'ಕಪ್ಪುಹಣ ಹೆಚ್ಚಾಗಲು ಮಹಿಳೆಯರೇ ಕಾರಣ' ಇದಪ್ಪಾ ಮಾತು!
ಬೆಂಗಳೂರು, ನವೆಂಬರ್28: "ಕಪ್ಪು ಹಣ ಹೆಚ್ಚಾಗಲು ಮಹಿಳೆಯರೇ ಕಾರಣ ಮಹಿಳೆಯರು ದುರಾಸೆಯಿಂದ ಆಸ್ತಿ, ಅಂತಸ್ತು, ಹಣ, ವಡವೆ ಎಂದು ಗಂಡಂದಿರನ್ನು ಪೀಡಿಸುತ್ತಾರೆ. ಪತಿರಾಯರು ಏನು ಮಾಡಬೇಕು ಸಂದಿಗ್ಧಕ್ಕೆ ಸಿಲುಕಿ ಅವರು ತಮ್ಮ ಮಡದಿ ಹೇಳಿದಂತೆ ಕೇಳಿ ಆಸ್ತಿಯನ್ನು ಮಾಡುತ್ತಾರೆ. ಹೀಗೆ ಎಲ್ಲರು ಮಾಡಿದರೆ ದೇಶದ ಅಭಿವೃದ್ಧಿ ಹೇಗೆ ತಾನೇ ಆಗುತ್ತದೆ" ಎನ್ನುತ್ತಾರೆ ಬೆಂಗಳೂರಿನ ನಿವಾಸಿ ಶಂಕರಾಚಾರಿ.
ಬೆಂಗಳೂರಿನಲ್ಲಿ ವ್ಯಾಪಾರಸ್ಥರಾದ 63 ವರ್ಷದ ಹಿರಿಯ ನಾಗರಿಕರಾದ ಇವರು, ಆಕ್ರೋಶ್ ದಿವಸವನ್ನು ವಿರೋಧಿಸಿ, ಅಪನಗದೀಕರಣಕ್ಕೆ ಬೆಂಬಲ ವ್ಯಕ್ತ ಪಡಿಸಿದರು. ದೇಶದ ಅಭಿವೃದ್ಧಿಗೆ ಎಲ್ಲರು ಸಹಕರಿಸಬೇಕು ಎಂದು ತಿಳಿಸಿದರು.
ಚಿನ್ನಾಭರಣ, ಆಸ್ತಿಗಾಗಿ ನಿಮ್ಮ ಮನೆಯವರೇನಾದರು ನಿಮ್ಮನ್ನು ಪೀಡಿಸುತ್ತಾರಾ ಎಂದರೆ ಅವರು ನಗುತ್ತಾ ನಮ್ಮ ಮನೆಯಲ್ಲಿ ಇಂತಹ ಪರಿಸ್ಥಿತಿಯೇನು ಇಲ್ಲ ಎಂದರು. [ಆಕ್ರೋಶ್ ದಿವಸಕ್ಕೆ ಕೂಲಾಗಿ ಉತ್ತರಿಸಿದ ಬೆಂಗಳೂರಿಗರು]

ಜತೆಗೆ ದೇಶದ ಸುಧಾರಣೆಗೆ ಆಗಿರುವ ನೋಟ್ ಬ್ಯಾನ್ ನಿಂದ ಯಾವುದೇ ತೊಂದರೆಯಾಗಿಲ್ಲ ಕಾಂಗ್ರೆಸ್ ಸುಮ್ಮನೆ ಆಕ್ರೋಶ್ ದಿವಸ್ ಹೆಸರಲ್ಲಿ ಜನರಿಗೆ ತೊಂದರೆ ನೀಡಲು ಮುಂದಾಗಿದೆ ಎಂದರು.
ಇನ್ನು ಇವರ ಸ್ನೇಹಿತರಾದ ಜಯನಗರದಲ್ಲಿ ಸುಮಾರು ಐವತ್ತು ವರ್ಷಗಳಿಂದ ಬೇಕರಿ ಬಿಸಿನೆಸ್ ಮಾಡಿಕೊಂಡಿರುವ ರಾಜಾರಾಮ್ ಅವರನ್ನು ಕೇಳಿದರೆ ರಾಜ್ಯ ರಾಜಕಾರಣವನ್ನೇ ಛೇಡಿಸಿ ಮಾತನಾಡಿದರು[ಬದುಕಿಗೆ ಬೇಕಷ್ಟು ಲಂಚ ತಿಂದ್ರೆ ತಪ್ಪೇನಿಲ್ಲ : ಹಿರಣ್ಣಯ್ಯ]
ದೇಶಕ್ಕೆ ಒಳ್ಳೆಯದಾಗಲೆಂದು ಅಪನಗದೀಕರಣವಾಗಿದೆ. ಇದರಿಂದ ಕಪ್ಪು ಹಣ ಹೊರಗೆ ಬಂದಿದೆ. ಇನ್ನೂ ಹೆಚ್ಚು ಹೊರಬರಬೇಕಿದೆ. ಸಾಮಾನ್ಯರು ದುರಾಸೆ ಪಟ್ಟರೆ ಏನಾಗುತ್ತದೆ ಎಂಬುದಕ್ಕೆ ಉತ್ತರ ಸಿಕ್ಕಿದೆ ಎಂದು ಹೇಳಿದರು ರಾಜಾರಾಂ.
ನನಗೆ ಸಣ್ಣ ಹುಡುಗನಿಂದಲೂ ಸರ್ಕಾರದ ಒಡನಾಟವಿದೆ. ದೇವರಾಜ ಅರಸು, ಕೆಂಗಲ್ ಹನುಮಂತಯ್ಯ ಮುಂತಾದವರು ರಾಜ್ಯಕ್ಕಾಗಿ ಬಹಳ ದುಡಿದಿದ್ದಾರೆ. ಆಗ ರಾಜಕಾರಣಿಗಳು ಸಾಮಾನ್ಯರಿಗೆ ಸುಲಭವಾಗಿ ಸಿಗುತ್ತಿದ್ದರು. ಈಗಿನ ಜನಪ್ರತಿನಿಧಿಗಳು ಗಗನ ಕುಸುಮದಂತೆ ವರ್ತಿಸುತ್ತಾರೆ. ಸಾಮಾನ್ಯ ಮನೆಯಲ್ಲಿದ್ದ ಕೆಲ ರಾಜಕಾರಣಿಗಳು 10-20 ವರ್ಷದಲ್ಲಿ ಕೋಟ್ಯಾಧಿಪತಿಗಳಾಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.
ಮೈಸೂರು ಮಹಾರಾಜರು ತಮ್ಮ ವಡವೆಯನ್ನೆಲ್ಲಾ ಒತ್ತೆಯಿಟ್ಟು ರಾಜ್ಯದ ಅಭಿವೃದ್ಧಿಗಾಗಿ ಕೆರೆ, ರೈಲು ಇತ್ಯಾದಿ ವ್ಯವಸ್ಥೆಗಳನ್ನು ತಂದರು. ವಿಶ್ವೇಶ್ವರಯ್ಯನವರು ದೇಶಕ್ಕಾಗಿ ದುಡಿದರು. ರಾಜ್ಯದ ರಾಜಕಾರಣಿಗಳಿಂದ ನಮಗೆ ಸಿಕ್ಕಿರುವುದು ಬರ ಅಷ್ಟೆ ಮತ್ತೇನು ಇಲ್ಲ ಎಂದು ತಿಳಿಸಿದರು.












Click it and Unblock the Notifications