ಕನ್ನಡ ಮಾತನಾಡದ ಕಾಶ್ಮೀರಿ ಯುವಕರ ಮೇಲೆ ಹಲ್ಲೆ
ಬೆಂಗಳೂರು, ಡಿಸೆಂಬರ್ 19: ಕಾಶ್ಮೀರಿ ಯುವಕ ಮತ್ತು ಆತನ ಸಹೋದರನ ಮೇಲೆ ಕನ್ನಡ ಮಾತನಾಡದೇ ಇದ್ದ ಕಾರಣಕ್ಕೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಾರದ ಹಿಂದೆ ನಡೆದ ಈ ಘಟನೆ ತಡವಾಗಿ ಸೋಮವಾರ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
"ಕಾಶ್ಮೀರಿ ಯುವಕರ ಮೇಲೆ ದಾಳಿ ನಡೆಸಿದ ಮಹೇಶ್ ಮತ್ತು ಹರೀಶ್ ಎಂಬ ಯುವಕರನ್ನು ಬಂಧಿಸಲಾಗಿದೆ. ಇಬ್ಬರೂ ಈಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ," ಎಂದು ಬೆಂಗಳೂರು ಉತ್ತರ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಮಹೇಶ್ ಫ್ಯಾಷನ್ ಡಿಸೈನರ್ ಆಗಿದ್ದು ಹರೀಶ್ ಚಾಲಕನಾಗಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 11ರಂದು ಬೆಳಿಗ್ಗೆ ಇಲ್ಲಿನ ಕಾಲೇಜೊಂದರಲ್ಲಿ ಅಧ್ಯಯನ ಮಾಡುತ್ತಿರುವ ಕಾಶ್ಮೀರಿ ಯುವಕ ಮತ್ತು ಆತನ ಸಹೋದರ ಕಾರೊಂದರಲ್ಲಿ ಮನೆಗೆ ವಾಪಾಸಾಗುತ್ತಿದ್ದರು.
ದಾರಿ ಮಧ್ಯದಲ್ಲಿ ಕರೆ ಬಂದಿದ್ದರಿಂದ ಯುವಕರು ಕಾರು ನಿಲ್ಲಿಸಿ ಫೋನಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಮಹೇಶ್ ಮತ್ತು ಹರೀಶ್ ಕನ್ನಡದಲ್ಲಿ ಕಾಶ್ಮೀರಿ ಯುವಕರ ಬಳಿ ಏನನ್ನೋ ಕೇಳಿದ್ದಾರೆ.
ಈ ಸಂದರ್ಭ ಕಾಶ್ಮೀರಿ ಯುವಕರು ನಮಗೆ ಕನ್ನಡ ಬರುವುದಿಲ್ಲ ಎಂದಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ಮಹೇಶ್ ಮತ್ತು ಹರೀಶ್ ಕನ್ನಡದಲ್ಲಿ ಮಾತನಾಡಲು ಬುದ್ದಿವಾದ ಹೇಳಿದ್ದಾರೆ.
"ಇದಕ್ಕೆ ಕಾಶ್ಮೀರಿ ಯುವಕರು ಆಕ್ಷೇಪ ವ್ಯಕ್ತಪಡಿಸಿದಾಗ, ಮಹೇಶ್ ಮತ್ತು ಹರೀಶ್ ತಮ್ಮ ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡು ಕಲ್ಲಿನಿಂದ ಯುವಕರ ಮೇಲೆ ದಾಳಿ ನಡೆಸಿದ್ದಾರೆ. ಜತೆಗೆ ಕಾರಿಗೂ ಹಾನಿ ಮಾಡಿದ್ದಾರೆ," ಎಂದು ಕಾಶ್ಮೀರಿ ಯುವಕರ ಹೆಸರು ಹೇಳಲಿಚ್ಚಿಸದ ಗೆಳೆಯ ಹೇಳಿಕೆ ನೀಡಿದ್ದಾನೆ.
ಘಟನೆಯಲ್ಲಿ ಕಾಶ್ಮೀರಿ ಯುವಕರಿಗೆ ಗಾಯವಾಗಿದ್ದು ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications