ಆರ್.ಆರ್.ನಗರ ಚುನಾವಣೆ: ಗೆದ್ದರೆ ಒಂದು, ಸೋತರೆ ಇನ್ನೊಂದು: ಉಭಯ ಸಂಕಟದಲ್ಲಿ ಸಿಎಂ ಬಿಎಸ್ವೈ
ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಗೆ ವೇದಿಕೆ ಸಿದ್ದವಾಗಿದೆ. ನವೆಂಬರ್ ಮೂರರಂದು ನಡೆಯಲಿರುವ ಈ ಚುನಾವಣೆಗೆ ಮೂರೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಯಡಿಯೂರಪ್ಪ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಚುನಾವಣೆಯಲ್ಲಿ, ನಾಮಪತ್ರ ಸಲ್ಲಿಸುವ ದಿನದಂದೇ ರಾಜಕೀಯ ನಾಯಕರುಗಳ ಮಾತಿನ ಸಮರ ಜೋರಾಗಿಯೇ ಆರಂಭವಾಗಿದೆ.
ಉಪಚುನಾವಣೆ ಪ್ರಚಾರದ ಅಬ್ಬರ ಹೇಗಿರುತ್ತೆ? ಮೊದಲ ದಿನವೇ ಮುನ್ಸೂಚನೆ ಕೊಟ್ಟ ಆರ್.ಅಶೋಕ್, ಡಿಕೆಶಿ
ಬಿಜೆಪಿಯವರು ನೇರವಾಗಿ ಡಿಕೆಶಿಯನ್ನು ಟಾರ್ಗೆಟ್ ಮಾಡಿದರೆ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ, ಪ್ರಮುಖವಾಗಿ ಕಾಂಗ್ರೆಸ್ ವಿರುದ್ದ ಕಿಡಿಕಾರುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಮಪತ್ರ ಸಲ್ಲಿಸುವ ವೇಳೆ, ಬಿಎಸ್ವೈ ಸಚಿವ ಸಂಪುಟವೇ ಅವರ ಜೊತೆಗಿತ್ತು.
ಈ ಉಪಚುನಾವಣೆ, ಅದರಲ್ಲೂ ಆರ್.ಆರ್.ನಗರ ಕ್ಷೇತ್ರದ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಸಿಎಂ ಯಡಿಯೂರಪ್ಪನವರಿಗೆ ಒಂದು ತೊಂದರೆ, ಸೋತರೆ, ಇನ್ನೊಂದು ಸಂಕಷ್ಟ. ಮುಂದೆ ಓದಿ..
ರಾಜೀನಾಮೆ ನೀಡಲು ಮುಂದಾಗಿದ್ದ ಶ್ರೀರಾಮುಲು ಸದ್ಯಕ್ಕೆ ಶಾಂತ: ಇದಕ್ಕೆ ಒಂದೇ ಒಂದು ಕಾರಣ
ಆಪರೇಷನ್ ಕಮಲ
ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಮುನಿರತ್ನ ಕೂಡಾ ಕಾರಣ. ಇವರ ಜೊತೆಗಿದ್ದ ಬಹುತೇಕ ಮುಖಂಡರು ಮತ್ತೆ ಗೆದ್ದು ಸಚಿವರಾಗಿದ್ದಾರೆ. ಸೋತ ಇಬ್ಬರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ. ಪರಿಷತ್ತಿಗೆ ಆಯ್ಕೆಯಾದ ಇಬ್ಬರು, ಸಚಿವರಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ.
ವರಿಷ್ಠರ ತೀರ್ಮಾನವೇ ಅಂತಿಮ
ಮುಖ್ಯಮಂತ್ರಿ ಶಿಫಾರಸು ಮಾಡಿದರೂ, ವರಿಷ್ಠರ ತೀರ್ಮಾನವೇ ಅಂತಿಮ ಎನ್ನುವುದು ಗೊತ್ತಿರುವ ವಿಚಾರ. ಪರಿಸ್ಥಿತಿ ಹೀಗಿರುವಾಗ, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಮಾಡಲು ಯಡಿಯೂರಪ್ಪನವರು ಹರಸಾಹಸ ಪಡಬೇಕಿದೆ. ಇಂತಹ ಸ್ಥಿತಿ ಇರುವಾಗ, ಇನ್ನು, ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಗೆದ್ದು ಬಂದರೆ?
ಎಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ ನಾಗರಾಜ್
ಈಗಾಗಲೇ ಎಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ ನಾಗರಾಜ್, ಸಚಿವ ಸ್ಥಾನಕ್ಕಾಗಿ ಬೆಂಚ್ ನಲ್ಲಿ ಕಾಯುತ್ತಿದ್ದಾರೆ. ಸಂಪುಟ ವಿಸ್ತರಣೆ ಮಾಡಲು ದೆಹಲಿಗೆ ಬರಲು ಬಿಜೆಪಿ ವರಿಷ್ಠರಿಂದ ಯಡಿಯೂರಪ್ಪನವರಿಗೆ ಬುಲಾವ್ ಬರುತ್ತಲೇ ಇಲ್ಲ. ಮುನಿರತ್ನಗೆ ಟಿಕೆಟ್ ಕೊಡಿಸಲು ಹರಸಾಹಸ ಪಟ್ಟಿದ್ದ ಯಡಿಯೂರಪ್ಪಗೆ, ಮುನಿರತ್ನ ಗೆದ್ದು ಬಂದರೆ, ಸಚಿವ ಸ್ಥಾನ ಕೊಡಿಸುವ ಗುರುತರ ಜವಾಬ್ದಾರಿ ಹೆಗಲಮೇಲೇರಲಿದೆ.
Recommended Video
ಸೋತರೆ ಒಂದು, ಗೆದ್ದರೆ ಇನ್ನೊಂದು ತಲೆಬಿಸಿಯನ್ನು ಬಿಎಸ್ವೈ ಎದುರಿಸಬೇಕಾಗಿದೆ
ಹಾಗಂತ, ಈ ಉಪಚುನಾವಣೆಯನ್ನು ಸೋತರೆ, ಅವರ ಕುರ್ಚಿಗೆ ಸಂಚಕಾರ ಬಂದರೂ ಬರಬಹುದು. ಈಗಾಗಲೇ ಒಂದು ಉಪಚುನಾವಣೆಯನ್ನು ಭರ್ಜರಿಯಾಗಿ ಗೆದ್ದಿರುವ ಬಿಎಸ್ವೈಗೆ ಈ ಎರಡು ಕ್ಷೇತ್ರಗಳ ಚುನಾವಣೆಯೂ ಅಷ್ಟೇ ಮುಖ್ಯ. ಹಾಗಾಗಿ, ರಾಜರಾಜೇಶ್ವರಿ ನಗರದಲ್ಲಿ ಸೋತರೆ ಒಂದು, ಗೆದ್ದರೆ ಇನ್ನೊಂದು ತಲೆಬಿಸಿಯನ್ನು ಬಿಎಸ್ವೈ ಎದುರಿಸಬೇಕಾಗಿದೆ.