಇಂದು ಸೋಮವಾರ ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ ನಾಯಕಿ ಹಾಗೂ ಚಿತ್ರನಟಿ ಮಾಳವಿಕಾ ಮತ್ತು ಪ್ರಕಾಶ್ ಅವರು ಅನಂತಮೂರ್ತಿ ಅವರು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾರೆ. ಅವರು ಸರಕಾರಿ ಹುದ್ದೆಯಲ್ಲಿದ್ದುಕೊಂಡು ಕಾಂಗ್ರೆಸ್ ಪರ ಪ್ರಚಾರ ಮಾಡುವುದು ಸರಿಯಲ್ಲ ಎಂದು ದೂರಿದ್ದಾರೆ.
ಡಾ ಯುಆರ್ ವಿರುದ್ಧ ಸಾತ್ವಿಕ ಸಿಟ್ಟು ಹೊರಹಾಕಿದ ಯಡಿಯೂರಪ್ಪ:
'ಕುಲಾಧಿಪತಿಯಂತಹ ಉನ್ನತ ಸ್ಥಾನದಲ್ಲಿರುವ ಯುಆರ್ ಅನಂತಮೂರ್ತಿ ಅವರು ಕಾಂಗ್ರೆಸ್ ಪರ ಪ್ರಚಾರಕ್ಕೆ ಇಳಿದಿರುವುದು ತರವಲ್ಲ' ಎಂದು ಬಿಜೆಪಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
'ಅನಂತಮೂರ್ತಿ ಅವರು ಗುಲ್ಬರ್ಗದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದಾರೆ. ರಾಷ್ಟ್ರಪತಿಯಿಂದ ನೇಮಕವಾಗಿರುವ ಅವರು ಸರ್ಕಾರದಿಂದ ಮಾಸಿಕ ರೂ. ಒಂದು ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. ಉನ್ನತ ಸ್ಥಾನದಲ್ಲಿರುವ ಮತ್ತು ದೇಶಕ್ಕೆ ನೈತಿಕ ಪಾಠ ಹೇಳುವವರು ಯಾವುದೋ ಒಂದು ರಾಜಕೀಯ ಪಕ್ಷದ ಪರ ಪ್ರಚಾರಕ್ಕೆ ಕೈಹಾಕಬಾರದಿತ್ತು' ಎಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು
'ಅನಂತಮೂರ್ತಿ ದೊಡ್ಡವರು. ಹೀಗಾಗಿ ಅವರ ರಾಜೀನಾಮೆ ಕೇಳುವುದಿಲ್ಲ. ಯಾವಾಗ, ಯಾವ ರೀತಿ ನಿರ್ಧಾರ ಕೈಗೊಳ್ಳಬೇಕು ಎನ್ನುವುದು ಅವರಿಗೆ ಗೊತ್ತಿದೆ. ಅನಂತಮೂರ್ತಿ ನನ್ನ ಸ್ನೇಹಿತರು. ಇಂದಿಗೂ ಸ್ನೇಹ ಮುಂದುವರಿದಿದೆ. ಅವರ ಬಗ್ಗೆ ಅಪಾರ ಗೌರವವಿದೆ. ಆದರೆ, ಕಾಂಗ್ರೆಸ್ ನಾಯಕರನ್ನು ಓಲೈಸಲು ಸಾಹಿತಿಗಳು ಬಿಜೆಪಿ ಮುಖಂಡರ ವಿರುದ್ಧ ಹಗುರವಾಗಿ ಮಾತನಾಡುವುದು ಶೋಭೆ ತರುವುದಿಲ್ಲ' ಎಂದು ತಮ್ಮ ಸಾತ್ವಿಕ ಸಿಟ್ಟು ಹೊರಹಾಕಿದರು.
ಡಾ. ಜಿ ಪರಮೇಶ್ವರ್ ಆಗ್ರಹ:
ಈ ಮಧ್ಯೆ, ಸಾಹಿತಿಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ಜ್ಞಾನಪೀಠ ಪಡೆ ಪುರಸ್ಕೃತರಾದ ಯುಆರ್ ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್ ಬಗ್ಗೆ ಬಿಜೆಪಿ ನಾಯಕರು ಹಗುರವಾಗಿ ಮಾತನಾಡಿದ್ದಾರೆ. ಇದಕ್ಕಾಗಿ ಅವರು ಸಾಹಿತಿಗಳ ಕ್ಷಮೆ ಕೋರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಒತ್ತಾಯಿಸಿದ್ದಾರೆ.
ಅನಂತಮೂರ್ತಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಕೋಮುವಾದಿ ಎನ್ನುತ್ತಿದ್ದಾರೆ. ಅಲ್ಲದೆ ಬಹಿರಂಗವಾಗಿಯೇ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದು, ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂಬುದು ಬಿಜೆಪಿಯ ಆರೋಪವಾಗಿದೆ.
ಕಳೆದ ಗುರುವಾರ ಕೆಲ ಬುದ್ಧಿಜೀವಿಗಳು ಮತ್ತು ಸಾಹಿತಿಗಳೊಂದಿಗೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಅನಂತಮೂರ್ತಿ 'ಚುನಾವಣೆಯಲ್ಲಿ ತಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಬಹಿರಂಗವಾಗಿ ಘೋಷಿಸಿದ್ದರು. ಜತೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತೇವೆ' ಎಂದೂ ಹೇಳಿದ್ದರು. ಅವರು ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ಭಾರತದಲ್ಲಿ ಸರ್ವಾಧಿಕಾರ ಸೃಷ್ಟಿಯಾಗುತ್ತದೆ ಎಂದು ಆರೋಪಿಸಿದ್ದರು.
ಸಮಕಾಲೀನ ವಿಚಾರ ವೇದಿಕೆ ಸದಸ್ಯರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಆರ್ ಎಸ್ಎಸ್ ಮುಖವಾಡ ಹೊಂದಿರುವ ಮೋದಿ ಪ್ರಧಾನಿಯಾಗಬಾರದು. ಮೋದಿ ದೇಶದ ಪ್ರಧಾನಿಯಾದರೆ ಭಾರತದಲ್ಲಿ ಸರ್ವಾಧಿಕಾರ ಸೃಷ್ಟಿಯಾಗುತ್ತದೆ ಎಂದು ಆರೋಪಿಸಿದ್ದರು. (ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದ ಸಾಹಿತಿಗಳು)
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಯುಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಸಾಹಿತಿಗಳಾದ ವಸುಂಧರ ಭೂಪತಿ, ನಟ ಮಾವಳ್ಳಿ ಶಂಕರ್ ಮುಂತಾದವರು ಆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications