ಪದ್ಮನಾಭನಗರ ಅಭ್ಯರ್ಥಿ ಆಯ್ಕೆ; ತಿರುವು ಕೊಟ್ರಾ ಡಿಕೆಶಿ?
ಬೆಂಗಳೂರು, ಏಪ್ರಿಲ್ 18; ಬೆಂಗಳೂರು ನಗರದ ರಾಜಕೀಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಟ್ವಿಸ್ಟ್ ನೀಡಿದ್ದಾರೆಯೇ?. ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವಾಗ 2ನೇ ಪಟ್ಟಿಯಲ್ಲಿ ಪದ್ಮನಾಭನಗರ ಕ್ಷೇತ್ರಕ್ಕೆ ವಿ. ರಘುನಾಥ ನಾಯ್ಡು ಅಭ್ಯರ್ಥಿ ಎಂದು ಹೇಳಿದೆ. ಆದರೆ ಅವರು ನಾಮಪತ್ರ ಸಲ್ಲಿಸಲು ಬಿ-ಫಾರಂ ನೀಡಿಲ್ಲ.
ಪದ್ಮನಾಭನಗರ ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಆರ್. ಅಶೋಕ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಈ ಬಾರಿಯ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ಅವರಿಗೆ ಎರಡು ಕಡೆ ಸ್ಪರ್ಧಿಸಲು ಅವಕಾಶ ನೀಡಿದ್ದು ಕನಕಪುರದಲ್ಲಿ ಅವರು ಡಿ. ಕೆ. ಶಿವಕುಮಾರ್ ಎದುರಾಳಿಯಾಗಿದ್ದಾರೆ.

ಆದ್ದರಿಂದ ಆರ್. ಅಶೋಕ ಕಟ್ಟಿ ಹಾಕಲು ಅವರು ತಂತ್ರ ರೂಪಿಸಿದ್ದಾರೆ ಎಂಬ ಮಾತಿದೆ. ವಿ. ರಘುನಾಥ ನಾಯ್ಡು ಗುರುವಾರ ಬಿ-ಫಾರಂ ಪಡೆಯಲು ಕೆಪಿಸಿಸಿ ಕಚೇರಿಗೆ ಬಂದಿದ್ದರು. ಆದರೆ ಸಂಜೆಯ ತನಕ ಕಾದು ವಾಪಸ್ ಆಗಿದ್ದರು. ಬಳಿಕ ಡಿ. ಕೆ. ಶಿವಕುಮಾರ್ ಕರೆ ಮಾಡಿ ಕರೆಸಿಕೊಂಡು ಬಿ-ಫಾರಂ ನೀಡಿದ್ದರು. ವಿ. ರಘುನಾಥ ನಾಯ್ಡು ಡಿ. ಕೆ. ಶಿವಕುಮಾರ್ ಜೊತೆ ಫೋಟೋ ತೆಗೆಸಿಕೊಂಡಿದ್ದರು.
ಆದರೆ ಬಳಿಕ ಡಿ. ಕೆ. ಶಿವಕುಮಾರ್ ವಿ. ರಘುನಾಥ ನಾಯ್ಡು ಬಳಿ ಬಿ-ಫಾರಂ ವಾಪಸ್ ಪಡೆದು ಕಳಿಸಿದ್ದಾರೆ ಎಂಬುದು ಸದ್ಯದ ಸುದ್ದಿ. ಏಪ್ರಿಲ್ 18ರ ರಾತ್ರಿ ಬಂದು ಬಿ-ಫಾರಂ ಪಡೆಯಿರಿ ಎಂದು ಹೇಳಿ ಕಳಿಸಿದ್ದಾರೆ ಎಂಬ ಮಾಹಿತಿ ಇದೆ. ಮೇ 10ರಂದು ನಡೆಯುವ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನವಾಗಿದೆ.

