ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ಗೆ ಮತ್ತೆ ಸಂಕಷ್ಟ..!
ಬೆಂಗಳೂರು, ನ.15. ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ಗೆ ಮತ್ತೆ ಸಂಕಷ್ಟ ಎದುರಾಗಿದೆ.
ಶಾಸಕ ಎನ್.ಎ.ಹ್ಯಾರಿಸ್ ಪುತ್ರರೂ ಆಗಿರುವ ನಲಪಾಡ್ ಇನ್ನೇನು ಚುನಾವಣೆ ಹತ್ತಿರವಾಗುತ್ತಿರುವ ಸಮಯದಲ್ಲಿ ಹಳೆಯ ಪ್ರಕರಣದಲ್ಲಿ ವಿಚಾರಣೆಗಳನ್ನು ಎದುರಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಇದು ಅವರಿಗೂ ಮತ್ತು ಪಕ್ಷಕ್ಕೂ ಇಬ್ಬರಿಗೂ ಮುಜುಗರ ಉಂಟು ಮಾಡಲಿದೆ ಎನ್ನಲಾಗಿದೆ. ಆದರೆ ವಿಚಾರಣೆ ಎದುರಿಸದೆ ಬೇರೆ ದಾರಿ ಇಲ್ಲ ಏಕೆಂದರೆ, ವಿಚಾರಣೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಣೆ ಮಾಡಿಲ್ಲ.
ಆ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದುವರಿಸಲು ಸೆಷನ್ಸ್ ಕೋರ್ಟ್ ನಿರ್ಧರಿಸಿದೆ. ಜೊತೆಗೆ ಪ್ರಕರಣದಲ್ಲಿ ವಿಶೇಷ ಅಭಿಯೋಜಕರಾಗಿ ಹಿರಿಯ ನ್ಯಾಯವಾದಿ ಎಂ.ಎಸ್. ಶ್ಯಾಮ್ ಸುಂದರ್ ಮುಂದುವರಿಕೆಗೆ ಅನುಮತಿ ನೀಡಿದೆ.
ನಾಲ್ಕು ವರ್ಷಗಳ ಹಿಂದೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು ಈ ಪ್ರಕರಣ. ನ್ಯಾ. ನಟರಾಜ್ ಅವರಿದ್ದ ಹೈಕೋರ್ಟ್ ನ್ಯಾಯಪೀಠದ ಈ ಕುರಿತು ಆದೇಶ ನೀಡಿದೆ.

ಆದರೆ ನಲಪಾಡ್ ಪರ ವಕೀಲರು, ಶ್ಯಾಮ್ ಸುಂದರ್ ಈಗ ಹಿರಿಯ ವಕೀಲರಾಗಿರುವ ಹಿನ್ನೆಲೆಯಲ್ಲಿ ಅವರು ಎಸ್ಪಿಪಿಯಾಗಿ ಮುಂದುವರಿಯುವಂತಿಲ್ಲ ಎಂದು ನಲಪಾಡ್ ತಕರಾರು ಎತ್ತಿದ್ದಾರೆ. ಆದರೆ ನಲಪಾಡ್ ಪರ ವಕೀಲರ ಆಕ್ಷೇಪ ತಳ್ಳಿಹಾಕಿದ ಕೋರ್ಟ್ ಸಾಕ್ಷಿಗಳ ವಿಚಾರಣೆ ಮುಂದುವರಿಸಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶ ನೀಡಿದೆ.
ಪ್ರಕರಣವೇನು?: ಶಾಸಕ ಎನ್ ಎ ಹ್ಯಾರೀಸ್ ಪುತ್ರನಾದ ಮೊಹಮದ್ ನಲಪಾಡ್ ಮತ್ತು ಅವರ ಸಹಚರರು ನಗರದ ಯುಬಿ ಸಿಟಿಯ ಫರ್ಜಿ ಕಫೆಯಲ್ಲಿ 2018ರ ಫೆ.17ರಂದು ರಾತ್ರಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಲಪಾಡ್ ಮತ್ತು ಆತನ ಸಹಚರರನ್ನು ಬಂಧಿಸಿದ್ದರು.
ನಲಪಾಡ್ ಮತ್ತು ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್ 341, 506, 143, 144, 146, 147, 326 ಮತ್ತು 504 ಅನ್ವಯ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
2018ರ ಜೂ.14ರಂದು ಹೈಕೋರ್ಟ್ ಜಾಮೀನು ನೀಡುವಾಗ ಆರೋಪಿ ಬೆಂಗಳೂರು ನಗರದ ನ್ಯಾಯಾಲಯ ವ್ಯಾಪ್ತಿ ಬಿಟ್ಟು ಹೊರಗೆ ಹೋಗಬಾರದೆಂಬ ಷರತ್ತನ್ನು ವಿಧಿಸಿತ್ತು.
ನಂತರ ಹೈಕೋರ್ಟ್ ಆರೋಪಿಗೆ ಮೆಕ್ಕಾಗೆ ತೆರಳಲು ಜಾಮೀನು ಸಡಿಲಿಕೆ ಮಾಡಿತ್ತು. ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿತ್ತು. ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಲಪಾಡ್ 116 ದಿನಗಳ ಜೈಲು ವಾಸದ ಬಳಿಕ ಜಾಮೀನು ಪಡೆದಿದ್ದರು.
ಪ್ರಕರಣದಲ್ಲಿ ಬಂಧಿತನಾಗಿದ್ದ ಮೊಹಮ್ಮದ್ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 2 ಬಾರಿ ಸೆಷನ್ಸ್ ಕೋರ್ಟ್, ಒಂದು ಬಾರಿ ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿತ್ತು.

ಆ ತಡೆಯಾಜ್ಞೆಯನ್ನು ವಿಸ್ತರಣೆ ಮಾಡುತ್ತಾ ಬಂದಿದ್ದರಿಂದ ನಲಪಾಡ್ ಹೊರೆಗೆ ಆರಾಮಾಗಿದ್ದರು. ಆದರೆ ಇದೀಗ ತಡೆಯಾಜ್ಞೆ ವಿಸ್ತರಣೆ ಮಾಡದೇ ಇರುವುದರಿಂದ ವಿಚಾರಣೆಯನ್ನು ಎದುರಿಸಲೇಬೇಕಾಗಿದೆ.
ಬೆಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ನಲಪಾಡ್ ಅವರನ್ನು 6 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಸದಸ್ಯತ್ವದಿಂದ ಉಚ್ಚಾಟಣೆ ಮಾಡಲಾಗಿತ್ತು.
ಈ ನಡುವೆ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮುಂದಿನ ವಿಧಾನಸಭೆ ಚುನಾವಣೆ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮೊಹಮ್ಮದ್ ಹ್ಯಾರಿಸ್ ನಲಪಾಡ್ ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದಾರೆ.
ಮೊಹಮ್ಮದ್ ಹ್ಯಾರಿಸ್ ನಲಪಾಡ್ ತಂದೆ ಎನ್. ಎ. ಹ್ಯಾರಿಸ್ ಶಾಂತಿನಗರ ಕ್ಷೇತ್ರದ ಶಾಸಕರು. ಆದರೆ ನಲಪಾಡ್ ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.












Click it and Unblock the Notifications