ರಾಜ್ಯಸಭೆ ಸ್ಥಾನ, ಕನ್ನಡಿಗರ ಸ್ವಾಭಿಮಾನ: ಟ್ವಿಟ್ಟರ್ ಅಭಿಯಾನ
ಬೆಂಗಳೂರು, ಮಾರ್ಚ್ 08: ಕನ್ನಡದ ಅಸ್ಮಿತೆಯ ಧ್ವನಿ ಮತ್ತೊಮ್ಮೆ ಹೊರಹೊಮ್ಮಿಸಲು ಸೋಷಿಯಲ್ ಮೀಡಿಯಾ ಈ ಬಾರಿ ವೇದಿಕೆಯಾಗುತ್ತಿದೆ. ರಾಜ್ಯದ ವಿಧಾನಸಭೆಯಿಂದ ರಾಜ್ಯ ಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕನ್ನಡಿಗರನ್ನೇ ಆಯ್ಕೆ ಮಾಡಬೇಕೆಂಬ ಧ್ವನಿ ಇದೀಗ ಟ್ವಿಟ್ಟರ್ ನಲ್ಲಿ ಆರಂಭವಾಗುತ್ತಿದೆ.
ಟ್ವಿಟರ್ ಅಭಿಯಾನವು ಮಾರ್ಚ್ 8ರಂದು ಸಂಜೆ 6ಗಂಟೆಯಿಂದ ಪ್ರಾರಂಭವಾಗಲಿದೆ. ಜನರೇ ನೇರವಾಗಿ ಪ್ರತಿನಿಧಿಗಳನ್ನು ಆರಿಸಿ ಕಳುಹಿಸುವ ಸಂಸತ್ತಿನ ಮನೆ ಲೋಕಸಭೆ. ಆದರೆ ಭಾರತವು ರಾಜ್ಯಗಳ ಒಕ್ಕೂಟವಾದ್ದರಿಂದ ರಾಜ್ಯಸಭೆಯಂಥಾ ಇನ್ನೊಂದು ಮೇಲ್ಮನೆಯ ಅಗತ್ಯವನ್ನು ಸಂವಿಧಾನದ ರಚನೆಯ ಸಮಯದಲ್ಲಿ ಮನಗಾಣಲಾಯಿತು.
ಆ ಸಮಯದಲ್ಲಿ ಈಗಾಗಲೇ ಇರೋ ಲೋಕಸಭೆಯ ಜೊತೆ ಇನ್ನೊಂದು ಯಾಕೆ ಬೇಕು?ಎಂದು ಸಂಸತ್ತಿನಲ್ಲಿ ದೊಡ್ಡ ಚರ್ಚೆಗಳೂ ನಡೆದಿತ್ತು.

ಕೊನೆಗೆ ದೇಶದ ವ್ಯವಸ್ಥೆ ಕಟ್ಟುವಾಗ ರಾಜ್ಯಗಳಿಗೆ ನೇರವಾಗಿ ಪಾಲ್ಗೊಳ್ಳಲು ಅನುಕೂಲ ಆಗಬೇಕು, ಇದು ಫೆಡರಲ್ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎನ್ನುವ ಕಾರಣಕ್ಕಾಗಿ ನೇರವಾಗಿ ರಾಜ್ಯಗಳನ್ನು ಪ್ರತಿನಿಧಿಸೋ, ಆಯಾ ರಾಜ್ಯಗಳ ಶಾಸಕರಿಂದಲೇ ಆಯ್ಕೆ ಮಾಡಲ್ಪಟ್ಟ ಸಂಸದರನ್ನು ಒಳಗೊಂಡ ರಾಜ್ಯಸಭೆಯನ್ನು ರೂಪಿಸಿ ರಚಿಸಲಾಯಿತು.
ಇದು ಹೇಗೆ ಫೆಡರಲ್? ಅನ್ನೋದಾದರೆ ಒಂದು ಸಣ್ಣ ಉದಾಹರಣೆ ನೋಡಬಹುದು- ಕರ್ನಾಟಕದ ವಿಧಾನಸಭೆಗೆ ಬಿಜೆಪಿ, ಕಾಂಗ್ರೆಸ್ ಜೊತೆ ಮತ್ತೊಂದು ಪ್ರಾದೇಶಿಕ ಪಕ್ಷವೂ ಒಂದಿಪ್ಪತ್ತು ಸೀಟು ಗೆಲ್ತು ಎಂದುಕೊಳ್ಳೋಣ. ಆದರೆ ಲೋಕಸಭಾ ಚುನಾವಣೇಲಿ ಆ ಪಕ್ಷಕ್ಕೆ ಒಂದೂ ಸ್ಥಾನವೂ ಬರಲಿಲ್ಲಾ ಅಂದ್ರೆ ಕೇಂದ್ರದಲ್ಲಿ ಆ ಪಕ್ಷದ ಅಸ್ತಿತ್ವವೇ ಇರುವುದಿಲ್ಲ.
