ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿ : ಅನಂತಮೂರ್ತಿ
ಬೆಂಗಳೂರು, ಅ. 21: ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿ ಪ್ರಾಥಮಿಕ ಹಂತದಿಂದಲೇ ಕನ್ನಡ ಮಾಧ್ಯಮದಲ್ಲಿ ಪಠ್ಯ-ಪುಸ್ತಕಗಳನ್ನು ರೂಪಿಸಬೇಕು. ಕನ್ನಡ ಮಾಧ್ಯಮ ಕಡ್ಡಾಯಗೊಳಿಸಲು ಇರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಸಲಹೆ ನೀಡಿದ್ದಾರೆ.
ಸೋಮವಾರ (ಅ.21) ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಮ ಸಮಾಜ ವೇದಿಕೆ ಮತ್ತು ಕಲಾಕೃತಿ ಪ್ರಕಾಶನದಿಂದ ಹೊರತಂದಿರುವ ‘2013ರ ಬಜೆಟ್ ಚರ್ಚೆ' ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಸರಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿ ಪ್ರಾಥಮಿಕ ಹಂತದಿಂದಲೇ ಕನ್ನಡ ಮಾಧ್ಯಮದಲ್ಲಿ ಪಠ್ಯ-ಪುಸ್ತಕಗಳನ್ನು ರೂಪಿಸಬೇಕು ಎಂದರು.
ಆಂಗ್ಲ ಭಾಷೆಯನ್ನು ಒಂದು ಭಾಷೆಯನ್ನಾಗಿ ಪರಿಗಣಿಸಬೇಕು, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೆಗಳಿಗೆ ಆದ್ಯತೆ ನೀಡಬೇಕು. ಅಲ್ಲದೆ, ಎಸೆಸೆಲ್ಸಿ ಪೂರ್ಣಗೊಳಿಸಿದ ಕೂಡಲೇ ಉದ್ಯೋಗ ದೊರೆಯುವಂತಹ ವ್ಯವಸ್ಥೆ ಬರಬೇಕೆಂದರು.

ತಾಂತ್ರಿಕತೆ ಬಳಸಿಕೊಳ್ಳಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಸಿಎಂ ನರೇಂದ್ರ ಮೋದಿ ಮಾದರಿಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದ ಅವರು, ನಾಡಿನ ಎಲ್ಲ ಭಾಗದ ಜನ ಸಾಮಾನ್ಯರು ಮುಖ್ಯಮಂತ್ರಿಯನ್ನು ನೇರವಾಗಿ ಸಂರ್ಪಕಿಸುವಂತಾಗಬೇಕು ಎಂದರು.
ತಂತ್ರಜ್ಞಾನ ಬಳಸಿಕೊಳ್ಳುವಲ್ಲಿ ಮೋದಿ ಮುಂದಿದ್ದು, ತಾನು ಮೋದಿ ವಿರುದ್ಧ ನೀಡಿದ ಹೇಳಿಕೆಯನ್ನು ಕ್ಷಣಾರ್ಧದಲ್ಲೆ ವಿಶ್ವದೆಲ್ಲೆಡೆ ಪಸರಿಸಿದರು. ಮಾತ್ರವಲ್ಲ ದೊಡ್ಡ ವಿವಾದವನ್ನೇ ಹುಟ್ಟುಹಾಕಿದರು ಎಂದು ಅನಂತಮೂರ್ತಿ ಹೇಳಿದರು.
ಕುರಿಗಳನ್ನು ಮೇಯಿಸುವುದು ಸಾಮಾನ್ಯ ವಿಷಯವಲ್ಲ. ಕುರಿ ಕಾಯುವ ಕಷ್ಟ ಏನೆಂಬುದು ಕಾದವನಿಗಷ್ಟೇ ಗೊತ್ತು ಎಂದು ಮಾರ್ಮಿಕವಾಗಿ ನುಡಿದ ಅವರು, ಕುರಿ ಮೇಯಿಸುವವ ಎಂಬ ಹೋಲಿಕೆ ಸಲ್ಲ ಎಂದರು. ಅಹಿಂದ ಮತ್ತು ಜನಸಾಮಾನ್ಯ ಎರಡು ಒಂದೇ. ಅವುಗಳನ್ನು ವಿಂಗಡಿಸುವುದು ಬೇಡ ಎಂದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಅರ್ಥಶಾಸಜ್ಞ ಡಾ.ಜಿ.ತಿಮ್ಮಯ್ಯ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಸಮ ಸಮಾಜ ವೇದಿಕೆ ಅಧ್ಯಕ್ಷ ಬಿ.ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications