ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
ಬೆಂಗಳೂರು,ಜನವರಿ 24: ವಿಶ್ವದ ಟಾಪ್ ಟೆನ್ ಸಂಚಾರ ದಟ್ಟಣೆ ನಗರ ಎಂಬ ಕುಖ್ಯಾತಿಗೆ ಒಳಗಾಗಿರುವ ಬೆಂಗಳೂರನ್ನು ಸುಂದರಗೊಳಿಸಲು ಈ ಬಾರಿಯ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಏನು ಮಾಡಲಿದೆ ಎನ್ನುವ ಕುತೂಹಲ ಮೂಡಿದೆ.
ದೇಶದಲ್ಲೇ ಅತಿ ಹೆಚ್ಚು ಪ್ರಮಾಣದ ಐಟಿ ರಫ್ತು ಮಾಡುವ ಸಿಲಿಕಾನ್ ನಗರಿ ಬೆಂಗಳೂರಿಗೆ ವಾಹನ ದಟ್ಟಣೆಯ ಗರ ಬಡಿದಿದೆ.
ಇನ್ನೊಂದೆಡೆ ಮೂಲಸೌಕರ್ಯಗಳ ಕೊರತೆ ನಗರಕ್ಕೆ ಶಾಪವಾಗಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಬೆಂಗಳೂರಿಗೆ ಯಾವ ಪಾಲು ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಸಬ್ ಅರ್ಬನ್ ಯೋಜನೆಗೆ ಆರ್ಥಿಕ ಅನುದಾನ
ಕಳೆದ ಬಜೆಟ್ನಲ್ಲಿಯೇ ಬೆಂಗಳೂರು ನಗರದ ಉಪನಗರ ರೈಲ್ವೆ ಯೋಜನೆಗೆ ಕೇಂದ್ರ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಅನುದಾನ ಹಂಚಿಕೆ ಕುರಿತಂತೆ ಈಗಲೂ ಕೇಂದ್ರ ಹಾಗೂ ರಾಜ್ಯದ ನಡುವೆ ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ. ಹೀಗಾಗಿ ಈ ಬಾರಿಯ ಬಜೆಟ್ನಲ್ಲಿ ಉಪನಗರ ಯೋಜನೆಗೆ ಕೇಂದ್ರದಿಂದ ಒಂದಿಷ್ಟು ಅನುದಾನವನ್ನು ರಾಜ್ಯ ಸರ್ಕಾರ ನಿರೀಕ್ಷಿಸಿದೆ. ಇದರ ಜತೆಗೆ ಮಹತ್ವಾಕಾಂಕ್ಷಿ ಮೆಟ್ರೋ ಯೋಜನೆಗೂ ಹೆಚ್ಚುವರಿ ಅನುದಾನವನ್ನು ರಾಜ್ಯ ಸರ್ಕಾರ ಬಯಸಿದೆ.

ಎಚ್ಎಎಲ್ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ಬಳಿಕ ಎಚ್ಎಎಲ್ ವಿಮಾನ ನಿಲ್ದಾಣ ಕಾರ್ಯ ಸ್ಥಗಿತಗೊಂಡಿದೆ. ಇದರಿಂದ ಕಳೆದ ಕೆಲ ವರ್ಷಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅತೀವವಾದ ಒತ್ತಡ ಬೀಳುತ್ತಿದೆ. ಒತ್ತಡ ತಗ್ಗಿಸುವ ಸಲುವಾಗಿ, ವಾಣಿಜ್ಯ ಉದ್ದೇಶಕ್ಕಾದರೂ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಅವಕಾಶ ನೀಡಬೇಕು ಎಂದು ಒತ್ತಡ ಕೇಳಿ ಬರುತ್ತಿದೆ. ಈಗಲಾದರೂ ಕೇಂದ್ರ ಸರ್ಕಾರ ಒಪ್ಪಲಿದೆಯೇ ಎಂದು ಕಾದುನೋಡಬೇಕಿದೆ.

ಹೊರವರ್ತುಲ ರಸ್ತೆ
ಬೆಂಗಳೂರು ನಗರದಲ್ಲಿ ಈಗಿರುವ ರಿಂಗ್ ರಸ್ತೆ ನೆಪಮಾತ್ರಕ್ಕೆ ರಿಂಗ್ ರಸ್ತೆಯಾಗಿದೆ. ರಿಂಗ್ ರಸ್ತೆಯ ಬಹುತೇಕ ರಸ್ತೆಗಳು ನಗರದೊಳಗಿನ ಪ್ರಮುಖ ರಸ್ತೆಗಳಾಗಿವೆ. ಹೀಗಾಗಿ ಬೆಂಗಳೂರು ನಗರದೊಳಗಿನ ಸಂಚಾರ ದಟ್ಟಣೆ ನಿಯಂತ್ರಿಸಲು, ಫೆರಿಫೆರಲ್ ರಿಂಗ್ ರಸ್ತೆಯ ಅಗತ್ಯ ಹೆಚ್ಚಿದೆ. ಇದಕ್ಕೆ ನೆರವು ನೀಡುವುದಾಗಿ ಹಿಂದೊಮ್ಮೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದರು. ಕಳೆದೊಂದು ದಶಕದಿಂದಲೇ ರಾಜ್ಯ ಸರ್ಕಾರ ಈ ಬಗ್ಗೆ ವ್ಯರ್ಥ ಪ್ರಯತ್ನ ಮಾಡುತ್ತಿದೆ. ಈಬಾರಿಯಾದರೂ ಕೇಂದ್ರ ಸರ್ಕಾರ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಿದೆಯೇ ಎಂದು ಕಾದುನೋಡಬೇಕಿದೆ.

ಐಐಟಿ:ಬಹುದಿನದ ಕೂಗು
ಬೆಂಗಳೂರು ಮಹಾನಗರದಲ್ಲಿ ಈಗಾಗಲೇ ಪ್ರತಿಷ್ಠಿತ ಐಐಎಂ ಹಾಗೂ ಐಐಎಸ್ಸಿ ಇದೆ, ಆದರೆ ಸಿಲಿಕಾನ್ ನಗರಿಯಲ್ಲಿ ಐಐಟಿ ಶಿಕ್ಷಣ ಸಂಸ್ಥೆಯೇ ಇಲ್ಲದಿರುವುದು ಆಶ್ಚರ್ಯ ಮೂಡಿಸಿದೆ. ಕಳೆದ ಸಾಕಷ್ಟು ವರ್ಷಗಳಿಂದ ಬೆಂಗಳೂರಿನಲ್ಲೊಂದು ಐಐಟಿ ಕೇಂದ್ರ ಆರಂಭಿಸಲು ಮನವಿಗಳನ್ನು ಸಲ್ಲಿಸಲಾಗುತ್ತಲೇ ಇದೆ. ಆದರೆ ಕೇಂದ್ರ ಸರ್ಕಾರ ಇನ್ನೂ ಇದಕ್ಕೆ ಸ್ಪಂದಿಸಿಲ್ಲ. ಬೆಂಗಳೂರು ನಗರಕ್ಕೆ ಐಐಟಿ ಸ್ಥಾಪಿಸಬೇಕಿದೆ.
Recommended Video

ಇತರೆ ನಿರೀಕ್ಷೆಗಳು
*ನಗರದ ಘನತ್ಯಾಜ್ಯ ನಿರ್ವಹಣೆಗೆ ನೆರವು
*ಎಚ್ಎಎಲ್ ಸೇರಿದಂತೆ ವಿಮಾನಯಾನ ಕೈಗಾರಿಕೆಗಳ ಅಭಿವೃದ್ಧಿಗೆ ನೆರವು
*ಬೆಂಗಳೂರನ್ನು ಹಾದುಹೋಗುವ ಬುಲೆಟ್ ರೈಲು ಯೋಜನೆಗೆ ಅಸ್ತು
*ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇನ್ನಷ್ಟು ಉತ್ತೇಜನ
*ಬೆಂಗಳೂರು ನಗರದಲ್ಲಿ ಏಮ್ಸ್ ಸ್ಥಾಪನೆ












Click it and Unblock the Notifications