ಮಾದನಾಯಕನಹಳ್ಳಿಯಲ್ಲಿ ಮಾಂಗಲ್ಯ ಸರವನ್ನು ದೋಚಿ ಕಳ್ಳರು ಪರಾರಿ
ಬೆಂಗಳೂರು, ಜ. 26: 'ನಿನ್ನ ಕಾರಿನ ಮೇಲೆ ಪೇಂಟ್ ಬಿದ್ದಿದೆ' ಎಂದು ತೋರಿಸಿ ಗಮನ ಬೇರಡೆ ಸೆಳೆದು ವ್ಯಕ್ತಿಯಿಂದ ಮೂರು ಲಕ್ಷ ರೂ. ನಗದು ಹಾಗೂ ಎರಡು ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರವನ್ನು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.
ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಸಮೀಪದ ಟಿಸಿಐ ಬಳಿ ಈ ಘಟನೆ ನಡೆದಿದೆ. ಮಾದವಾರ ನಿವಾಸಿ ಉಮೇಶ್ ಎಂಬುವರು ಹಣ ಕಳೆದುಕೊಂಡವರು. ಬ್ಯಾಂಕ್ನಲ್ಲಿ ಮೂರು ಲಕ್ಷ ಹಣ ಡ್ರಾ ಮಾಡಿಕೊಂಡು ಬಂದಿದ್ದರು. ಜತೆಗೆ ಎರಡು ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರವನ್ನು ತೆಗೆದುಕೊಂಡು ಕಾಂಡಿಮೆಂಟ್ನಲ್ಲಿ ಇಟ್ಟಿದ್ದರು. ಪಕ್ಕದಲ್ಲಿಯೇ ಕಾರನ್ನು ನಿಲ್ಲಿಸಿದ್ದರು.
ಪಲ್ಸರ್ ಬೈಕ್ನಲ್ಲಿ ಬಂದಿದ್ದ ಇಬ್ಬರು ಚೋರರು, ಕಾರಿನ ಮೇಲೆ ಪೇಂಟ್ ಚೆಲ್ಲಿಸಿದ್ದಾರೆ. ಆ ಬಳಿಕ ಅದನ್ನು ತೋರಿಸಿದ ಕಿರಾತಕರು, ನಿಮ್ಮ ಕಾರಿನ ಮೇಲೆ ಪೇಂಟ್ ಬಿದ್ದಿದೆ ಎಂದು ಗಮನ ಬೇರಡೆ ಸೆಳೆದಿದ್ದಾರೆ. ಕಾಂಡಿಮೆಂಟ್ನಿಂದ ಹೊರ ಬರುತ್ತಿದ್ದಂತೆ ನಗದು ಹಣವಿದ್ದ ಬ್ಯಾಗು ಮತ್ತು ಚಿನ್ನದ ಸರ ಎತ್ತಿಕೊಂಡು ಎಸ್ಕೇಪ್ ಆಗಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಕೂಡ ಸೆರೆಯಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಒಂದೇ ದಿನ ಮೂರು ರಾಬರಿ:
ಬೆಂಗಳೂರಿನಲ್ಲಿ ಒಂದೇ ದಿನ ಮೂರು ಕಡೆ ದರೋಡೆ ಮಾಡಿದ್ದ ಆರು ದರೋಡೆಕಾರರ ಗ್ಯಾಂಗ್ನ್ನು ಜೆಪಿನಗರ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ, ಭಾನು ಪ್ರಕಾಶ್, ಯೂನಿಸ್ ಹಾಗೂ ಮೂವರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಬಂಧನಕ್ಕೆ ಒಳಗಾಗಿದ್ದಾರೆ. ಕಳೆದ ವಾರ ಪುಟ್ಟೇನಹಳ್ಳಿ, ಜೆಪಿ ನಗರ ಸೇರಿದಂತೆ ಮೂರು ಕಡೆ ದರೋಡೆ ಮಾಡಿದ್ದರು. ಇವರ ಬಂಧನದಿಂದ ಬೆಂಗಳೂರಿನಲ್ಲಿ 20 ಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿವೆ. ಬಂಧಿತರಿಂದ 37 ಲಕ್ಷ ರೂ. ಮೌಲ್ಯದ 23 ಬೈಕ್ ಹಾಗೂ ಹನ್ನೆರಡು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.