ವಾಹನ ಸವಾರರಿಗೆ ಸಂಕಷ್ಟ; ನೆಲಮಂಗಲ-ತುಮಕೂರು 10 ಪಥದ ರಸ್ತೆ ಕಾಮಗಾರಿ ಸ್ಥಗಿತ
ಬೆಂಗಳೂರು, ನವೆಂಬರ್ 27: ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖವಾದ ಹೆದ್ದಾರಿಯ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿ ಆರಂಭಿಸಿ ಎಂಬ ಸಚಿವರ ಸೂಚನೆಗೂ ಸಹ ಅಧಿಕಾರಿಗಳು ಬೆಲೆ ಕೊಟ್ಟಿಲ್ಲ. ಈ ಕಾಮಗಾರಿ ಆರಂಭವಾಗದ ಕಾರಣ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅಲ್ಲದೇ ರಸ್ತೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.
ನೆಲಮಂಗಲ- ತುಮಕೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 48ರ 10 ಪಥದ ರಸ್ತೆ ಕಾಮಗಾರಿ ಆರಂಭವಾಗಿಲ್ಲ. ನವೆಂಬರ್ 12ರಂದು ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ರಸ್ತೆಯನ್ನು ಪರಿಶೀಲಿಸಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಕ್ಷಣ ಕಾಮಗಾರಿ ಆರಂಭಿಸಲು ಸೂಚಿಸಿದ್ದರು.

ನಾಳೆಯೇ ಕಾಮಗಾರಿ ಆರಂಭಿಸುತ್ತೇವೆ ಎಂದು ಅಧಿಕಾರಿಗಳು ಹೇಳಿ 14 ದಿನಗಳು ಕಳೆದರೂ ಯಾವುದೇ ಕೆಲಸ ಪ್ರಾರಂಭವಾಗಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಗುತ್ತಿಗೆದಾರರ ಜೊತೆ ಸೇರಿ ಇತರರ ಜೊತೆ ಚರ್ಚಿಸಿ ಕಾಮಗಾರಿ ಆರಂಭಿಸಬೇಕು ಎಂದು ಸಚಿವ ವಿ. ಸೋಮಣ್ಣ ಸೂಚಿಸಿದ್ದರು. ಕಾಮಗಾರಿ ಪ್ರಾರಂಭದ ಭರವಸೆ ನೀಡಿದ್ದ ಅಧಿಕಾರಿಗಳು ಅದನ್ನು ಮರೆತು ಹೋಗಿದ್ದಾರೆ.
ರಸ್ತೆ ಅಪಘಾತ ಹೆಚ್ಚಳ: ಕಳೆದ ವರ್ಷ ಈ 44.04 ಕಿ. ಮೀ. ಮಾರ್ಗದಲ್ಲಿ 400 ರಸ್ತೆ ಅಪಘಾತ ನಡೆದಿದ್ದು, 150 ಜನರು ಸಾವನ್ನಪ್ಪಿದ್ದಾರೆ. 17 ಫ್ಲೈ ಓವರ್ ಮತ್ತು ಅಂಡರ್ ಪಾಸ್ ಕೆಲಸಗಳು ನಡೆಯಬೇಕಿದೆ. ಸರ್ವೀಸ್ ರಸ್ತೆಗಳು ಇಲ್ಲದ ಕಾರಣ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಮಾಮೂಲಿ ಎನ್ನುವಂತಾಗಿದೆ.
ವಿವಿಧ ಕಾರಣಕ್ಕೆ 10 ಪಥದ ರಸ್ತೆ ಕಾಮಗಾರಿ 4 ವರ್ಷಗಳಿಂದ ಪ್ರಗತಿ ಕಂಡಿಲ್ಲ. 6 ತಿಂಗಳಿನಿಂದ ಸಂಪೂರ್ಣ ಕಾಮಗಾರಿ ನಿಂತು ಹೋಗಿದೆ. ದಿನದಿಂದ ದಿನಕ್ಕೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸಾಲು ಸಾಲು ರಜೆಗಳು ಬಂದರೆ ಸಂಚಾರ ದಟ್ಟಣೆಯಲ್ಲಿ ಸಿಲುಕಿ ವಾಹನ ಸವಾರರು ಪರದಾಡಬೇಕಿದೆ. ಸಚಿವರು ಮಾರ್ಗದ ಪರಿಶೀಲನೆ ನಡೆಸಿ ಕೂಡಲೇ ಕಾಮಗಾರಿ ಆರಂಭಕ್ಕೆ ಸೂಚನೆ ಕೊಟ್ಟಿದ್ದರು. ಆದರೆ ಅಧಿಕಾರಿಗಳು ಬಳಿಕ ಇತ್ತ ತಲೆ ಹಾಕಿಲ್ಲ.
ಸಚಿವ ವಿ. ಸೋಮಣ್ಣ ನೆಲಮಂಗಲ ಮತ್ತು ತುಮಕೂರು ನಡುವಿನ ದೇವರ ಹೊಸಹಳ್ಳಿ, ಹಿರೇಹಳ್ಳಿ, ಮಂಚಕಲ್ಲು ಕುಪ್ಪೆ ಹಾಗೂ ಕ್ಯಾತಸಂದ್ರ ಪ್ರದೇಶಗಳಲ್ಲಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಪರಿಶೀಲಿಸಿದ್ದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದರು. ಆದರೆ ಬಳಿಕ ಯಾವುದೇ ಪ್ರಗತಿ ಕಂಡುಬಂದಿಲ್ಲ.
10 ಪಥದ ರಸ್ತೆ ಕಾಮಗಾರಿಯನ್ನು 844 ಕೋಟಿ ರೂ. ವೆಚ್ಚದಲ್ಲಿ 2022ರಲ್ಲಿ ಆರಂಭಿಸಲಾಗಿತ್ತು. 2025ರ ಆಗಸ್ಟ್ನಲ್ಲಿ ಪೂರ್ಣಗೊಳಿಸುವ ಗುರಿ ಇದೆ. ಆಗಸ್ಟ್ 20, 2024ರ ತನಕ ಈ ಹೆದ್ದಾರಿಯಲ್ಲಿ 280 ರಸ್ತೆ ಅಪಘಾತಗಳು ನಡೆದಿವೆ, 85 ಜನರು ಸಾವನ್ನಪ್ಪಿದ್ದಾರೆ. 310ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಈ ಮಾರ್ಗದಲ್ಲಿ ದೊಡ್ಡ ದೊಡ್ಡ ಲಾರಿಗಳು ಸಂಚಾರ ನಡೆಸುತ್ತವೆ. ಅವುಗಳು ರಸ್ತೆ ಬದಿ ನಿಂತು ಇರುವ ರಸ್ತೆಯನ್ನು ಅರ್ಧ ನುಂಗಿ ಹಾಕುತ್ತವೆ. 10 ಪಥದ ರಸ್ತೆ ನಿರ್ಮಾಣವಾದರೆ ನೆಲಮಂಗಲ-ತುಮಕೂರು ನಡುವಿನ ಸಂಚಾರ ಸುಲಭವಾಗಲಿದೆ. ಆದರೆ ಕಾಮಗಾರಿ ಯಾವಾಗ ಆರಂಭ? ಎಂಬ ಪ್ರಶ್ನೆಗೆ ಅಧಿಕಾರಿಗಳೇ ಉತ್ತರಿಸಬೇಕು.












Click it and Unblock the Notifications