ಏಪ್ರಿಲ್ 19ರ ಬುಧವಾರ ವಿ. ರಘುನಾಥ ನಾಯ್ಡು ನಾಮಪತ್ರ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಇನ್ನೂ ಬಿ-ಫಾರಂ ಕೈ ಸೇರಿಲ್ಲ. ಡಿ. ಕೆ. ಶಿವಕುಮಾರ್ ಲೆಕ್ಕಾಚಾರ ಬದಲು ಮಾಡಿ ಬೇರೆ ಅಭ್ಯರ್ಥಿ ಹಾಕಲಿದ್ದಾರೆಯೇ? ಎಂಬ ಅನುಮಾನ ಹುಟ್ಟುಹಾಕಿದೆ. ಈ ಹಿಂದೆ ಆರ್. ಅಶೋಕಗೆ ಎದುರಾಳಿಯಾಗಿ ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಇತ್ತು.
ಡಿ. ಕೆ. ಸುರೇಶ್ ಚುನಾವಣಾ ಕಣಕ್ಕಿಳಿಯಲು ಹೈಕಮಾಂಡ್ ನಾಯಕರ ಒಪ್ಪಿಗೆ ಸಿಕ್ಕಿಲ್ಲ ಎಂಬ ಮಾಹಿತಿ ಇದೆ. ಆರ್. ಅಶೋಕ ಕಟ್ಟಿ ಹಾಕಲು ಡಿ. ಕೆ. ಸುರೇಶ್ ಸರಿಯಾದ ಅಭ್ಯರ್ಥಿ ಎಂದು ಡಿ. ಕೆ. ಶಿವಕುಮಾರ್ ಮನವರಿಕೆ ಮಾಡಿಕೊಟ್ಟಿದ್ದಾರೆ. ಹೈಕಮಾಂಡ್ ಒಪ್ಪಿಗೆ ನೀಡಿದರೆ ಅಭ್ಯರ್ಥಿ ಬದಲಾದರೂ ಅಚ್ಚರಿ ಇಲ್ಲ.
ವಿ. ರಘುನಾಥ ನಾಯ್ಡು ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿ, "ಡಿ. ಕೆ. ಸುರೇಶ್ ಕಣಕ್ಕಿಳಿಯುವುದಾದರೆ ನಾನೇ ಕ್ಷೇತ್ರವನ್ನು ಬಿಟ್ಟು ಕೊಡುತ್ತೇನೆ. ಅವರು ಕಣಕ್ಕಿಳಿದರೆ 70 ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ. ಹೇಗೆ ಗೆಲ್ಲಿಸುತ್ತೇವೆ? ಎಂದು ಈಗಾಗಲೇ ಡಿ. ಕೆ. ಶಿವಕುಮಾರ್ಗೆ ವಿವರಣೆ ನೀಡಿದ್ದೇವೆ" ಎಂದು ಹೇಳಿದ್ದರು.
ಇರುವುದು ಒಬ್ಬರೇ ಸಂಸದರು?; ಡಿ. ಕೆ. ಸುರೇಶ್ 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಿಂದ ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ಏಕೈಕ ಸಂಸದರು ಇವರು. ಒಂದು ವೇಳೆ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿದೆ. ಇದರಿಂದಾಗಿ ಇರುವ ಒಬ್ಬ ಸಂಸದರನ್ನು ಪಕ್ಷ ಕಳೆದುಕೊಳ್ಳಲಿದೆಯೇ?.
ಡಿ. ಕೆ. ಸುರೇಶ್ ಸಹೋದರ ಡಿ. ಕೆ. ಶಿವಕುಮಾರ್ ಅನುಪಸ್ಥಿತಿಯಲ್ಲಿ ಕನಕಪುರ ಮತ್ತು ರಾಮನಗರದ ರಾಜಕೀಯವನ್ನು ನೋಡಿಕೊಳ್ಳುತ್ತಾರೆ. ಅದರಲ್ಲೂ ಈ ಬಾರಿಯ ಚುನಾವಣೆಯಲ್ಲಿ ಡಿ. ಕೆ. ಶಿವಕುಮಾರ್ ರಾಜ್ಯಾದ್ಯಂತ ಸಂಚಾರ ನಡೆಸಬೇಕು. ಅಲ್ಲದೇ ಕನಕಪುರದಲ್ಲಿ ಈ ಬಾರಿ ಅಶೋಕ ಎದುರಾಳಿ ಆಗಿರುವುದರಿಂದ ಆ ಕಡೆ ಹೆಚ್ಚಿನ ಗಮನ ನೀಡಬೇಕಿದೆ.












Click it and Unblock the Notifications