ಅಂದರೆ ಯಾವುದೇ ಬಿಲ್ಲು ಜಾರಿಗೆ ತರುವುದರಲ್ಲಿ, ನಿಯಮಾ ರೂಪಿಸುವುದರಲ್ಲಿ ಆ ಪಕ್ಷದ ಪಾತ್ರವೇ ಇಲ್ಲವಾಗುತ್ತದೆ ಆ ಕಾರಣಕ್ಕೆ ರಾಜ್ಯದಲ್ಲಿ ಇಂತಿಷ್ಟು ಶಾಸಕರ ಸಂಖ್ಯಾಬಲ ಇದ್ದರೆ ರಾಜ್ಯಸಭೆಗೆ ಸಂಸದರನ್ನು ಆರಿಸಿ ಕಳುಹಿಸಬಹುದು.
ಹೀಗೆ ಆಯ್ಕೆ ಆಗುವವರ ಮಹತ್ವ ಏನು ಎಂದರೆ ಯಾವುದೇ ಕಾಯ್ದೆ ಜಾರಿಯಾಗಬೇಕಾದರೆ ನಿಯಮ ರೂಪಿತ ವಾಗಬೇಕಾದರೆ ರಾಜ್ಯಸಭೆಯಲ್ಲೂ ಅದು ಪಾಸ್ ಆಗಬೇಕು. ಭಾರತದ ಒಕ್ಕೂಟದಲ್ಲಿ ರಾಜ್ಯ ಸಭೆ ಬಹಳ ಮಹತ್ವದ್ದು. ಭಾರತ ಒಕ್ಕೂಟದ ಬಹುತೇಕ ಕಾಯಿದೆಗಳು ಜಾರಿಗೆ ಬರಲು ರಾಜ್ಯಸಭೆಯ ಅನುಮೋದನೆ ಅತ್ಯಗತ್ಯ.
ಇತ್ತೀಚಿನ ದಿನದಲ್ಲಿ ಹೈಕಮಾಂಡ್ ನ ಆಜ್ಞೆಯಿಂದಲೋ ಅಥವಾ ಇನ್ಯಾವುದೋ ಕಾರಣಕ್ಕೆ ಒಳಗಾಗಿ ರಾಜಕೀಯ ಪಕ್ಷಗಳು ಕರ್ನಾಟಕಕ್ಕೆ ಸಂಬಂಧವಿಲ್ಲದವರನ್ನು ರಾಜ್ಯಸಭೆಗೆ ಆರಿಸಿ ಕಳಿಸುತ್ತಿರುವುದನ್ನು ನಾವು ಕಂಡಿದ್ದೇವೆ. ರಾಜ್ಯ ಸಭೆಯಲ್ಲಿ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸಲು, ಕರ್ನಾಟಕ ಪರವಾದ ಕಾಯಿದೆಗಳನ್ನು ರೂಪಿಸಲು ಕರ್ನಾಟಕದ ಜನರೇ ಕರ್ನಾಟಕವನ್ನು ಪ್ರತಿನಿಧಿಸಬೇಕು, ಇದೇ ನಿಜವಾದ ಪ್ರಜಾಪ್ರಭುತ್ವ, ನಿಜವಾದ ಒಕ್ಕೂಟ ವ್ಯವಸ್ಥೆ.
ಇದೀಗ ಕರ್ನಾಟಕದ 4 ರಾಜ್ಯ ಸಭಾ ಸೀಟುಗಳಿಗೆ ಚುನಾವಣೆ ನಡೆಯುತ್ತಿದೆ. ಬನ್ನಿ ಎಲ್ಲರೂ ಒಟ್ಟಾಗಿ ಕರ್ನಾಟಕದ ರಾಜಕೀಯ ಪಕ್ಷಗಳಿಗೆ ಕರ್ನಾಟಕದವರನ್ನೇ ರಾಜ್ಯ ಸಭೆಗೆ ಆರಿಸಬೇಕೆಂದು ಇಂದು ಟ್ವಿಟ್ಟರ್ ನಲ್ಲಿ ನಡೆಯಲಿರುವ ಅಭಿಯಾನದಲ್ಲಿ #NammaSeatuNammaJana ಹ್ಯಾಶ್ಟ್ಯಾಗ್ ಬಳಸಿ ಒತ್ತಾಯಿಸೋಣ.












Click it and Unblock the Notifications